BBMP
Loading ...

BESCOM

ಮಾಲೂರು: ಹಳೆಯ ವಿದ್ಯುತ್‌ ಮೀಟರ್‌ಗಳನ್ನು ತೆಗೆದು ಹೊಸ ಡಿಜಿಟಲ್‌ ಮೀಟರ್‌ ಹಾಕುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ವಿದ್ಯುತ್‌ ಖಾಸಗೀಕರಣ ವಿಧೇಯಕವನ್ನು ಕೂಡಲೇ ವಾಪಸು ಪಡೆಯಬೇಕು. ಪ್ರತಿ ತಿಂಗಳು ರೈತರು, ಹಾಗೂ ಅಧಿಕಾರಿಗಳ ಕುಂದು ಕೊರತೆಗಳ ಬಗ್ಗೆ ಚರ್ಚೆ ಮಾಡಲು ಸಭೆಯನ್ನು ಕರೆಯಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ನಗರದ ಬೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಬೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ , ಜಿಲ್ಲಾಧ್ಯಕ್ಷ ಬೆಡಿಶೆಟ್ಟಹಳ್ಳಿ ರಮೇಶ್‌ ನೇತೃತ್ವದಲ್ಲಿ ಜಮಾಯಿಸಿದ ಪದಾಧಿಕಾರಿಗಳು, ರಾಜ್ಯದಲ್ಲಿ ಸರಕಾರ ವಿದ್ಯುತ್‌ ಬಳಕೆದಾರರನ್ನು ಸುಲಿಗೆ ಮಾಡಲು ಹೊರಟಿದೆ. ಸರಕಾರ ಜಾರಿ ಮಾಡಿರುವ 200 ಯೂನಿಟ್‌ ವಿದ್ಯುತ್‌ ಉಚಿತ ಯೋಜನೆಯಲ್ಲಿ ಮೈಮರೆತು ಜನರನ್ನು ಮೋಸ ಮಾಡುತ್ತಿದೆ.

ಗ್ಯಾರಂಟಿ ಯೋಜನೆ ಜಾರಿಗೆ ಮೊದಲು ವಿದ್ಯುತ್‌ ಪ್ರಾರಂಭಿಕ ಶುಲ್ಕ 3.80 ರೂ. ಇದ್ದದ್ದು, ಪ್ರಸ್ತುತ 5.80 ರೂ.ಗೆ ನಿಗದಿಪಡಿಸಲಾಗಿದೆ. ಒಂದು ಕಿಲೋ ವ್ಯಾಟ್‌ ವಿದ್ಯುತ್‌ ಸಂಪರ್ಕ ಪಡಿದರೇ 40 ರೂ. ಮಿನಿಮಮ್‌ ಚಾರ್ಜ್ ಇದ್ದದ್ದು 145 ರೂಪಾಯಿಗಳಿಗೆ ‌ ಹೆಚ್ಚಿಸಲಾಗಿದೆ. ಮಿನಿಮಮ್‌ ಚಾರ್ಜ್‌ ಮತ್ತು ಯಾನಿಟ್‌ ಧರಗಳನ್ನು ಹೆಚ್ಚಿಸಿರುವುದು ಕೆಇಆರ್‌ಸಿ ಮತ್ತು ಬೆಸ್ಕಾಂ ಇಲಾಖೆಗಳ ಆಘಾತಕಾರಿ ನಡೆಯಾಗಿದೆ. ಈ ರೀತಿ ವಿದ್ಯುತ್‌ ಬಳಕೆದಾರರ ಗಮನಕ್ಕೆ ತರದೆ ಏಕಮುಖವಾಗಿ ತೀರ್ಮಾನ ಮಾಡುತ್ತಿರುವುದು ಸಾರ್ವಜನಿಕರ ಶೋಷಣೆಯ ಕ್ರಮವಾಗಿದೆ.

ಹಳೆಯ ವಿದ್ಯುತ್‌ ಮೀಟರ್‌ಗಳನ್ನು ಹಂತ ಹಂತವಾಗಿ ಬದಲಾಯಿಸಿ ಡಿಜೀಟಲ್‌ ಮೀಟರ್‌ ಅಳವಡಿಸುವುದಾಗಿ ಕೆಇಆರ್‌ಸಿ ಮತ್ತು ಬೆಸ್ಕಾಂ ಇಲಾಖೆಗಳು ಹೇಳುತ್ತಿರುವುದು ಸಾರ್ವಜನಿಕರಿಗೆ ಮಾಡುತ್ತಿರುವ ಮೋಸ. ಸರಿಯಾಗಿ ಇರುವ ವಿದ್ಯುತ್‌ ಮೀಟರುಗಳನ್ನು ಬದಲಿಸಿ ಡಿಜಿಟಲ್‌ ಮೀಟರ್‌ ಅಳವಡಿಸುತ್ತೇವೆ ಎನ್ನುವುದೇ ಒಂದು ದೊಡ್ಡ ಭ್ರಷ್ಟಾಚಾರವಾಗಿದೆ.

900 ರೂಪಾಯಿಗಳ ಬೆಲೆಯ ಮೀಟರನ್ನು 10,000 ರೂ.ಗೆ ಖರೀದಿ ಮಾಡಿ ಅಳವಡಿಸುತ್ತಿರುವುದೇ ಮೋಸ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಹೇಳಿದ್ದರೂ ನಿಲ್ಲಿಸದೆ ಮುಂದುವರಿಸಿರುವುದು ಸರಕಾರ ಹಾಗೂ ಬೆಸ್ಕಾಂ ಇಲಾಖೆಯ ಕೆಟ್ಟ ನಡುವಳಿಕೆ ಆಗಿರುತ್ತದೆ. ಬೆಸ್ಕಾಂ ಇಲಾಖೆಯು ವಿದ್ಯುತ್‌ ಮೀಟರ್‌ ಅಳವಡಿಸುವುದನ್ನು ಕೂಡಲೇ ನಿಲ್ಲಿಸಬೇಕು. ಬೆಸ್ಕಾಂ ಇಲಾಖೆಯು ಮೀಟರ್‌ ಅಳವಡಿಸುವುದನ್ನು ಮುಂದುವರಿಸಿದರೇ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಸಾರ್ವಜನಿಕರು ಇಲಾಖೆಯ ವಿರುದ್ಧ ಬೃಹತ್‌ ಜನಾಂದೋಲನ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಯುವ ಪ್ರ. ಕಾರ್ಯದರ್ಶಿ ಆನಂದ್‌ ಕುಮಾರ್‌, ತಾ. ಅಧ್ಯಕ್ಷ ತಿಪ್ಪಸಂದ್ರ ಹರೀಶ್‌, ದಿನ್ನೆಹೊಸಹಳ್ಳಿ ರಮೇಶ್‌, ನಿದರಮಂಗಲ ನಾಗಪ್ಪ, ಸಾದಪ್ಪ, ಮುನಿಯಪ್ಪ, ಮುನಿರಾಜು, ಕರಿಸಂದ್ರ ನಾರಾಯಣಸ್ವಾಮಿ, ಚಂದ್ರಪ್ಪ, ಮುನಿ ನಾರಾಯಣಪ್ಪ, ಸೀನಪ್ಪ, ನರಸಿಂಹಯ್ಯ ಇನ್ನಿತರರು ಹಾಜರಿದ್ದರು.

ಫುಟ್​ಪಾತ್​ ಬಿಟ್ಟು ರಸ್ತೆಗಿಳಿಯುವಂತಿಲ್ಲ: ಹಬ್ಬದಲ್ಲೂ ಸುಗಮ ಸಂಚಾರ, ವಿಜಯನಗರ, ಕಾಮಾಕ್ಷಿಪಾಳ್ಯ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

Leave a Reply

Your email address will not be published. Required fields are marked *