BBMP
Loading ...

Bescom Bribe

Greater Bengaluru News9 : ಕೃಷಿ ಪಂಪ್‍ಸೆಟ್‍ಗೆ ವಿದ್ಯುತ್ ಪರಿವರ್ತಕ ಅಳವಡಿಸಲು ರೈತನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಮಾಡದಕೆರೆ ಬೆಸ್ಕಾಂ ಕಚೇರಿ ಜ್ಯೂನಿಯರ್ ಎಂಜಿನಿಯರ್ ಲೋಕಾಯುಕ್ತ ಪೋಲೀಸರ ಬಲೆಗೆ ಬಿದ್ದಿರುವ ಘಟನೆ ಶನಿವಾರ ನಡೆದಿದೆ.

ತಾಲೂಕಿನ ಮಾಡದಕೆರೆ ಬೆಸ್ಕಾಂ ಕಚೇರಿಯಲ್ಲಿ ಜ್ಯೂನಿಯರ್ ಎಂಜಿನಿಯರ್ ಮಧು ಬಂಧಿತ ಅಧಿಕಾರಿ. ತಾಲೂಕಿನ ನಾಗಯ್ಯನಹಟ್ಟಿ ಗ್ರಾಮದ ರಾಮಚಂದ್ರಪ್ಪ ಅವರು ಸೀರನಕಟ್ಟೆ ವ್ಯಾಪ್ತಿಯ ಸರ್ವೇ ನಂ 87/1 ರಲ್ಲಿ 1 ಎಕರೆ ಜಮೀನಿನಲ್ಲಿ ಹಾಗೂ ಅಕ್ಕಪಕ್ಕದ 4 ಜಮೀನುಗಳಿಗೆ ಸೇರಿಸಿ 10-15 ವರ್ಷಗಳ ಹಿಂದೆ ಬೆಸ್ಕಾಂ ಅನುಮತಿ ಪಡೆದು ಜಮೀನಿನಲ್ಲಿ ಟ್ರಾನ್ಸ್‌ಫಾರ್ಮರ್ (ಟಿಸಿ) ಅಳವಡಿಸಿದ್ದರು. ಜ.22ರಂದು ಟಿಸಿ ಸುಟ್ಟುಹೋಗಿತ್ತು. ಈ ಟಿಸಿ ಬದಲಾಯಿಸಿಕೊಡುವಂತೆ ಅಕ್ಕಪಕ್ಕದ 4 ಮಂದಿ ರೈತರು ಕೇಳಿಕೊಂಡಿದ್ದರು. ಟ್ರಾನ್ಸ್‌ಫಾರ್ಮರ್‌ಗಳು ಖಾಲಿಯಾಗಿವೆ. ಒಂದು ವಾರದ ನಂತರ ಬರುವಂತೆ ಜೆಇ ಮಧು ಹೇಳಿದ್ದರು.

ಜ.30ರಂದು ರೈತ ರಾಮಚಂದ್ರಪ್ಪ, ಅಧಿಕಾರಿ ಮಧು ಅವರಿಗೆ ಕರೆ ಮಾಡಿ ಟಿಸಿ ಬಗ್ಗೆ ವಿಚಾರಿಸಿದ್ದಾರೆ. ಆಗ, ಬೇರೊಂದು ಟಿಸಿ ಇದೆ. ಅದನ್ನು ನಿಮಗೆ ಕೊಡುತ್ತೇನೆ. ಆದರೆ, ತಲಾ ಒಬ್ಬರಿಗೆ ₹1 ಸಾವಿರದಂತೆ ₹4 ಸಾವಿರ ಕೊಡುವಂತೆ ಬೇಡಿಕೆಯಿಟ್ಟಿದ್ದರು. ಅಂತಿಮವಾಗಿ ₹3 ಸಾವಿರಗಳಿಗೆ ತೀರ್ಮಾನವಾಗಿತ್ತು. ಲಂಚದ ಹಣ ಕೊಡಲು ಇಷ್ಟವಿಲ್ಲದ ರಾಮಚಂದ್ರಪ್ಪ ಜ.30ರಂದು ಲೋಕಾಯುಕ್ತ ಪೊಲೀಸರಿಗೆ ಅಧಿಕಾರಿ ಮಧು ವಿರುದ್ಧ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೋಲೀಸರು ಮಾಡದಕೆರೆ ಬೆಸ್ಕಾಂ ಕಚೇರಿಯಲ್ಲಿ ಅಧಿಕಾರಿ ಮಧು ದೂರದಾರ ರಾಮಚಂದ್ರಪ್ಪ ಅವರಿಂದ ₹3 ಸಾವಿರ ಲಂಚ ಪಡೆಯುವಾಗ ದಾಳಿ ನಡೆಸಿ, ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಲೋಕಾಯುಕ್ತ ಎಸ್‌ಪಿ ವಾಸುದೇವ ಮಾರ್ಗದರ್ಶನದಲ್ಲಿ ಪೊಲೀಸ್ ಡಿವೈಎಸ್‍ಪಿ ಎನ್.ಮೃತ್ಯುಂಜಯ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಪ್ರಭು ಸೂರಿನ್, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *