ಬೆಂಗಳೂರು: ಈ ಬಿಬಿಎಂಪಿಯವರು ನೆಟ್ಟಗೆ ಕೆಲಸ ಮಾಡಲ್ಲ. ಸಂಬಳ ಮಾತ್ರ ತಗೋತಾರೆ ಬೆಂಗಳೂರಿನಲ್ಲಿ ಯಾವ ಕೆಲಸನಾದ್ರೂ ನೆಟ್ಟಗೆ ಮಾಡ್ತಾರಾ ಅಂತ ಜನ ಪ್ರಶ್ನೆ ಮಾಡೋದು ಕಾಮನ್. ಇದೀಗ ಜನರೇ ನಿಬ್ಬೆರಗಾಗಿ ನೋಡುವಂತೆ ಬಿಬಿಎಂಪಿ ಫೀಲ್ಡ್ಗೆ ಇಳಿದಿದೆ. ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಮುಚ್ಚದಿದ್ದರೆ ನಿಮ್ಮನ್ನೆಲ್ಲ ಸಸ್ಪೆಂಡ್ ಮಾಡಿ ಬಿಸಾಕ್ತಿ ಅಂತ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಗುಡುಗಿದ್ದರು. ಡಿ.ಕೆ ಶಿವಕುಮಾರ್ ಒಂದೇ ಗುಡುಗಿಗೆ ಬಿಬಿಎಂಪಿಯ ಅಧಿಕಾರಿಗಳು ಎದ್ನೋ ಬಿದ್ನೋ ಅಂತ ನಗರದಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದಾರೆ.
ಆದರೆ, ಡಿ.ಕೆಶಿ ಕೊಟ್ಟ ಡೆಡ್ಲೈನ್ ಮುಗಿತಾ ಬಂದ್ರೂ ನಗರದಲ್ಲಿ ರಸ್ತೆಗುಂಡಿಗಳು ಪೂರ್ಣ ಪ್ರಮಾಣದಲ್ಲಿ ಮುಕ್ತವಾಗಿಲ್ಲ. ಇದೀಗ ಹಬ್ಬದ ದಿನ, ರಜಾ ದಿನಗಳಲ್ಲೂ ಬಿಬಿಎಂಪಿ ಅಧಿಕಾರಿಗಳು ಫೀಲ್ಡ್ಗೆ ಇಳಿದಿದ್ದಾರೆ. ಡಿಕೆಶಿ ಸಸ್ಪೆಂಡ್ ಡೋಸ್ ಚೆನ್ನಾಗಿಯೇ ವರ್ಕ್ ಆಗ್ತಿದೆ ಅಂತ ಜನ ಹೇಳ್ತಿದ್ದಾರೆ. ಬಾಕಿ ಇರೋ ರಸ್ತೆಗುಂಡಿಗಳನ್ನು ಬೇಗ ಮುಚ್ಚಿ ಅಂತ ಹೇಳ್ತಾ ಇದ್ದಾರೆ.
ಬೆಂಗಳೂರಿನಲ್ಲಿ ಸೃಷ್ಟಿಯಾಗಿದ್ದ ರಸ್ತೆಗುಂಡಿಗಳಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಇನ್ನಿಲ್ಲದಂತೆ ಪರದಾಡಿದ್ದರು. ವಾಹನಗಳನ್ನು ಓಡಿಸಲಾಗದೆ ಪರದಾಡಿದ್ದರು. ಇನ್ನು ಟ್ರಾಫಿಕ್ ಜಾಮ್ಗಳಲ್ಲಿ ವಾಹನ ಸವಾರರು ಪರದಾಡುವುದು ಒಂದು ಕಡೆಯಾದರೆ, ರಸ್ತೆಗುಂಡಿಗಳನ್ನು ತಪ್ಪಿಸುವ ಸಹಾಸ ಮತ್ತೊಂದು ಕಡೆಯಾಗಿತ್ತು. ಇದೀಗ ಕಳೆದ 10 ದಿನಗಳಿಂದ ಬಿಬಿಎಂಪಿಯ ಅಧಿಕಾರಿಗಳು ಶರವೇಗದಲ್ಲಿ ಮುಚ್ಚುತ್ತಿದ್ದು, ಬೆಂಗಳೂರಿನಲ್ಲಿ ಜನ ತುಸು ನಿರಾಳರಾಗಿದ್ದಾರೆ. ಆದರೆ, ನಗರದ ಪ್ರಮುಖ ರಸ್ತೆಗಳಲ್ಲಿ ರಸ್ತೆಗುಂಡಿ ಮುಕ್ತವಾದರೂ, ನಗರದ ಒಳಭಾಗದಲ್ಲಿ ರಸ್ತೆಗುಂಡಿಗಳು ಇನ್ನೂ ಮುಕ್ತವಾಗಿಲ್ಲ.
ಸೆಪ್ಟೆಂಬರ್ 1ರಂದು ರಸ್ತೆಗುಂಡಿಗಳನ್ನು ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಅವರು ಇನ್ನು 15 ದಿನಗಳ ಒಳಗಾಗಿ ಬೆಂಗಳೂರಲ್ಲಿ ರಸ್ತೆಗುಂಡಿಗಳನ್ನು ಮುಚ್ಚದಿದ್ರೆ ಸಸ್ಪೆಂಡ್ ಮಾಡಿ ಬಿಸಾಕ್ತೀನಿ ಅಂತ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಬಿಬಿಎಂಪಿ ಮುಂದಾಗಿತ್ತು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು. ಬಿಬಿಎಂಪಿ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಬಿಡಿ , ಬಿಬಿಎಂಪಿ ಕಮಿಷನರ್ ಅವರೇ ಫೀಲ್ಡ್ಗೆ ಇಳಿದಿದ್ದರು. ಬೆಳಿಗ್ಗೆ, ರಾತ್ರಿ ಎನ್ನದೆ ಫೀಲ್ಡ್ಗೆ ಇಳಿದು ರಸ್ತೆಗುಂಡಿಗಳನ್ನು ಮುಚ್ತಿದ್ದಾರೆ. ಇದೀಗ ಡಿಸಿಎಂ ನೀಡಿರುವ ಗಡುವು ಸಹ ಮುಕ್ತಾಯವಾಗಿದ್ದು, ಬಾಕಿ ಇರುವ ರಸ್ತೆಗುಂಡಿಗಳನ್ನು ಮುಚ್ಚುವುದಕ್ಕೆ ಬಿಬಿಎಂಪಿಯ ಅಧಿಕಾರಿ ಹಾಗೂ ಸಿಬ್ಬಂದಿ ರಜಾತ್ಯಾಗ ಮಾಡಿದ್ದಾರೆ.
ಡಿ.ಕೆ ಶಿವಕುಮಾರ್ ಅವರು ನಾನು ಅಮೆರಿಕಾಗೆ ಹೋಗ್ತಾ ಇದ್ದೇನೆ. ನಾನು ಬರುವುದರ ಒಳಗೆ ರಸ್ತೆಗುಂಡಿಗಳನ್ನು ಮುಚ್ಚಬೇಕು. ಬಂದ ಮೇಲೆ ಬೆಂಗಳೂರು ಪರಿಶೀಲನೆ ಮಾಡ್ತೀನಿ ಅಷ್ಟರ ಒಳಗೆ ರಸ್ತೆಗುಂಡಿಗಳನ್ನು ಮುಚ್ಚಿರಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡ್ತೀನಿ ಎಂದು ಎಚ್ಚರಿಕೆ ನೀಡಿದ್ದರು. ಡಿಕೆಶಿ ಮೀಟಿಂಗ್ ಮಾಡಿದ ಬೆನ್ನಲ್ಲೇ ನಗರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಬರದಿಂದ ಸಾಗಿದೆ. ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಸಾವಿರಾರು ರಸ್ತೆಗುಂಡಿಗಳನ್ನು ಬಿಬಿಎಂಪಿ ಮುಚ್ಚಿದೆ.
ಇನ್ನು ಈಚೆಗೆ ಮೆಟ್ರೋದಲ್ಲಿ ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸೆಪ್ಟೆಂಬರ್ 20ರ ಒಳಗೆ ಬೆಂಗಳೂರಿನಲ್ಲಿ ಬಿಬಿಎಂಪಿ ರಸ್ತೆಗುಂಡಿಗಳನ್ನು ಮುಚ್ಚಲಿದೆ. ಬೆಂಗಳೂರನ್ನು ಶೀಘ್ರ ರಸ್ತೆಗುಂಡಿ ಮುಕ್ತವನ್ನಾಗಿ ಮಾಡಲಾಗುವುದು ಎಂದು ಹೇಳಿದ್ದರು. ಈ ಮೂಲಕ ರಸ್ತೆಗುಂಡಿಗಳನ್ನು ಮುಚ್ಚುವ ಡೆಡ್ಲೈನ್ ಅನ್ನು ವಿಸ್ತರಿಸಿದ್ದಾರೆ.
ಬೆಂಗಳೂರಿನ ನಟೋರಿಯಸ್ ರೌಡಿ ಕೊರಂಗು ಕೃಷ್ಣ ಸಹೋದರ ಶಾಸಕ ಮುನಿರತ್ನಂ ನಾಯ್ಡು ಆಂಧ್ರ ಟು ಬೆಂಗಳೂರು ಜರ್ನಿ ಹೇಗಿತ್ತು?


