BBMP
Loading ...

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಬಂಧನಕ್ಕೆ ಒಳಗಾಗಿ ನಾಲ್ಕು ತಿಂಗಳು ಕಳೆದಿವೆ. ಚಾರ್ಜ್​ಶೀಟ್ ಸಲ್ಲಿಕೆ ಬಳಿಕ ಅವರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಅವರು ಜಾಮೀನಿಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಲೇ ಬಂದಿದ್ದರು. ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಎಚ್‌ ಕೋರ್ಟ್​ ಜಾಮೀನು ಕೊಡಲು ನಿರಾಕರಿಸಿದೆ. ಇದರಿಂದ ದರ್ಶನ್ ಜೈಲಿನಲ್ಲೇ ಮುಂದುವರಿಯುವುದು ಅನಿವಾರ್ಯ ಆಗಿದೆ. ಅವರು ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಅವರು ಜೂನ್ 11ರಂದು ಅರೆಸ್ಟ್ ಆದರು. ಆ ಬಳಿಕ ಅವರನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿತ್ತು. ಆದರೆ, ಅಲ್ಲಿ ಅವರು ಐಷಾರಾಮಿ ವ್ಯವಸ್ಥೆ ಪಡೆದ ಕಾರಣಕ್ಕೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಈಗ ಈ ತೀರ್ಪಿನಿಂದ ಅವರು ಬಳ್ಳಾರಿ ಜೈಲಲ್ಲೇ ಇರಬೇಕಾಗಿದೆ.

ಜಾಮೀನು ಸಿಗದಿರೋ ಕಾರಣ ಅನಾರೋಗ್ಯ ಕಾರಣ ನೀಡಿ ದರ್ಶನ್ ಬೆಂಗಳೂರಿಗೆ ಶಿಫ್ಟ್​ ಆಗುವ ಸಾಧ್ಯತೆ ಇದೆ. ಈಗಾಗಲೇ ದರ್ಶನ್ ಕುಟುಂಬಸ್ಥರು ಮೆಡಿಕಲ್ ವರದಿ ಸಿದ್ಧ ಮಾಡಿಕೊಂಡಿದ್ದಾರೆ. ಅನಾರೋಗ್ಯದ ಕಾರಣ ನೀಡಿ ಬೆಂಗಳೂರಿಗೆ ಶಿಫ್ಟ್​ ಆಗಲು ಪ್ಲ್ಯಾನ್​ ನಡೆದಿದೆ. ದರ್ಶನ್ ಕಳೆದ ಕೆಲ ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ನಡೆಯಲು ಕೂಡ ಅವರಿಗೆ ಕಷ್ಟ ಆಗುತ್ತಿದೆ ಎನ್ನಲಾಗಿದೆ.

ದರ್ಶನ್ ಪರ ಸಿವಿ ನಾಗೇಶ್ ಅವರು ವಾದ ಮಂಡನೆ ಮಾಡಿದ್ದರು. ದರ್ಶನ್ ವಿರುದ್ಧ ಸಾಕ್ಷಿಗಳನ್ನು ಸೃಷ್ಟಿಸಲಾಗಿದೆ ಎಂದು ವಾದ ಮಂಡಿಸಿದ್ದರು. ಇದಕ್ಕೆ ಸರ್ಕಾರಿ ವಕೀಲ ಪ್ರಸನ್ನ ಕುಮಾರ್ ಅವರು ಕೌಂಟರ್ ಕೊಟ್ಟಿದ್ದರು. ಪ್ರಸನ್ನ ಕುಮಾರ್ ಅವರ ವಾದ ಜಡ್ಜ್​ಗೆ ಹೆಚ್ಚು ಸಮಂಜಸ ಎನಿಸಿದೆ. ಹಾಗಾಗಿ ದರ್ಶನ್​ಗೆ ಜಾಮೀನು ನಿರಾಕರಿಸಲಾಗಿದೆ. ಇದರಿಂದ ದರ್ಶನ್​ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ.

Leave a Reply

Your email address will not be published. Required fields are marked *