BBMP
Loading ...

Madal viru

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ನಿಯಮಿತ (ಕೆಎಸ್‌ಡಿಎಲ್‌) ಟೆಂಡರ್‌ ಪ್ರಕ್ರಿಯೆಯಲ್ಲಿ ನಿಗಮದ ಅಧ್ಯಕ್ಷ ವಿರೂಪಾಕ್ಷಪ್ಪ ಮಾಡಾಳ್‌ ಪುತ್ರ ಎಂ.ವಿ. ಪ್ರಶಾಂತ್‌ಕುಮಾರ್‌ ಹಸ್ತಕ್ಷೇಪ ಮಾಡಿ ರಾಸಾಯನಿಕ ಪೂರೈಕೆದಾರರಿಂದ 90 ಲಕ್ಷ ರೂ. ಲಂಚ ಪಡೆಯಲು ಪ್ರಯತ್ನಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಈ ಕುರಿತು ಜಲಮಂಡಳಿ ಅಧಿಕಾರಿ ಪ್ರಶಾಂತ್‌ ಕುಮಾರ್‌ ಅಲಿಯಾಸ್‌ ಪ್ರಶಾಂತ್‌ ಮಾಡಾಳ್‌, ಮೆಸರ್ಸ್‌ ಕರ್ನಾಟಕ ಅರೋಮಾಸ್‌ ಕಂಪನಿಯ ಮೂವರು ಸಿಬ್ಬಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವ ತನಿಖಾಧಿಕಾರಿಗಳು, ಭ್ರಷ್ಟಾಚಾರ ನಡೆಸಲು ಒಳಸಂಚು ರೂಪಿಸಿ ಲಂಚ ಸ್ವೀಕರಿಸಲು ಯತ್ನಿಸಿದ್ದರ ಕುರಿತ ದಾಖಲೆಗಳನ್ನು ಲಗತ್ತಿಸಿದ್ದಾರೆ.

ಪ್ರಕರಣದ ಮೊದಲ ಆರೋಪಿ ಪ್ರಶಾಂತ್‌ ಮಾಡಾಳ್‌, ಅರೋಮಾಸ್‌ ಕಂಪನಿ ನೌಕರರಾದ ಆಲ್ಬರ್ಟ್‌ ನಿಕೋಲಸ್‌, ಸಿ.ಎಚ್‌. ಗಂಗಾಧರ, ಮ್ಯಾನೇಜರ್‌ ದೀಪಕ್‌ ಜಾಧವ್‌ ಅವನ್ನೂ ಆರೋಪಿಗಳನ್ನಾಗಿ ಪರಿಗಣಿಸಲಾಗಿದೆ. ಆರೋಪಿಗಳ ವಿರುದ್ಧ ಅಪರಾಧಿಕ ಒಳಸಂಚು (120 ಬಿ), ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಕಲಂ 7 ಎ ಹಾಗೂ 12ರ ಅನ್ವಯ ದೋಷಾರೋಪ ಹೊರಿಸಲಾಗಿದೆ.

ಅರೋಮಾಸ್‌ ಕಂಪನಿ ನೌಕರರು ಪ್ರಶಾಂತ್‌ ಅವರಿಗೆ ನೀಡಲು ತಂದಿದ್ದ 90 ಲಕ್ಷ ರೂ. ನಗದು, ರಾಸಾಯನಿಕ ಮಾದರಿಯನ್ನು ಸಾಕ್ಷ್ಯಗಳನ್ನಾಗಿ ಪರಿಗಣಿಸಲಾಗಿದೆ. ಜತೆಗೆ, ಕೆಎಸ್‌ಡಿಎಲ್‌ ಅಧಿಕಾರಿಗಳು ಹಾಗೂ ಆರೋಮಾಸ್‌ ಕಂಪನಿ ಸಹ ನೌಕರರೂ ಸೇರಿದಂತೆ ಹಲವರನ್ನು ಸಾಕ್ಷಿದಾರರನ್ನಾಗಿ ಮಾಡಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ವಾಟ್ಸಾಪ್‌ ಚಾಟ್‌ನಲ್ಲಿ ಸತ್ಯ..!
ಆರೋಪಿ ಪ್ರಶಾಂತ್‌ ಕುಮಾರ್‌ ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿಯಾಗಿದ್ದರು. ಆದರೆ, ಕೆಎಸ್‌ಡಿಎಲ್‌ ಅಧ್ಯಕ್ಷರಾಗಿದ್ದ ತಂದೆ ಮಾಡಾಳ್‌ ವಿರೂಪಾಕ್ಷಪ್ಪ ಅವರ ಹೆಸರು ಬಳಕೆ ಮಾಡಿಕೊಂಡು ನಿಗಮದ ಟೆಂಡರ್‌ ಪ್ರಕ್ರಿಯೆಯಲ್ಲಿ ಪ್ರಭಾವ ಬೀರುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅರೋಮಾಸ್‌ ಕಂಪನಿ ಮಾಲೀಕರ ಜತೆ ಚಾಟ್‌ ಮಾಡಿರುವ ವಾಟ್ಸಾಪ್‌ ಸಂದೇಶಗಳನ್ನು ರಿಟ್ರೀವ್‌ ಮಾಡಲಾಗಿದೆ.

ಈ ಪೈಕಿ 2023ರ ಜ.18ರಂದು ಬೆಳಗ್ಗೆ 9.42ರ ಸುಮಾರಿಗೆ ಅರೋಮಾಸ್‌ ಕಂಪನಿ ಮಾಲೀಕ ವಿನಯ್‌ರಾಜ್‌, ಬೇರೆ ಕಂಪನಿಯ ಸುಗಂಧದ್ರವ್ಯ (ರಾಸಾಯನಿಕ) ಮಾದರಿ ತಿರಸ್ಕರಿಸುವಂತೆ ಪ್ರಶಾಂತ್‌ಕುಮಾರ್‌ ಅವರಿಗೆ ವಾಟ್ಸಾಪ್‌ ಸಂದೇಶ ಕಳಿಸಿದ್ದರು. ಅದೇ ದಿನ 10.2ರ ಸುಮಾರಿಗೆ ಪ್ರಶಾಂತ್‌ ಕುಮಾರ್‌, ಕೆಎಸ್‌ಡಿಎಲ್‌ ಎಂಡಿ ಡಾ.ಮಹೇಶ್‌ ಅವರಿಗೆ ವಾಟ್ಸಾಪ್‌ ಮೂಲಕ ‘ದಯವಿಟ್ಟು ಎಸ್‌ಪಿ ಕಂಪನಿಯ ಸುಗಂಧದ್ರವ್ಯ ತಿರಸ್ಕರಿಸಿ’ ಎಂದು ಸಂದೇಶ ಕಳಿಸಿದ್ದಾರೆ. ಈ ಸಂದೇಶಗಳು ಆರೋಪಿ ಪ್ರಶಾಂತ್‌ಕುಮಾರ್‌, ಕೆಎಸ್‌ಡಿಎಲ್‌ ಟೆಂಡರ್‌ ಪ್ರಕ್ರಿಯೆಯಲ್ಲಿ ಪ್ರಭಾವ ಬೀರುತ್ತಿದ್ದರು ಎಂಬುದನ್ನು ಪುಷ್ಠೀಕರಿಸುತ್ತವೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಆರೋಪಿ ಪ್ರಶಾಂತ್‌ ಕುಮಾರ್‌ ತನ್ನ ಕಚೇರಿ ಲೆಕ್ಕ ಸಹಾಯಕ ಸುರೇಂದ್ರ ಅವರ ಮುಖಾಂತರ ಲಂಚದ ಹಣ ಸ್ವೀಕರಿಸಲು ಪ್ರಯತ್ನಿಸಿದ್ದರು. ಜತೆಗೆ, ಕೆಎಸ್‌ಡಿಎಲ್‌ ವ್ಯವಹಾರವನ್ನು ಕ್ರೆಸೆಂಟ್‌ ರಸ್ತೆಯಲ್ಲಿನ ತನ್ನ ಅಣ್ಣನ ಕಚೇರಿಯಲ್ಲಿ ನಡೆಸುತ್ತಿದ್ದರು ಎಂಬುದಕ್ಕೆ ಪೂರಕ ದಾಖಲೆಗಳು ಸಿಕ್ಕಿವೆ ಎಂದು ಈ ಮೂಲಗಳು ಹೇಳಿವೆ.

ಮತ್ತೊಂದು ಕೇಸ್‌ ಬಾಕಿ
2023ರ ಮಾರ್ಚ್ 2ರಂದು ಕೆಎಸ್‌ಡಿಎಲ್‌ ಟೆಂಡರ್‌ ಕೊಡಿಸುವ ಸಲುವಾಗಿ ಕ್ರೆಸೆಂಟ್‌ ರಸ್ತೆಯಲ್ಲಿರುವ ತನ್ನ ಸಹೋದರನ ಕಚೇರಿಯಲ್ಲಿ ಕಚ್ಚಾವಸ್ತು ಪೂರೈಕೆದಾರರಿಂದ 40 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಪ್ರಶಾಂತ್‌ಕುಮಾರ್‌ ಅವರನ್ನು ಲೋಕಾಯುಕ್ತ ಪೊಲೀಸರು ಟ್ರ್ಯಾಪ್‌ ಮಾಡಿ ಬಂಧಿಸಿದ್ದರು. ಇದೇ ವೇಳೆ ಆರೋಮಾಸ್‌ ಕಂಪನಿಯ ನೌಕರರಾದ ಗಂಗಾಧರ್‌ ಹಾಗೂ ಆಲ್ಬರ್ಟ್‌ ನಿಕೋಲಸ್‌ ತಂದಿದ್ದ ಎರಡು ಪ್ರತ್ಯೇಕ ಬ್ಯಾಗ್‌ಗಳನ್ನು ಶೋಧಿಸಿದಾಗ 90 ಲಕ್ಷ ರೂ. ನಗದು ಪತ್ತೆಯಾಗಿತ್ತು. ಈ ಹಣದ ಮೂಲ ಕೆದಕಿದಾಗ ಟೆಂಡರ್‌ ಸಲುವಾಗಿ ಪ್ರಶಾಂತ್‌ಕುಮಾರ್‌ಗೆ ನೀಡಲು ತಂದಿದ್ದ ಲಂಚ ಎಂಬುದು ಬಯಲಾಗಿತ್ತು. ಹೀಗಾಗಿ, ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.

ಪ್ರಾಸಿಕ್ಯೂಷನ್‌ಗೆ ಅನುಮತಿ ವಿಳಂಬ
ಎಂ.ವಿ ಪ್ರಶಾಂತ್‌ಕುಮಾರ್‌ ಕೆಎಎಸ್‌ ಅಧಿಕಾರಿಯಾಗಿದ್ದು, ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವ ಮುನ್ನ ಸರಕಾರದಿಂದ ಪ್ರಾಸಿಕ್ಯೂಷನ್‌ ಅನುಮತಿ ಪಡೆಯಬೇಕಿದೆ. 40 ಲಕ್ಷ ರೂ. ಲಂಚ ಸ್ವೀಕಾರ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದ್ದು, ಇದುವರೆಗೂ ಅನುಮತಿ ದೊರೆತಿಲ್ಲ. ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಅನುಮತಿ ಸಿಕ್ಕ ಬಳಿಕ ದೊಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಮೂಲಗಳು ಹೇಳಿವೆ.

ಗಮನಿಸಿ, ಭಾನುವಾರ ಪಿಡಿಒ ಪರೀಕ್ಷೆ : ಬೆಳಗ್ಗೆ 5:30 ರಿಂದ ಮೆಟ್ರೋ ಸಂಚಾರ ಆರಂಭ

Leave a Reply

Your email address will not be published. Required fields are marked *