ಬೆಂಗಳೂರು: ಸದಾ ಒಂದಿಲ್ಲೊಂದು ಸಮಸ್ಯೆಯಿಂದ ಸದ್ದು ಮಾಡುವ ಬೆಸ್ಕಾಂ ಇತ್ತೀಚೆಗಷ್ಟೇ ಯುಪಿಐ ಪಾವತಿ ವಿಚಾರವಾಗಿ ಹೈಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡಿತು. ಇಷ್ಟಾದರೂ ಬುದ್ಧಿ ಕಲಿಯದ ಬೆಸ್ಕಾಂ ಇದೀಗ ಮತ್ತೊಂದು ಸಮಸ್ಯೆಯನ್ನು ಮುಂದಿಟಿದೆ. ಅದೇನೆಂದರೆ, ಫಾಸ್ಟ್ಟ್ರ್ಯಾಕ್ ಸೇವೆಯನ್ನು ನಿಲ್ಲಿಸಿದೆ.
ಫಾಸ್ಟ್ಟ್ರ್ಯಾಕ್ ಸೇವೆಯನ್ನು ನಿಲ್ಲಿಸಿರುವುದರಿಂದ ಗ್ರಾಹಕರಿಗೆ ತುಂಬಾ ತೊಂದರೆಯಾಗುತ್ತಿದೆ. ಆನ್ಲೈನ್ನಲ್ಲಿ ಸಲ್ಲಿಸಿದ ಯಾವುದೇ ಅರ್ಜಿ ವಿಲೇವಾರಿ ಆಗುತ್ತಿಲ್ಲ. ಯಾವುದೇ ಹಣವನ್ನು ನೀಡದೇ ಆನ್ಲೈನ್ ಮೂಲಕ ಸೇವೆ ಪಡೆಯಬಹುದಾಗಿತ್ತು. ಆದರೆ, ಈಗ ಫಾಸ್ಟ್ಟ್ರ್ಯಾಕ್ ಸೇವೆ ಸ್ಥಗಿತಗೊಂಡಿದೆ. ಈ ಬಗ್ಗೆ ಬೆಸ್ಕಾಂ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದರೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ.
ತಾತ್ಕಾಲಿಕ ಸ್ಥಗಿತ ಎಂದು ಕೆಲವರು ಹೇಳಿದರೂ ಕೂಡ ಈ ಸಮಸ್ಯೆ ಇನ್ನು ಬಗೆಹರಿದಿಲ್ಲ. ಯಾವಾಗ ಬಗೆಹರಿಯುತ್ತದೆ ಎಂಬುದರ ಸುಳಿವೂ ಇಲ್ಲ. ಇದೀಗ ಯಾವುದೇ ಅರ್ಜಿಯನ್ನು ವಿಲೇವಾರಿ ಮಾಡಿಸಲು ಎಇ ಅಥವಾ ಜೆಇಇಗಳ ಬಳಿ ಹೋಗಬೇಕಾಗಿದೆ. ಅಲ್ಲಿ ಹಣ ಕೊಟ್ಟರೆ ಮಾತ್ರ ಕೆಲಸ. ಲಂಚ ಕೊಟ್ರೆ ಮಾತ್ರ ಕೆಲಸ ನಡೆಯುತ್ತದೆ. ಸಕಾಲಕ್ಕೂ ಕೆಲಸ ನಡೆಯುತ್ತಿಲ್ಲ. ಇದರಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಗಮನವಹಿಸಿ, ಆದಷ್ಟು ಬೇಗ ಸಮಸ್ಯೆ ಬಗೆಹರಿಸುವಂತೆ ಗ್ರಾಹಕರು ಮನವಿ ಮಾಡಿದ್ದಾರೆ.
ಬೆಸ್ಕಾಂ ನಡೆಗೆ ಹೈಕೋರ್ಟ್ ಗರಂ
ವಿದ್ಯುತ್ ಬಿಲ್ ಸೇರಿದಂತೆ ವಿವಿಧ ಶುಲ್ಕಗಳ ಪಾವತಿಗೆ ಯುಪಿಐ ವ್ಯವಸ್ಥೆ ಜಾರಿ ಮಾಡದಿರುವ ಕುರಿತು ಆಗಸ್ಟ್ 23ರ ವೇಳೆಗೆ ಸೂಕ್ತ ಪ್ರಮಾಣ ಪತ್ರ ಸಲ್ಲಿಸದೇ ಇದ್ದಲ್ಲಿ ಮುಂದಿನ ವಿಚಾರಣೆಗೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಖುದ್ದು ಹಾಜರಿರಬೇಕು ಎಂದು ಹೈಕೋರ್ಟ್ ಈ ಹಿಂದೆ ಗರಂ ಆಗಿತ್ತು. ವಿದ್ಯುತ್ ಸರಬರಾಜು ಕೋರಿ ಹೊಸಕೋಟೆ ನಿವಾಸಿ ಸೀತಾಲಕ್ಷ್ಮೀ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ತಿರಸ್ಕರಿಸಿ, ಪ್ರೀಪೇಯ್ಡ್ ಮೀಟರ್ ನೀಡಲು ನಿರಾಕರಿಸಿ ಬೆಸ್ಕಾಂ ಹೊಸಕೋಟೆ ವೃತ್ತದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ 2024ರ ಮೇ 8ರಂದು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿದಾರೆ ಸೀತಾಲಕ್ಷ್ಮೀ ಆದೇಶ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎನ್.ಎಸ್.ಸಂಜಯ ಗೌಡ ಅವರಿದ್ಧ ಏಕಸದಸ್ಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. ಬೆಸ್ಕಾಂ ಪರ ವಕೀಲರು, ಯುಪಿಐ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಕೋರಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಇದು ಕೊನೇಯ ಅವಕಾಶ. ಆಗಸ್ಟ್ 23ರ ವೇಳೆಗೆ ಪ್ರಮಾಣ ಪತ್ರ ಸಲ್ಲಿಸದೇ ಇದ್ದಲ್ಲಿ ವ್ಯವಸ್ಥಾಪಕರು ಕೋರ್ಟ್ನಲ್ಲಿ ಹಾಜರಿದ್ದು ಸ್ಪಷ್ಟನೆ ನೀಡಬೇಕಾಗುತ್ತದೆ ಎಂದು ಕಿಡಿಕಾರಿತ್ತು.
ಎಂಟು ವಲಯಗಳ ಅತಿಹೆಚ್ಚು ಆಸ್ತಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡವರ ಪಟ್ಟಿ ಪ್ರಕಟಿಸಿದ ಬಿಬಿಎಂಪಿ


