ಬೆಂಗಳೂರು ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿರುವ ನಗರ. ಈಗ ಬೆಂಗಳೂರಲ್ಲಿ ಖಾಲಿ ಜಾಗ ಅನ್ನೋದೇ ಅಪರೂಪ. ಅಷ್ಟರಮಟ್ಟಿಗೆ ಮನೆಗಳು ನಿರ್ಮಾಣವಾಗಿವೆ. ಇನ್ನು ಬೆಂಗಳೂರಿನಲ್ಲಿ ಗುರುತಿಸಲಾದ ಬಫರ್ ವಲಯದಲ್ಲೂ ಹಲವರು ಮನೆಗಳನ್ನು ನಿರ್ಮಾಣ ಮಾಡಿದ್ದು, ಇವರಿಗೆ ಬಿಬಿಎಂಪಿ ಶಾಕ್ ಕೊಡಲು ಮುಂದಾಗಿದೆ.
ಬಫರ್ ವಲಯದಲ್ಲಿ ಮನೆ ನಿರ್ಮಿಸಿದವರಿಗೆ ಮೊದಲು ವಿದ್ಯುತ್ ಕಡಿತ ಮಾಡಲು ನಿರ್ಧರಿಸಿದ್ದು, ಬಳಿಕ ಈ ಬಫರ್ ವಲಯದಲ್ಲಿ ನಿರ್ಮಾಣವಾಗಿರುವ ಕಟ್ಟಡಗಳನ್ನು ತೆರವು ಮಾಡಲು ಮುಂದಾಗಿದೆ. ಅಲ್ಲದೆ ಈಗಾಗಲೇ ಈ ವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೂ ಬಿಬಿಎಂಪಿ ಶಾಕ್ ನೀಡಲಿದೆ.
ನಗರದಲ್ಲಿ ಮೊದಲಿನಿಂದಲೂ ಸರ್ಕಾರಿ ಜಾಗ, ರಾಜಕಾಲುವೆ, ಕೆರೆ ಸೇರಿದಂತೆ ಹಲವು ಪ್ರದೇಶಗಳು ಒತ್ತುವರಿಯಾಗಿರುವ ಬಗ್ಗೆ ದೂರುಗಳು ಕೇಳಿಬರುತ್ತಲೇ ಇವೆ. ಒತ್ತುವರಿ ಮಾಡಿದ ಜಾಗಗಳಲ್ಲಿ ಮನೆ ನಿರ್ಮಿಸಿರುವ ಕೇಸ್ಗಳು ಕೂಡ ಬಿಬಿಎಂಪಿ ಮುಂದಿವೆ. ಆಗಾಗ ಕಾರ್ಯಾಚರಣೆ ನಡೆಸಿ, ಸುಮ್ಮನಾಗುವ ಬಿಬಿಎಂಪಿಗೆ ಇದು ದೊಡ್ಡತಲೆನೋವಾಗಿದೆ.
ಒತ್ತುವರಿ ತೆರವು ಮಾಡಲು ಹರಸಾಹಸ ಪಟ್ಟರೂ ಅದು ಇನ್ನೂ ಯಶಸ್ವಿಯಾಗಿಲ್ಲ. ಈಗ ಬಫರ್ ವಲಯದ ಮೇಲೆ ಬಿಬಿಎಂಪಿ ಚಿತ್ತ ಹರಿಸಿದ್ದು, ಈ ಭಾಗಗಳಲ್ಲಿ ನಿರ್ಮಾಣವಾಗಿರುವ ಕಟ್ಟಡಗಳ ತೆರವು ಮಾಡಲು ದೊಡ್ಡ ಪ್ಲ್ಯಾನ್ ಮಾಡಿಕೊಂಡಿದೆ.
ಸದ್ಯ ಬಫರ್ ವಲಯದಲ್ಲಿ ಕಾರ್ಯಾಚರಣೆ ನಡೆಸಲು ಬಿಬಿಎಂಪಿ ಮುಂದಾಗಿದ್ದು, ಈ ಭಾಗದಲ್ಲಿ ಮನೆ ಇದ್ದವರಿಗೆ ಶಾಕ್ ನೀಡಲು ಸಜ್ಜಾಗಿದೆ. ಈ ಬಫರ್ ಜೋನ್ನಲ್ಲಿ ರಾಜಕಾಲುವೆಗಳು ಹಾಗೂ ಚರಂಡಿ ಮೇಲೆ ಕಟ್ಟಡಗಳನ್ನು ನಿರ್ಮಿಸಿರುವುದು ಕಂಡುಬಂದಿದೆ. ಹಾಗಾಗಿ ಇವುಗಳ ತೆರವು ಕಾರ್ಯಾಚರಣೆಗೆ ಹೊಸ ಪ್ಲ್ಯಾನ್ ಅನ್ನೂ ಮಾಡಿಕೊಂಡಿದೆ.
ಬಫರ್ ವಲಯದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವವರಿಗೂ ಬಿಸಿಮುಟ್ಟಿಸಲು ಮುಂದಾಗಿದೆ. ಮೊದಲಿಗೆ ಈ ಒತ್ತುವರಿಯನ್ನು ಪತ್ತೆ ಹಚ್ಚಿ, ಬಳಿಕ ಬೆಸ್ಕಾಂ ಕಡೆಯಿಂದಲೇ ಅವರಿಗೆ ನೋಟಿಸ್ ಕೊಡಿಸಲು ನಿರ್ಧರಿಸಿದೆ. ಇತ್ತೀಚೆಗೆ ನಡೆದ ಬಿಬಿಎಂಪಿ ಸಭೆಯಲ್ಲಿ ಈ ಬಗ್ಗೆ ಒತ್ತುವರಿದಾರರಿಗೆ ನೋಟಿಸ್ ಕೊಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಬೆಂಗಳೂರಿನ ಹಲವು ಭಾಗಗಳಲ್ಲಿ ಕೆರೆ ಜಾಗದ ಒತ್ತುವರಿ ಮಾಡಿರುವುದು ಬೆಳಕಿಗೆ ಬಂದಿದೆ. ಈ ಒತ್ತುವರಿ ಜಾಗಗಳಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹಾಗಾಗಿ ನಿರ್ಮಾಣ ಹಂತದಲ್ಲೇ ಇವರಿಗೆ ಬಿಸಿಮುಟ್ಟಿಸಲು ಬಿಬಿಎಂಪಿ ಮುಂದಾಗಿದೆ. ಈ ವಲಯಗಳನ್ನು ಗುರುತಿಸಿ, ನಿರ್ಮಾಣ ಹಂತದಲ್ಲಿರುವಾಗಲೇ ಒತ್ತುವರಿದಾರರಿಗೆ ಬೆಸ್ಕಾಂ ವತಿಯಿಂದ ನೋಟಿಸ್ ಕೊಡಿಸಿ, ವಿದ್ಯುತ್ ಸಂಪರ್ಕ ಕಡಿತ ಮಾಡಲು ಸೂಚನೆ ನೀಡಲಾಗಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಕಮೀಷನರ್ ಎಲ್ಲ ವಲಯದ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಈ ಹಿಂದೆಯೂ ಬಿಬಿಎಂಪಿ ರಾಜಕಾಲುವೆಗಳ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣ, ಸೈಕಲ್ ಟ್ರ್ಯಾಕ್ ನಿರ್ಮಿಸಲು ಮುಂದಾಗಿತ್ತು. ಈ ಮೂಲಕ ಒತ್ತುವರಿ ತಡೆಯುವ ಪ್ಲ್ಯಾನ್ ಕೂಡ ಮಾಡಿತ್ತು. ಇದರಿಂದ ಜನರ ರಾಜಕಾಲುವೆಗೆ ಕಸ ಎಸೆಯುವುದನ್ನು ತಪ್ಪಿಸಬಹುದು, ಜೊತೆಗೆ ಪ್ರವಾಹ ತಡೆ, ಕಾಲುವೆಗಳಲ್ಲಿನ ಹೂಳು ತೆರವು ಕೆಲಸಕ್ಕೂ ಅನುಕೂಲವಾಗಲಿದೆ ಎಂದು ಉದ್ದೇಶಿಸಲಾಗಿತ್ತು.
ಹೊಸ ವರ್ಷಾಚರಣೆಗೆ ಬೆಂಗಳೂರು ಪೊಲೀಸ್ ರೆಡಿ; ಈ ಬಾರಿ ಕುಡಿದು ತೇಲಾಡುವವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ!


