ಬೆಂಗಳೂರು: ನಗರದ ಜನತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆಧಾರ್ ಆಧರಿತ ಸ್ವಯಂಚಾಲಿತ ಆಸ್ತಿ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಂತೆ ಈ ಸೇವೆ ಆರಂಭಿಸಲಾಗಿದೆ. ನಾಗರಿಕರು ತಮ್ಮ ಆಸ್ತಿ ಬಾಕಿಯಿರುವ ಖಾತೆ ವರ್ಗಾವಣೆಗಳನ್ನು ಆನ್ಲೈನ್ ಮೂಲಕ ಸ್ವಯಂಚಾಲಿತ ಆಸ್ತಿಯಾಗಿ ತಿದ್ದುಪಡಿ ಮಾಡಿಕೊಳ್ಳಬಹುದು. ಮಾರಾಟಗಾರರ ಆಧಾರ್ ಮತ್ತು ಇ-ಖಾತೆ ಹೊಂದಿರುವ ಮಾಲೀಕರ ಆಧಾರ್ನಲ್ಲಿನ ಹೆಸರಿನೊಂದಿಗೆ ಹೊಂದಾಣಿಕೆಯಾದರೆ, 7 ದಿನಗಳ ಆಕ್ಷೇಪಣಾ ಅವಧಿಯ ನಂತರ ವಿವಾದರಹಿತ ಮ್ಯುಟೇಷನ್ ಸ್ವಯಂಚಾಲಿತವಾಗಿ ಅನುಮೋದನೆಗೊಳ್ಳುತ್ತದೆ. ಯಾವುದೇ ವಿವಾದಿತ ಪ್ರಕರಣವನ್ನು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಯಿಂದ ವಿಚಾರಣೆ ನಡೆಸಿ, ಇತ್ಯರ್ಥಪಡಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಯಂಚಾಲಿತ ಆಸ್ತಿ ತಿದ್ದುಪಡಿ ಹೇಗೆ?
- ಪಾಲಿಕೆಯ https://www.bbmpeaasthi.karnataka.gov.in ಕ್ಕೆ ಭೇಟಿ ನೀಡಿ
‘* ಪ್ರಮುಖ ಸೂಚನೆಗಳು’ ಅಡಿಯಲ್ಲಿ ಬರುವ ‘eKhata Automatic Mutations – Get Your Mutation’ ಲಿಂಕ್ ಕ್ಲಿಕ್ಕಿಸುವುದು - ಇಪಿಐಡಿ ಸಂಖ್ಯೆಯ ಮೂಲಕ ಬಾಕಿಯಿರುವ ಇ-ಖಾತಾ ಮ್ಯುಟೇಷನ್ ಹುಡುಕುವುದು
- ಮಾರಾಟಗಾರರ/ನೀಡುವವರ ಮತ್ತು ಖರೀದಿದಾರರ/ಸ್ವೀಕರಿಸುವವರ ಆಧಾರ್ ಇ-ಕೆವೈಸಿ ದೃಢೀಕರಿಸುವುದು
- ಮಾರಾಟಗಾರರ ಆಧಾರ್ ಮತ್ತು ಇ-ಖಾತೆ ಹೊಂದಿರುವ ಮಾಲೀಕರ ಆಧಾರ್ ಹೆಸರಿನೊಂದಿಗೆ ಹೊಂದಾಣಿಕೆಯಾದರೆ 7 ದಿನಗಳಲ್ಲಿ ವಿವಾದರಹಿತ ಮ್ಯುಟೇಷನ್ ಸ್ವಯಂಚಾಲಿತವಾಗಿ ಅನುಮೋದನೆಗೊಳ್ಳುತ್ತದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿನಾಯಿತಿ ಪರಿಶೀಲನೆ
‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ1,200 ಚದರಡಿ ಮೀರದಂತಹ ನಿವೇಶನಗಳಲ್ಲಿ ನೆಲ +2 ಅಂತಸ್ತು ಅಥವಾ ಸ್ಟೀಲ್ಟ್ +3 ಅಂತಸ್ತಿನ ವರೆಗಿನ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡುವ ವಿಚಾರ ಪ್ರಸ್ತಾವನೆ ಹಂತದಲ್ಲಿದೆ,’’ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು.
ಕಾಂಗ್ರೆಸ್ನ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಟ್ಟಡ ನಿರ್ಮಾಣದ ನಂತರ ಸ್ವಾಧೀನಾನುಭವ ಪ್ರಮಾಣ ಪತ್ರದಿಂದ ವಿನಾಯಿತಿ ನೀಡುವುದು ಪರಿಶೀಲನೆಯಲ್ಲಿದೆ. ಗ್ರೇಟರ್ಬೆಂಗಳೂರು ಆಡಳಿತ ಕಾಯ್ದೆ 2024ರ ಅನ್ವಯ ಹೊರಡಿಸಲಾದ ಅಧಿಸೂಚನೆಯು ನಗರ ಸ್ಥಳೀಯ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ,’’ ಎಂದರು.
‘‘ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಮತ್ತು ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976ರಲ್ಲಿ ಕಟ್ಟಡ ನಿರ್ಮಾಣದ ನಂತರ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯ ಬೇಕಾಗುತ್ತದೆ. ಕೆಲವೊಂದು ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರದಿಂದ ವಿನಾಯಿತಿ ನೀಡುವ ಕುರಿತು ಕಾಯ್ದೆಗಳ ತಿದ್ದುಪಡಿ ಪ್ರಸ್ತಾವನೆ ಪರಿಶೀಲನೆಯಲ್ಲಿರುತ್ತದೆ,’’ ಎಂದು ಹೇಳಿದರು.


