BBMP
Loading ...

BBMP

ಬಿಸಿಲು, ಮಳೆ, ಗಾಳಿ, ಚಳಿಯನ್ನೂ ಲೆಕ್ಕಿಸದೆ ನಿತ್ಯ ರಾಜಧಾನಿ ಬೆಂಗಳೂರಿನ ಬೀದಿ ಬೀದಿಗಳನ್ನು ಸ್ವಚ್ಛಗೊಳಿಸಿ, ನೈರ್ಮಲ್ಯ ಕಾಪಾಡುತ್ತಿರುವ ಪೌರ ಕಾರ್ಮಿಕರಿಗೆ ಕೊನೆಗೂ ಕಾಯಂ ಭಾಗ್ಯ ದಕ್ಕುತ್ತಿದೆ. ಇದರಿಂದ ಪೌರ ಕಾರ್ಮಿಕರ ಸುದೀರ್ಘ ಹೋರಾಟಕ್ಕೆ ಫಲ ದೊರೆತಿದೆ!

ಬಿಬಿಎಂಪಿಯು 800 ಚ.ಕಿ.ಮೀ. ವಿಸ್ತೀರ್ಣ ಹೊಂದಿದ್ದು, ನಿತ್ಯ 6,500 ಮೆಟ್ರಿಕ್‌ ಟನ್‌ನಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಸಾವಿರಾರು ಕಿ.ಮೀ. ಉದ್ದದ ರಸ್ತೆಗಳಲ್ಲಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ರಾಶಿ ರಾಶಿ ಕಸ ಬಿದ್ದಿರುತ್ತದೆ. ಪೌರ ಕಾರ್ಮಿಕರು ಈ ಕಸವನ್ನಲ್ಲೇ ಗುಡಿಸಿ ಶುಚಿಗೊಳಿಸುವ ಮೂಲಕ ನಗರವನ್ನು ಅಂದಗಾಣಿಸುತ್ತಿದ್ದಾರೆ.

ಸೂರ್ಯೋದಯಕ್ಕೆ ಮುನ್ನವೇ ಪೊರಕೆ, ತಳ್ಳುವ ಕಸದ ಗಾಡಿಗಳೊಂದಿಗೆ ರಸ್ತೆಗಿಳಿಯುವ ಪೌರ ಕಾರ್ಮಿಕರು, ಸಾರ್ವಜನಿಕರು ಮನೆಯಿಂದ ಹೊರಗೆ ಕಾಲಿಡುವ ಮೊದಲೇ ಕಸ ತೆಗೆದು ಸ್ವಚ್ಛಗೊಳಿಸಿರುತ್ತಾರೆ. ಊರೆಲ್ಲಾ ಹಬ್ಬ-ಹರಿದಿನಗಳಲ್ಲಿ ಸಂಭ್ರಮದಲ್ಲಿ ಮುಳುಗಿದ್ದರೂ ಇವರು ಮಾತ್ರ ತಮ್ಮ ಕಾಯಕ ತಪ್ಪಿಸುವುದಿಲ್ಲ. ಪೌರ ಕಾರ್ಮಿಕರು ಒಂದೆರಡು ದಿನ ಕೆಲಸ ಸ್ಥಗಿತಗೊಳಿಸಿದರೆ, ಇಡೀ ಬೆಂಗಳೂರು ಗಬ್ಬು ನಾರುತ್ತದೆ.

ಹೀಗಾಗಿಯೇ, ರಾಜ್ಯ ಸರಕಾರವು ಪೌರ ಕಾರ್ಮಿಕರ ಬದುಕು ಹಸನುಗೊಳಿಸಲು ಸೇವೆಯನ್ನು ಕಾಯಂಗೊಳಿಸಲು ತೀರ್ಮಾನಿಸಿದೆ. ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಬೆಳ್ಳಿ ಮಹೋತ್ಸವ ಹಾಗೂ ಪೌರಕಾರ್ಮಿಕರಿಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸರಕಾರದ ಮುಖ್ಯ ಕಾರ್ಯದರ್ಶಿ ಆಗಲಿ, ಪೌರಕಾರ್ಮಿಕರಾಗಲಿ ಯಾವುದೇ ವ್ಯತ್ಯಾಸವಿಲ್ಲ. ಎಲ್ಲ ಸೇವೆಗಳೂ ಪವಿತ್ರವೇ. ನಿಮ್ಮನ್ನು ಅವಮಾನಕಾರಿಯಾಗಿ ನಡೆಸಿಕೊಳ್ಳುವುದು ಸರಿಯಲ್ಲ. ನಿಮಗೂ ವೃತ್ತಿಗೌರವ, ಘನತೆ ಸಿಗಬೇಕು.

15,400 ಮಂದಿ ಪೌರ ಕಾರ್ಮಿಕರು
ಬಿಬಿಎಂಪಿಯಲ್ಲಿ ನೇರ ವೇತನ ಪಾವತಿ ವ್ಯವಸ್ಥೆಯಡಿ 15,400 ಮಂದಿ ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಅರ್ಹ 12,699 ಮಂದಿಗೆ ನೇಮಕಾತಿ ಪತ್ರ ನೀಡಲು ಆಡಳಿತ ವಿಭಾಗವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಪಾಲಿಕೆಯು ಈ ಮೊದಲು 4 ಸಾವಿರ ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ನಿರ್ಧರಿಸಿತ್ತು. ಆನಂತರ ನೇರ ವೇತನ ಪಾವತಿಯಡಿ 2 ವರ್ಷ ಕೆಲಸ ಮಾಡಿರುವ, 55 ವರ್ಷದೊಳಗಿನ ಎಲ್ಲ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಲು ತೀರ್ಮಾನಿಸಿ, ಅರ್ಜಿ ಆಹ್ವಾನಿಸಿತ್ತು. ಅಂತಿಮವಾಗಿ 12,699 ಮಂದಿ ಆಯ್ಕೆ ಮಾಡಲಾಗಿದ್ದು, ಅಂತಿಮ ಆಯ್ಕೆ ಪಟ್ಟಿಯನ್ನೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಉಳಿದ 2701 ಮಂದಿ ಪೌರ ಕಾರ್ಮಿಕರು ಎರಡು ವರ್ಷ ಸೇವಾವಧಿ ಪೂರ್ಣಗೊಳಿಸಿಲ್ಲ. ಹೀಗಾಗಿ, ಅವರನ್ನು ಕಾಯಂಗೆ ಪರಿಗಣಿಸಿಲ್ಲ.

ಮೇ 1ರಂದು ನೇಮಕಾತಿ ಆದೇಶ
ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 12,699 ಮಂದಿ ಪೌರ ಕಾರ್ಮಿಕರ ಸೇವೆ ಕಾಯಂಗೆ ಪಟ್ಟಿ ಸಿದ್ಧಪಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದಂತೆ ಮೇ 1ರಂದು ನೇಮಕಾತಿ ಪತ್ರ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 4 ಸಾವಿರ ಮಂದಿ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ನೀಡಲು ಉದ್ದೇಶಿಸಲಾಗಿದೆ.ಅಂತಿಮವಾಗಿ ಆಯ್ಕೆಯಾಗಿರುವ ಪೌರ ಕಾರ್ಮಿಕರ ವಿವರವನ್ನು ಪೊಲೀಸ್‌ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಆಯ್ಕೆಯಾದವರ ಪೊಲೀಸ್‌ ತಪಾಸಣೆ ಮತ್ತು ಮೀಸಲಾತಿ ಪ್ರಮಾಣಪತ್ರಗಳ ಸಿಂಧುತ್ವ ಪರೀಕ್ಷೆ ನಡೆಯುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಹಂತ- ಹಂತವಾಗಿ ಎಲ್ಲರಿಗೂ ನೇಮಕಾತಿ ಆದೇಶ ಪತ್ರ ವಿತರಿಸಲು ತೀರ್ಮಾನಿಸಲಾಗಿದೆ.ವೇತನ 32-33 ಸಾವಿರಕ್ಕೆ ಏರಿಕೆ
ಪೌರ ಕಾರ್ಮಿಕರ ಸೇವೆ ಕಾಯಂ ಆದ ತಕ್ಷಣವೇ ವೇತನವು 17 ಸಾವಿರ ರೂ. ನಿಂದ 32-33 ಸಾವಿರ ರೂ.ಗಳಿಗೆ ಏರಿಕೆಯಾಗುತ್ತದೆ. ಗ್ರೂಪ್‌ ‘ಡಿ’ ವೃಂದಕ್ಕೆ ಸೇರ್ಪಡೆಯಾಗುತ್ತಾರೆ.

ನೇರ ವೇತನ ಪಾವತಿ ವ್ಯವಸ್ಥೆ ಜಾರಿಗೆ ಮುನ್ನ ಕೇವಲ 7 ಸಾವಿರ ರೂ. ವೇತನ ನೀಡಲಾಗುತ್ತಿತ್ತು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೇ ಪೌರ ಕಾರ್ಮಿಕರ ವೇತನವನ್ನು 17 ಸಾವಿರಕ್ಕೆ ಏರಿಕೆ ಮಾಡಿ, ನೇರ ಪಾವತಿ ವ್ಯವಸ್ಥೆ ಜಾರಿಗೆ ತಂದರು. ಆ ಮೂಲಕ ಗುತ್ತಿಗೆದಾರರ ಸಂಕೋಲೆಯಲ್ಲಿದ್ದ ಪೌರ ಕಾರ್ಮಿಕರನ್ನು ವಿಮುಕ್ತಿಗೊಳಿಸಿದರು. ಗುತ್ತಿಗೆದಾರರಡಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪೌರ ಕಾರ್ಮಿಕರು ಸಾಕಷ್ಟು ಶೋಷಣೆಗೀಡಾಗುತ್ತಿದ್ದರು. ಸೂಕ್ತ ಸಂಬಳ, ಇಎಸ್‌ಐ, ಪಿಎಫ್‌ ಸೌಲಭ್ಯವಿಲ್ಲದಿಂದ ವಂಚಿತರಾಗಿದ್ದರು.730 ಕೋಟಿ ರೂ. ಮೀಸಲು
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪೌರ ಕಾರ್ಮಿಕರ ವೇತನಕ್ಕೆ 500 ಕೋಟಿ ರೂ., ಪಿಂಚಣಿಗೆ 107 ಕೋಟಿ ರೂ. ಮೀಸಲಿಡಲಾಗಿದೆ. 6 ಸಾವಿರ ರೂ. ಪಿಂಚಣಿ ನೀಡುವ ಯೋಜನೆ ತರಲಾಗಿದೆ. ಒಟ್ಟಾರೆ, ಪೌರಕಾರ್ಮಿಕರ ಕಲ್ಯಾಣಕ್ಕಾಗಿ 730 ಕೋಟಿ ರೂ. ಕಾಯ್ದಿರಿಸಲಾಗಿದೆ.

ಬಿಬಿಎಂಪಿಯಲ್ಲಿನೇರ ವೇತನ ಪಾವತಿ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ಅರ್ಹ 12,699 ಮಂದಿ ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ. ಪೊಲೀಸ್‌ ತಪಾಸಣೆ ಮತ್ತು ಮೀಸಲಾತಿ ಪ್ರಮಾಣಪತ್ರಗಳ ಸಿಂಧುತ್ವ ಪರಿಶೀಲಿಸಲಾಗುತ್ತಿದೆ. ಪೊಲೀಸ್‌ ಇಲಾಖೆಯು 10 ಸಾವಿರ ಪೌರ ಕಾರ್ಮಿಕರ ಪರಿಶೀಲನಾ ವರದಿ ಸಲ್ಲಿಸಿದೆ. ಜಿಲ್ಲಾಡಳಿತವು 300 ಮಂದಿಯ ಮೀಸಲಾತಿ ಪ್ರಮಾಣಪತ್ರಗಳ ನೈಜತೆ ಪರಿಶೀಲಿಸಿ, ಸಿಂಧುತ್ವ ವರದಿ ಸಲ್ಲಿಕೆ ಮಾಡಿದೆ. ಮೊದಲ ಹಂತದಲ್ಲಿ ಮೇ 1ರಂದು 4 ಸಾವಿರ ಮಂದಿಗೆ ಕಾಯಂ ನೇಮಕಾತಿ ಆದೇಶ ಪತ್ರ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಉಪ ಆಯುಕ್ತ (ಆಡಳಿತ) ಬಿ.ಎಸ್‌. ಮಂಜುನಾಥ ಸ್ವಾಮಿ ಹೇಳಿದರು.

ವಲಯವಾರು ಪೌರ ಕಾರ್ಮಿಕರ ಅಂತಿಮ ಆಯ್ಕೆ ಪಟ್ಟಿ
ಪೂರ್ವ – 2,341
ಪಶ್ಚಿಮ – 2,564
ದಕ್ಷಿಣ – 3,012
ಬೊಮ್ಮನಹಳ್ಳಿ – 1,019
ಆರ್‌.ಆರ್‌.ನಗರ – 1,118
ಮಹದೇವಪುರ – 1,369
ದಾಸರಹಳ್ಳಿ – 468
ಮಹದೇವಪುರ – 1,369
ಒಟ್ಟು – 12,699

Leave a Reply

Your email address will not be published. Required fields are marked *