BBMP
Loading ...

BBMP Election

ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾನಗರದಲ್ಲಿ 4 ವರ್ಷಗಳಿಂದ ಅಧಿಕಾರಿಗಳ ಆಡಳಿತ ಜಾರಿಯಲ್ಲಿದ್ದು, ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿಅಭಿವೃದ್ಧಿ ಕಾಮಗಾರಿಗಳು ಗೌಣವಾಗಿವೆ. ಬಜೆಟ್‌ನಲ್ಲಿ ಘೋಷಣೆಗಳೇನೋ ಜೋರಾಗಿದ್ದವು. ಆದರೆ, ಅನುಷ್ಠಾನವಾಗಿರುವುದು ಚೂರು-ಪಾರು ಮಾತ್ರ.

ಕಳೆದ ನಾಲ್ಕು ವರ್ಷಗಳಿಂದ ಅಧಿಕಾರಿಗಳೇ ಆಯವ್ಯಯ ಮಂಡಿಸುತ್ತಿದ್ದು, ಜನಪರ ಯೋಜನೆಗಳ ಘೋಷಣೆಗೆ ಬರವಿಲ್ಲ. ಆದರೆ, ಪ್ರಮುಖ ಯೋಜನೆಗಳ ಅನುಷ್ಠಾನವಾಗುತ್ತಿಲ್ಲ. ಪ್ರತಿ ವರ್ಷ 11 ರಿಂದ 12 ಸಾವಿರ ಕೋಟಿ ರೂ. ವೆಚ್ಚದ ಬಜೆಟ್‌ ಮಂಡನೆ ಮಾಡಲಾಗುತ್ತಿದ್ದು, ಅದರ ಪ್ರಯೋಜನವು ನಗರ ವಾಸಿಗಳಿಗೆ ದಕ್ಕದಂತಾಗಿದೆ.

2024-25 ನೇ ಸಾಲಿನಲ್ಲಿ ಘೋಷಿಸಿದ ಬಹುತೇಕ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ಪ್ರಾಥಮಿಕ ಪ್ರಕ್ರಿಯೆಗಳೇ ನಡೆದಿಲ್ಲ. ಕಾರ್ಯಕ್ರಮಗಳೆಲ್ಲವೂ ಬಜೆಟ್‌ ಪುಸ್ತಕದಲ್ಲಿಯೇ ಉಳಿದಿವೆ. ಕಲ್ಯಾಣ ಕಾರ್ಯಕ್ರಮಗಳನ್ನೂ ಬಡ, ಮಧ್ಯಮ ವರ್ಗದ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿಲ್ಲ. ಸಂಚಾರ ದಟ್ಟಣೆ ಸಮಸ್ಯೆಯ ಪರಿಹಾರಕ್ಕಾಗಿ ಕೈಗೊಂಡ ಮೇಲ್ಸೇತುವೆ, ಕೆಳಸೇತುವೆ, ರಸ್ತೆಗಳ ವಿಸ್ತರಣೆ ಕಾಮಗಾರಿಗಳು ತೆವಳುತ್ತಲೇ ಇವೆ.

ನಿರ್ವಹಣೆಗಷ್ಟೇ ಸೀಮಿತವಾದ ಆಡಳಿತ
ರಾಜಧಾನಿಯ ಬಹುತೇಕ ಎಲ್ಲವಾರ್ಡ್‌ಗಳಲ್ಲಿ ನಿರ್ವಹಣೆ ಕಾಮಗಾರಿಗಳಷ್ಟೇ ನಡೆಯುತ್ತಿವೆ. ರಸ್ತೆ ಗುಂಡಿ ಮುಚ್ಚುವುದು, ಚರಂಡಿಗಳಲ್ಲಿಹೂಳೆತ್ತುವುದು, ಪಾದಚಾರಿ ಮಾರ್ಗಗಳ ದುರಸ್ತಿ, ಕಸ ಸಂಗ್ರಹ ಮತ್ತು ವಿಲೇವಾರಿ ಸೇರಿದಂತೆ ಇತರೆ ಕೆಲಸ ಕಾರ್ಯಗಳನ್ನಷ್ಟೇ ಮಾಡಲಾಗುತ್ತಿದೆ.

ಸಂಚಾರ ದಟ್ಟಣೆ, ಕಸ, ರಸ್ತೆ ಗುಂಡಿಯಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೀರ್ಘಕಾಲಿನ ಯೋಜನೆಗಳನ್ನು ಕೈಗೊಂಡಿಲ್ಲ. ಬ್ರ್ಯಾಂಡ್‌ ಬೆಂಗಳೂರು ಘೋಷಣೆಯೊಂದಿಗೆ ಸುರಂಗ ರಸ್ತೆ, ಸ್ಕೈಡೆಕ್‌ನಂತಹ ಯೋಜನೆಗಳಿಗೆ ಜೋತು ಬೀಳಲಾಗಿದೆ. ಕಳೆದ 4 ವರ್ಷಗಳಲ್ಲಿಗುರುತಿಸಬಹುದಾದಂತಹ ಯೋಜನೆಗಳನ್ನೇ ಕೈಗೊಂಡಿಲ್ಲ. ಜಂಕ್ಷನ್‌ಗಳ ಅಭಿವೃದ್ಧಿ, ಹೈಡೆನ್ಸಿಟಿ ಕಾರಿಡಾರ್‌ಗಳಲ್ಲಿಏಕರೂಪದ ರಸ್ತೆಗಳ ನಿರ್ಮಿಸಿ ಚೆಂದಗಾಣಿಸಲು ಪ್ರಯತ್ನಿಸುತ್ತಿರುವ ಅಧಿಕಾರಿಗಳು, ಅವುಗಳಿಗೇ ಅಭಿವೃದ್ಧಿ ಎಂಬ ಹಣೆಪಟ್ಟಿ ಕಟ್ಟಿ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಕೋಟ್ಯಂತರ ರೂ. ಕಾಂಚಾಣದ ಈ ಕಾಮಗಾರಿಗಳಿಂದ ಗುತ್ತಿಗೆದಾರರು, ಅಧಿಕಾರಿಗಳಿಗಷ್ಟೇ ಅನುಕೂಲವಾಗುತ್ತಿದೆಯೇ ವಿನಃ, ಸಾರ್ವಜನಿಕರಿಗೇನೂ ಪ್ರಯೋಜನವಾಗುತ್ತಿಲ್ಲ.

ತೆವಳುತ್ತಿರುವ ಕಾಮಗಾರಿಗಳು
ಬಿಬಿಎಂಪಿ ಮತ್ತು ಸರಕಾರದ ಅನುದಾನದಲ್ಲಿಕೈಗೊಂಡಿರುವ ಬಹುತೇಕ ಕಾಮಗಾರಿಗಳು ತೆವಳುತ್ತಿವೆ. ಅರ್ಧಕ್ಕೇ ನಿಂತಿರುವ ಕಾಮಗಾರಿಗಳು ನಗರದೆಲ್ಲೆಡೆ ಕಾಣ ಸಿಗುತ್ತವೆ. ಪ್ರತಿ ವಾರ್ಡ್‌ಗಳಲ್ಲಿ ನಿರ್ವಹಣೆ ಕೆಲಸಗಳಿಗಾಗಿ 75 ಲಕ್ಷ ರೂ., ಚರಂಡಿಗಳಲ್ಲಿಹೂಳೆತ್ತುವುದು, ನಿರ್ವಹಣೆಗೆ ತಲಾ 30 ಲಕ್ಷ ರೂ., ರಸ್ತೆ ಗುಂಡಿ ಮುಚ್ಚಲು ತಲಾ 15 ಲಕ್ಷ ರೂ., ಪಾದಚಾರಿ ಮಾರ್ಗಗಳ ನಿರ್ವಹಣೆಗೆ ತಲಾ 25 ಲಕ್ಷ, ಮಳೆಗಾಲದಲ್ಲಿನಿಯಂತ್ರಣ ಕೊಠಡಿಗಳ ನಿರ್ವಹಣೆಗೆ ತಲಾ 5 ಲಕ್ಷ ನೀಡಲಾಗುತ್ತದೆ. ಅಭಿವೃದ್ಧಿ ಕಾಮಗಾರಿಗಳಿಗೆ ಪ್ರತಿ ವಾರ್ಡ್‌ಗೆ ತಲಾ 1.25 ಕೋಟಿ ರೂ. ಒದಗಿಸಲಾಗಿದೆ. ಆದರೆ, ಗುಂಡಿಗಳಿಗೆ ತೇಪೆ ಹಾಕುವುದು, ಚರಂಡಿಗಳಲ್ಲಿಹೂಳು ತೆರವು ಮಾಡುವುದಕ್ಕಷ್ಟೇ ಅಭಿವೃದ್ಧಿ ಕಾಮಗಾರಿಗಳು ಸೀಮಿತವಾಗಿವೆ.

ಕೋರಮಂಗಲ ಬಳಿಯ ಈಜಿಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯು 8 ವರ್ಷದಿಂದ ತೆವಳುತ್ತಲೇ ಇದೆ. ಹೊರವರ್ತುಲ ರಸ್ತೆಯ ವೀರಭದ್ರನಗರ ಜಂಕ್ಷನ್‌, ಯಲಹಂಕ ಉಪನಗರದಲ್ಲಿಕೈಗೊಂಡಿರುವ ಮೇಲ್ಸೇತುವೆ ಕಾಮಗಾರಿಗಳೂ ಆಮೆಗತಿಯಲ್ಲಿಸಾಗಿದ್ದು, ವಾಹನ ಸವಾರರು ಸಂಚಾರ ದಟ್ಟಣೆಯಿಂದ ಹೈರಾಣಾಗಿದ್ದಾರೆ.

ರಾಜಕಾಲುವೆಗಳ ಅಭಿವೃದ್ಧಿ, ಹೂಳು ತೆರವು ಕಾರ್ಯ ಸಮರ್ಪಕವಾಗಿ ನಡೆಯದ ಕಾರಣ, ಮಳೆ ಬಂದಾಗ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಮಳೆ-ಗಾಳಿಗೆ ಮರಗಳು ಬಿದ್ದು ಪ್ರಾಣ ಹಾನಿಗಳಾಗುತ್ತಿವೆ. ಕೆ.ಆರ್‌.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆವರೆಗಿನ ರಾಜಕಾಲುವೆಯಲ್ಲಿಶುದ್ಧ ಮಳೆ ನೀರು ಹರಿಸಲು ಕೈಗೊಂಡು ‘ನಾಗರಿಕ ಜಲಮಾರ್ಗ’ ಯೋಜನೆಗೆ ವೆಚ್ಚ ಮಾಡುತ್ತಿರುವ 175 ಕೋಟಿ ರೂ.ಗಳು ಕೊಳಚೆ ನೀರಿನ ಪಾಲಾಗಿದೆ. ಕಲ್ಯಾಣ ಕಾರ್ಯಕ್ರಮಗಳು ಫಲಾನುಭವಿಗಳನ್ನು ತಲುಪುತ್ತಿಲ್ಲ. ಉದ್ಯಾನಗಳಲ್ಲಿಮೂಲಸೌಲಭ್ಯದ ಕೊರತೆ ಎದ್ದು ಕಾಣುತ್ತಿದೆ. ನಿರ್ವಹಣೆ ಕೊರತೆ, ಸ್ವಚ್ಛತೆ ಬಗೆಗಿನ ನಿರ್ಲಕ್ಷ್ಯದ ಕುರಿತು ನಿತ್ಯವೂ ನಾಗರಿಕರು ದೂರು ನೀಡುತ್ತಲೇ ಇದ್ದಾರೆ. ಕಾಂಗ್ರೆಸ್‌ ಸರಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್‌ ಯೋಜನೆಯೂ ಹಳ್ಳ ಹಿಡಿಯುತ್ತಿದೆ. ಟೆಂಡರ್‌ ಪ್ರಕ್ರಿಯೆ ಅಂತಿಮಗೊಳಿಸಿ, ಶುಚಿ-ರುಚಿಯಾದ ಆಹಾರ ಒದಗಿಸುವ ಕೆಲಸ ನಡೆಯುತ್ತಿಲ್ಲ.

ಸಿಲಿಕಾನ್‌ ಸಿಟಿಯಲ್ಲಿ ಸುಗಮ ಸಂಚಾರಕ್ಕೆ ಕೋಟ್ಯಂತರ ರೂ. ವೆಚ್ಚದ ಹತ್ತಾರು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಿದ್ದು, ಅವೆಲ್ಲವೂ ಪುಸ್ತಕದಲ್ಲಿಯೇ ಉಳಿದಿವೆ. ಹೊಸ ಮೇಲ್ಸೇತುವೆಗಳು ಆರಂಭವಾಗದಿರುವುದು ಒಂದೆಡೆಯಾದರೆ, ಪ್ರಗತಿಯಲ್ಲಿರುವ ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿಗಳು ಆಮೆಗತಿಯಲ್ಲಿಸಾಗುತ್ತಿದ್ದು, ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಲೇ ಇವೆ.

ಬೆಂಗಳೂರು: ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಬಿಬಿಎಂಪಿಯಿಂದ ಸಹಾಯವಾಣಿ ಆರಂಭ

Leave a Reply

Your email address will not be published. Required fields are marked *