ಬೆಂಗಳೂರು: ಓಲಾ ಆಟೋ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಯುವತಿಗೆ ನಿಂದಿಸಿದ ಕಾರಣಕ್ಕೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಆಟೋ ಚಾಲಕ ಜಾಮೀನಿಗೆ ಹಣ ಹೊಂದಿಸಲು ಪರದಾಡುತ್ತಿದ್ದಾನೆ.
ಇತ್ತೀಚೆಗೆ ಮುತ್ತುರಾಜ್ ಎಂಬ ಆಟೋ ಚಾಲಕ, ಓಲಾ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದಕ್ಕೆ ಅವಾಚ್ಯ ಶಬ್ಧದಿಂದ ನಿಂದಿಸಿ ಯುವತಿಯ ಕಪ್ಪಾಳಕೆ ಹೊಡೆದಿದ್ದ ಘಟನೆ ರಾಜ್ಕುಮಾರ್ ರಸ್ತೆಯಲ್ಲಿ ನಡೆದಿತ್ತು. ಅಲ್ಲದೆ, ಚಾಲಕ, ಯುವತಿಗೆ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆಯ ಬಳಿಕ ಪೊಲೀಸರು ಯುವತಿಯನ್ನು ಕರೆಸಿ ದೂರು ಪಡೆದಿದ್ದರು.
ದೂರು ದಾಖಲಾದ ಬೆನ್ನಲ್ಲೇ ಸೆ. 5ರಂದು ಆಟೋ ಚಾಲಕನನ್ನು ಮಾಗಡಿ ರಸ್ತೆ ಸಂಚಾರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆಟೋ ಚಾಲಕ ಮುತ್ತುರಾಜ್ ಒಂದು ರೈಡ್ಗಾಗಿ ಜಗಳ ಮಾಡಿ ಈಗ ಫಜೀತಿಗೆ ಸಿಲುಕಿದ್ದಾರೆ.
ಬುಕ್ಕಿಂಗ್ ಕ್ಯಾನ್ಸಲ್ ಮಾಡಿದರೆ 20 ರಿಂದ 30 ರೂ. ಅಷ್ಟೇ ನಷ್ಟವಾಗುತ್ತಿತ್ತು. ಆದರೀಗ ಲಾಯರ್ ಖರ್ಚು ಸೇರಿ ಜಾಮೀನಿನ ಪ್ರಕ್ರಿಯೆಗೆ ಅಂದಾಜು 30 ಸಾವಿರ ಹೊಂದಿಸಬೇಕಾಗಿದೆ. ಆದರೆ ಈಗ 30 ಸಾವಿರ ರೂ. ಹೊಂದಿಸಲು ಸಾಧ್ಯವಾಗದೆ ಪೀಕಲಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಂಕಷ್ಟದಲ್ಲಿ ಸಿಲುಕಿದ ಎಸ್ಕಾಂಗಳು; ಸ್ಥಳೀಯ ಸಂಸ್ಥೆಗಳಿಂದ ಬಾಕಿ ಹಣ ವಸೂಲಿಗೆ ಕ್ರಮ


