BBMP
Loading ...

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿ ಕೆ.ಆರ್. ನಗರ ಸಂತ್ರಸ್ತೆ ಕಿಡ್ನ್ಯಾಪ್ ಕೇಸ್‌ನಲ್ಲಿ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣ ಬಂಧನಕ್ಕೆ ಕೋರ್ಟ್‌ ವಾರಂಟ್ ಜಾರಿ ಮಾಡಿದೆ. ವಿಚಾರಣೆಗೆ ಆಗಮಿಸುವಂತೆ ಎಸ್ಐಟಿ ನೋಟಿಸ್‌ ನೀಡಿತ್ತು. ಆದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿತ್ತು. ಇದರ ಬೆನ್ನಲ್ಲೇ ಭವಾನಿ ರೇವಣ್ಣ ವಿರುದ್ಧ 42ನೇ ಎಸಿಎಂಎಂ ಕೋರ್ಟ್‌ ಬಂಧನ ವಾರಂಟ್ ಹೊರಡಿಸಿದೆ.

ಇತ್ತೀಚೆಗೆ ಭವಾನಿ ರೇವಣ್ಣ  ಅವರನ್ನು ವಶಕ್ಕೆ ಪಡೆಯಲು ಹೊಳೆನರಸೀಪುರ ನಿವಾಸಕ್ಕೆ ತೆರಳಿದ್ದ ಎಸ್‌ಐಟಿ ಅಧಿಕಾರಿಗಳು ಸತತ 7 ಗಂಟೆ ಕಾದು ವಾಪಸ್‌ ಆಗಿದ್ದರು. ವಿಚಾರಣೆಗೆ ಆಗಮಿಸುವುದಾಗಿ ಹೇಳಿದ್ದ ಭವಾನಿ ರೇವಣ್ಣ ಮನೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅಧಿಕಾರಿಗಳು ವರದಿ ಮಾಡಿಕೊಂಡು ವಾಪಸ್‌ ತೆರಳಿದ್ದರು. ಇದೀಗ ಭವಾನಿ ರೇವಣ್ಣ ಬಂಧನಕ್ಕೆ ವಾರಂಟ್‌ ಪಡೆದಿದ್ದಾರೆ.

ಭವಾನಿ ರೇವಣ್ಣರನ್ನು ಮರೆತೇ ಬಿಟ್ಟ ಎಸ್‌ಐಟಿ!
ಕೆ.ಆರ್‌ ನಗರದಲ್ಲಿ ಲೈಂಗಿಕ ದೌರ್ಜನ್ಯ  ಸಂತ್ರಸ್ತೆಯೊಬ್ಬರನ್ನು ಅಪಹರಣ  ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣ  ಒಂದು ವಾರದಿಂದ ತಲೆ ಮರೆಸಿಕೊಂಡಿದ್ದಾರೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ  ಅಧಿಕಾರಿಗಳು ಒಂದು ದಿನ ಮಾತ್ರ ಭವಾನಿ ಮನೆಯ ಮುಂದೆ ಪಹರೆ ಕಾದಿದ್ದು, ನಂತರ ಮರೆತೇ ಬಿಟ್ಟಂತಿದೆ.

ಮಾಜಿ ಸಚಿವ ಹೆಚ್.ಡಿ ರೇವಣ್ಣ  ಅವರ ಬಂಧನ ಮಾಡಲು ಎಸ್‌ಐಟಿ ಬಲು ತರಾತುರಿಯಲ್ಲಿತ್ತು. ಅಗತ್ಯವಿಲ್ಲ ಎನಿಸಿದರೂ ರೇವಣ್ಣರನ್ನು ಕರೆದುಕೊಂಡು ಬಂದು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿ, ಜಾಮೀನು ದೊರೆಯದಂತೆ ತುಂಬಾ ಪ್ರಯತ್ನಿಸಿತ್ತು. ಈ ಪ್ರಕರಣದಲ್ಲಿ ರೇವಣ್ಣ ಅವರ ಪಾತ್ರ ಹೆಚ್ಚೇನೂ ಇಲ್ಲ ಎಂದು ತಿಳಿದಿದ್ದರೂ, ಹೆಚ್ಚಿನ ವಿಚಾರಣೆಗೆ ಹೆಚ್ಚಿನ ಸಮಯ ಕಸ್ಟಡಿಗೆ ಕೊಡುವಂತೆ ನ್ಯಾಯಾಲಯವನ್ನು ಕೋರಿತ್ತು. ಆದರೆ ಭವಾನಿ ವಿಷಯದಲ್ಲಿ ಅಂಥ ತರಾತುರಿಯನ್ನು ಎಸ್‌ಐಟಿ ತೋರಿಸಿಲ್ಲ.

ಎಚ್.ಡಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಅವರನ್ನು ಎಸ್‌ಐಟಿ ಬಂಧನ ಮಾಡಿತ್ತು. ಆದರೆ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿ ವಾರವೇ ಕಳೆದಿದೆ. ಅಲ್ಲದೆ ಎಸ್‌ಐಟಿಯ ಎರಡು ನೊಟೀಸ್‌ಗಳಿಗೂ ಭವಾನಿ ಕ್ಯಾರೇ ಎಂದಿಲ್ಲ. ಎರಡು ಸಲ ನೋಟೀಸ್‌ ನೀಡಿದ ಬಳಿಕ, ʼತನಿಖೆಗೆ ಬೇಕಿದ್ದರೆ ಹೊಳೆನರಸೀಪುರದ ಮನೆಗೆ ಬನ್ನಿʼ ಎಂದು ಉತ್ತರಿಸಿದ್ದರು. ಎಸ್‌ಐಟಿ ಟೀಮ್‌ ಅಲ್ಲಿಗೆ ತೆರಳಿದಾಗ ಅಲ್ಲಿಂದ ನಾಪತ್ತೆಯಾಗಿದ್ದರು. ಎಸ್‌ಐಟಿ ತಂಡ ಇಡೀ ದಿನ ಕಾದು ವಾಪಸಾಗಿತ್ತು. ಎಲ್ಲಿದ್ದಾರೆ ಎಂದು ಹುಡುಕುವ ಯತ್ನವನ್ನೂ ಎಸ್‌ಐಟಿ ಮಾಡಿದಂತಿಲ್ಲ.

ಇದೀಗ ಭವಾನಿ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದ ಕಾರಣ ಒಂದು ತಿಂಗಳ ಕಾಲ ಬಂಧನ ಸಾಧ್ಯವಾಗಿಲಿಲ್ಲ. ಆದರೆ ಭವಾನಿ ರೇವಣ್ಣ ದೇಶದಲ್ಲಿಯೇ ತಲೆ ಮರೆಸಿಕೊಂಡಿದ್ದು, ಎಲ್ಲಿದ್ದಾರೆ ಎಂಬ ಸುಳಿವು ದೊರೆತಿಲ್ಲ. ಕಿಡ್ನಾಪ್ ಪ್ರಕರಣದಲ್ಲಿ ಭವಾನಿ ಪಾತ್ರ ಇದೆ ಎಂಬುದಕ್ಕೆ ಹಲವು ದಾಖಲೆಗಳನ್ನು ಎಸ್‌ಐಟಿ ನ್ಯಾಯಾಲಯಕ್ಕೆ ನೀಡಿತ್ತು. ಆದರೆ ಬಂಧನ ಮಾಡದೇ ಇರುವ ಕುರಿತು ಕುತೂಹಲ ಹುಟ್ಟಿಕೊಂಡಿದೆ.

ಈಗಾಗಲೇ ಪ್ರಜ್ವಲ್‌ ಹಾಗೂ ರೇವಣ್ಣ ಬಂಧನದ ನಂತರ, ದೇವೇಗೌಡ ಕುಟುಂಬದ ಮೇಲೆ ದ್ವೇಷ ರಾಜಕಾರಣ ನಡೆಸಲಾಗುತ್ತಿದೆ ಎಂಬ ಅಭಿಪ್ರಾಯವನ್ನು ಹರಡಲು ಜೆಡಿಎಸ್‌ ಬಹುಪಾಲು ಯಶಸ್ವಿಯಾಗಿದೆ. ಭವಾನಿ ಬಂಧನ ಆದರೆ ಈ ಅಭಿಪ್ರಾಯಕ್ಕೆ ಇನ್ನಷ್ಟು ಪುಷ್ಟಿ ನೀಡಿದಂತಾಗುತ್ತದೆ ಎಂಬ ಕಾರಣದಿಂದ, ಭವಾನಿ ಬಂಧನಕ್ಕೆ ತಡೆ ಹಾಕಲು ಮೇಲಿನಿಂದಲೇ ಸೂಚನೆ ಬಂದಿದೆಯಾ? ಎಂದೂ ಕೂಡ ಮಾತನಾಡಿಕೊಳ್ಳಲಾಗುತ್ತಿದೆ.

ಪೊಲೀಸರ ಕಣ್ಣಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಭವಾನಿಯನ್ನು ವಶಕ್ಕೆ ಪಡೆಯಲು ಪೊಲೀಸರ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಿಯಮದ 41a ಅಡಿ ಭವಾನಿ ರೇವಣ್ಣಗೆ ಎಸ್ ಐ ಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಾಗಿತ್ತು. ಪ್ರಜ್ವಲ್‌ಗೂ 41a ಅಡಿ ನೊಟೀಸ್ ನೀಡಿದ್ದ ಎಸ್ಐಟಿ ಆ ಬಳಿಕ ಬಂಧಿಸಿತ್ತು. ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಈಗ ಭವಾನಿ ರೇವಣ್ಣಗೂ ಅರೆಸ್ಟ್ ವಾರೆಂಟ್ ಜಾರಿ ಮಾಡುವ ಸಾಧ್ಯತೆ ಇದೆ. ತಾವೇ ಎಸ್ ಐ ಟಿ ಕಚೇರಿಗೆ ಬರುವುದಾಗಿ ಹೇಳಿದ್ದ ಭವಾನಿ ರೇವಣ್ಣ ಆ ಬಳಿಕ ಬರದೇ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದಾರೆ.

ಪೊಲೀಸರ ನಾಲ್ಕು ವಿಶೇಷ ತಂಡಗಳಿಂದ ಭವಾನಿ ರೇವಣ್ಣಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬೆಂಗಳೂರು, ಮೈಸೂರು, ಹಾಸನ ಈ ಮೂರು ಜಿಲ್ಲೆಗಳಲ್ಲಿ ಭವಾನಿ ರೇವಣ್ಣಗಾಗಿ ಮುಖ್ಯವಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಮೂರು ಜಿಲ್ಲೆಗಳಲ್ಲಿ ಮೂರು ಪೊಲೀಸ್ ತಂಡಗಳು ಬೀಡುಬಿಟ್ಟಿವೆ. ನಾಲ್ಕನೇ ಟೆಕ್ನಿಕಲ್ ತಂಡದಿಂದಲೂ ಭವಾನಿ ರೇವಣ್ಣ ಬಗ್ಗೆ ಟ್ರ್ಯಾಕಿಂಗ್ ನಡೆಯುತ್ತಿದೆ. ಈ ತಾಂತ್ರಿಕ ತಂಡ ಭವಾನಿ ರೇವಣ್ಣ ಅವರ ಮೊಬೈಲ್ ಟ್ರ್ಯಾಕ್ ಮಾಡುತ್ತಿದೆ. ಟವರ್ ಡಂಪ್ ಲೊಕೇಷನ್, ಸಿಡಿಆರ್ ಪರಿಶೀಲನೆ ನಡೆಸುತ್ತಿದೆ.

Leave a Reply

Your email address will not be published. Required fields are marked *