ಬೆಂಗಳೂರು: ‘ಬಿಬಿಎಂಪಿ ಚುನಾವಣೆಗೆ ಜೆಡಿಎಸ್ನಿಂದ ಸ್ಪರ್ಧಿಸಲು ಎಲ್ಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳುತ್ತೇವೆ. ಎಲ್ಲ ವಾರ್ಡ್ಗಳಲ್ಲೂ ಪಕ್ಷ ಸಂಘಟನೆ ಮಾಡುತ್ತೇವೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ‘ಬೆಂಗಳೂರಿನಲ್ಲಿ ಈಗ ಕನ್ನಡೇತರರ ಸಂಖ್ಯೆಯೇ ಹೆಚ್ಚು ಇದೆ. ಉತ್ತರ ಭಾರತೀಯರಿಗೆ ಜೆಡಿಎಸ್ ಎಂಬ ಪಕ್ಷ ಇದೆ ಎಂಬುದೇ ಗೊತ್ತಿಲ್ಲ. ಅವರೆಲ್ಲರನ್ನೂ ಭೇಟಿ ಮಾಡಿ, ಬೆಂಗಳೂರಿಗಾಗಿ ನಮ್ಮ ಪಕ್ಷ ಏನೆಲ್ಲಾ ಮಾಡಿದೆ ಎಂಬುದನ್ನು ತಿಳಿಸುತ್ತೇವೆ. ಜತೆಗೆ ಅಧಿಕಾರಕ್ಕೆ ಬಂದರೆ ಏನೆಲ್ಲಾ ಮಾಡುತ್ತೇವೆ ಎಂಬುದನ್ನೂ ಹೇಳುತ್ತೇವೆ’ ಎಂದರು.
‘ಎಲ್ಲ ವಾರ್ಡ್ಗಳಿಗೂ ನಾಯಕರನ್ನು ನಾನೇ ಆಯ್ಕೆ ಮಾಡುತ್ತೇನೆ. ಪ್ರತಿ ಮನೆಗೂ ಭೇಟಿ ನೀಡಿ, ಮತದಾರರ ಜತೆ ಮಾತನಾಡುತ್ತೇನೆ. ಜನರು ನಮಗೆ ಅಧಿಕಾರ, ಶಕ್ತಿ ನೀಡಿದರೆ ಬೆಂಗಳೂರನ್ನು ಸುಸ್ಥಿತಿಗೆ ತರುತ್ತೇವೆ’ ಎಂದರು.
‘ನಗರದಲ್ಲಿ ಮಳೆ ಬಂದರೆ ರಸ್ತೆಗಳೆಲ್ಲಾ ಹೊಳೆಗಳಾಗುತ್ತಿವೆ. ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸುವ ಕೆಲಸ ನಿಧಾನಗತಿಯಲ್ಲಿದೆ. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಪ್ರತಿ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರಷ್ಟೇ ಸಮಸ್ಯೆ ಅರ್ಥವಾಗುತ್ತದೆ. ಈ ಸರ್ಕಾರ ಅದನ್ನು ಮಾಡುತ್ತಿಲ್ಲ. ಹೀಗಾಗಿಯೇ ಬೆಂಗಳೂರಿನ ಹೆಸರು ಹಾಳಾಗುತ್ತಿದೆ’ ಎಂದರು.
‘ಜೆ.ಪಿ.ನಗರದ ಕೆಲವು ಭಾಗಗಳಲ್ಲಿ ಮಳೆ ಬಂದಾಗಲೆಲ್ಲಾ ನೀರು ನಿಂತು ಪ್ರವಾಹದಂತಾಗುತ್ತಿತ್ತು. ನಾನು ಮೊದಲ ಬಾರಿ ಮುಖ್ಯಮಂತ್ರಿ ಆದಾಗ, ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದೆ. ಅಲ್ಲಿನ ಚರಂಡಿ ವ್ಯವಸ್ಥೆ ಸರಿಪಡಿಸಲು ಸೂಚಿಸಿದ್ದೆ. ಅದರಂತೆ ಕಾಮಗಾರಿ ಮಾಡಲಾಗಿತ್ತು. ಅಲ್ಲಿ ಈಗಲೂ ಮಳೆ ಬಂದರೆ ಒಂದಿಂಚೂ ನೀರು ನಿಲ್ಲುವುದಿಲ್ಲ. ಅದೇ ಮಾದರಿಯನ್ನು ಬೆಂಗಳೂರಿನ ಎಲ್ಲೆಡೆ ಅನುಸರಿಸಬೇಕು’ ಎಂದರು.
ಅನಧಿಕೃತವಾಗಿ ಕಟ್ಟಡ ನಿರ್ಮಿಸಿದವರಿಗೆ ಬಿಬಿಎಂಪಿ ಶಾಕ್: ವಿದ್ಯುತ್ ಸಂಪರ್ಕ ಕಟ್ ಮಾಡುವಂತೆ ಬೆಸ್ಕಾಂಗೆ ಸೂಚನೆ


