Greater Bengaluru News9 : ಚೇತನ್ ಅಹಿಂಸ, ಸಿನಿಮಾಗಳಿಗಿಂತಲೂ ತಮ್ಮ ರಾಜಕೀಯ ಹೇಳಿಕೆಗಳು, ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ರಾಜಕೀಯ, ಜಾಗೃತಿ ಕಾರ್ಯಕ್ರಮಗಳು, ಪ್ರತಿಭಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಟ ಚೇತನ್ ಅಹಿಂಸ ಇದೀಗ ತಮ್ಮದೇ ಆದ ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದ್ದಾರೆ. ತಮ್ಮ ಪಕ್ಷದ ಬಗ್ಗೆ ಹಲವು ವಿವರಗಳನ್ನು ಚೇತನ್ ಅಹಿಂಸ ಹಂಚಿಕೊಂಡಿದ್ದು, ಪಕ್ಷದ ಧ್ಯೇಯ, ಉದ್ದೇಶ, ಗುರಿ, ಸದಸ್ಯತ್ವ ಇನ್ನೂ ಹಲವು ವಿಷಯಗಳ ಕುರಿತಾಗಿ ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ.
ವಿವಿಧ ಸಮಾಜ ಪರ ಕೆಲಸ ಮಾಡುವ ಸಂಘಟನೆಗಳು, ದಲಿತ ಸಂಘಟನೆಗಳು, ಬಹುಜನ ಸಂಘಟನೆಗಳು ಸೇರಿದಂತೆ ಎಲ್ಲ ಸಂಘಟನೆಗಳನ್ನು ಒಗ್ಗಟ್ಟಾಗಿಸಿ ಹೊಸ ಪಕ್ಷ ಕಟ್ಟುತ್ತೇವೆ. ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. 224 ಕ್ಷೇತ್ರದಲ್ಲೂ ಪಕ್ಷ ಸಂಘಟನೆ ಮಾಡುತ್ತೇವೆ. 2027ರ ಜನವರಿ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ಪಕ್ಷದ ಹೆಸರು, ಪಕ್ಷದ ಚಿನ್ಹೆ ಪಕ್ಷದ ಪ್ರಣಾಳಿಕೆ,ಪಕ್ಷದ ಧ್ವಜ ರಾಜ್ಯ ಸಮಿತಿ ರಚನೆ, ಇನ್ನಿತರೆ ವಿಚಾರಗಳ ಘೋಷಣೆ ಮಾಡಲಿದ್ದೇವೆ ಎಂದು ಚೇತನ್ ಅಹಿಂಸ ಹೇಳಿದ್ದಾರೆ.
ಸಮ ಸಮಾಜ ಕಟ್ಟುವುದು ನಮ್ಮ ಮುಖ್ಯ ಉದ್ದೇಶ. ಅದಕ್ಕಾಗಿಯೇ ಪಕ್ಷದ ಹೆಸರಿನಲ್ಲಿ ಸಂವಿಧಾನದ ಪದಗಳಿರಲಿವೆ. ನಾವು ಪಕ್ಷವನ್ನು ರಿಜಿಸ್ಟರ್ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ ಎಂದ ಚೇತನ್ ಅಹಿಂಸ, ಪಕ್ಷದ ಪ್ರಣಾಳಿಕೆಯ 10 ಅಂಶಗಳನ್ನು ಸಹ ಹೇಳಿದ್ದು, ಅವು ಇಂತಿವೆ; ಲಿಂಗ ಸಮಾನತೆ , ಜಾತಿಯ ಸಮಾನತೆ , ಆರ್ಥಿಕ ಸಮಾನತೆ , ಭದ್ರತೆ , ಧರ್ಮ ನಿರಪೇಕ್ಷತೆ , ಪ್ರಾದೇಶಿಕತೆ ಮತ್ತು ಭಾಷೆ-ಸಾಂಸ್ಕೃತಿಕ ಸಮಾನತೆ , ಪರಿವರ್ತನಾ ಪರಿಸರವಾದ , ಭ್ರಷ್ಟಾಚಾರ ವಿರೋಧಿ , ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮದ ಸ್ವಾತಂತ್ರ್ಯ , ಶಿಕ್ಷಣ ಮತ್ತು ಆರೋಗ್ಯದಲ್ಲಿ ಪರಿವರ್ತನೆ. ಇದರ ಜೊತೆಗೆ ಪೊಲೀಸ್ ಮತ್ತು ಜೈಲು ಸುಧಾರಣೆ, ನ್ಯಾಯ ಮತ್ತು ಮೂಲಸೌಕರ್ಯ, ತಂತ್ರಜ್ಞಾನ ಬಳಕೆ ಇನ್ನಿತರೆಗಳು ನಮ್ಮ ಉದ್ದೇಶ ಎಂದು ಚೇತನ್ ಹೇಳಿದ್ದಾರೆ.


