BBMP
Loading ...

BBMP Election

ಬೆಂಗಳೂರು: ಉದ್ಯಾನನಗರಿ, ಐಟಿ-ಬಿಟಿ ನಗರಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನತ್ತ ಇಡೀ ವಿಶ್ವವೇ ತಿರುಗಿ ನೋಡುತ್ತಿದೆ. ಆದರೆ, ಚುನಾಯಿತ ಕೌನ್ಸಿಲರ್‌ಗಳಿಲ್ಲದ ಕಾರಣ ಮಹಾನಗರವು ಕಸ, ರಸ್ತೆ ಗುಂಡಿ, ಪ್ರವಾಹ ಸಮಸ್ಯೆಗಳಿಂದ ಕುಖ್ಯಾತಿಗೆ ಒಳಗಾಗುತ್ತಿದೆ. 4 ವರ್ಷಗಳಿಂದ ಅಧಿಕಾರಿಗಳಿಗೆ ಲಂಗು-ಲಗಾಮು ಹಾಕುವವರೇ ಇಲ್ಲ…!

ರಾಜೀವ್‌ಗಾಂಧಿ ಅವರ ಆಶಯವನ್ನೇ ಮಣ್ಣು ಪಾಲು ಮಾಡಲಾಗುತ್ತಿದೆ. ಶಾಸಕರು, ಸಚಿವರು, ಸಂಸದರು ಬಿಬಿಎಂಪಿಯನ್ನೇ ರದ್ದುಗೊಳಿಸಿ, ಅವರೇ ಅಧಿಕಾರ ನಡೆಸಲಿ ಎಂದು ಮಾಜಿ ಮೇಯರ್‌ಗಳು ಆಕ್ರೋಶ ಹೊರಹಾಕಿದರು.

ಬಿಬಿಎಂಪಿ ಚುನಾಯಿತ ಕೌನ್ಸಿಲ್‌ ಅವಧಿ ಮುಗಿಯುವುದರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಒಂದೊಮ್ಮೆ ಚುನಾವಣೆ ಮುಂದೂಡಿದರೂ ಗರಿಷ್ಠ 6 ತಿಂಗಳ ಅವಧಿಗೆ ಮಾತ್ರ ಆಡಳಿತಾಧಿಕಾರಿಯನ್ನು ನೇಮಿಸಲು ಸಂವಿಧಾನದಲ್ಲಿಅವಕಾಶವಿದೆ. ಈಗಾಗಲೇ ಆಡಳಿತಾಧಿಕಾರಿಗಳು ಅಧಿಕಾರ ಸ್ವೀಕರಿಸಿ 4 ವರ್ಷ ಕಳೆದಿವೆ. ಸಂವಿಧಾನದ ಕಲಂ 243ಯು ಪ್ರಕಾರ ಬಿಬಿಎಂಪಿಯ ಚುನಾಯಿತ ಕೌನ್ಸಿಲ್‌ ವಿಸರ್ಜಿಸಿದರೂ ಆರು ತಿಂಗಳ ಒಳಗೆ ಚುನಾಯಿತ ಕೌನ್ಸಿಲ್‌ ರಚನೆಯಾಗುವಂತೆ ನೋಡಿಕೊಳ್ಳಬೇಕು. ಆದರೆ, ಇದು ಕಾಗದಕ್ಕಷ್ಟೇ ಸೀಮಿತವಾಗಿದೆ.

ಸದ್ಯ 2020ರ ಬಿಬಿಎಂಪಿ ಕಾಯಿದೆ ಅನ್ವಯ ಪಾಲಿಕೆಯ ಆಡಳಿತ ನಿರ್ವಹಿಸಲಾಗುತ್ತಿದೆ. ಈ ಕಾಯಿದೆಯ ಸೆಕ್ಷನ್‌ 126ರ ಪ್ರಕಾರ ಚುನಾಯಿತ ಕೌನ್ಸಿಲ್‌ ವಿಸರ್ಜಿಸಲು ಸರಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಾಲಿಕೆಯನ್ನು ವಿಸರ್ಜಿಸಿದರೆ ಆ ದಿನಾಂಕದಿಂದ ಆರು ತಿಂಗಳೊಳಗೆ ಕೌನ್ಸಿಲ್‌ ಪುನರ್‌ರಚಿಸಬೇಕೆಂದು ಸೆಕ್ಷನ್‌ 126 (7) ಹೇಳುತ್ತದೆ. ಪಾಲಿಕೆಯ ಚುನಾಯಿತ ಕೌನ್ಸಿಲ್‌ ಅವಧಿ 2020ರ ಸೆ.10ಕ್ಕೆ ಅಂತ್ಯಗೊಂಡಿತು. ಆದರೆ, ಪ್ರತಿ ಬಾರಿಯೂ ಸರಕಾರ ಒಂದಲ್ಲಾಒಂದು ನೆಪ ಹೇಳಿ ಚುನಾವಣೆ ಮುಂದೂಡಲು ಪ್ರಯತ್ನ ನಡೆಸುವುದು ಚಾಳಿ ಆಗಿ ಬಿಟ್ಟಿದೆ.

ಜನರ ಕೈಗೆ ಸಿಗದ ಅಧಿಕಾರಿಗಳು:

‘ಪಾಲಿಕೆಯಲ್ಲಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ. ಅಧಿಕಾರಿಗಳು ಸಭೆಯ ನೆಪ ಹೇಳಿಕೊಂಡು ಜನರ ಕೈಗೆ ಸಿಗುತ್ತಿಲ್ಲ. ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ. ಸಮಸ್ಯೆ ಹೊತ್ತು ಶಾಸಕರನ್ನು ಭೇಟಿ ಮಾಡುವುದು ಅಸಾಧ್ಯ. ಶಾಸಕರು ಕೂಡ ಎಲ್ಲ ಪ್ರದೇಶಗಳಿಗೂ ಭೇಟಿ ನೀಡಲಾಗುವುದಿಲ್ಲ. ಇದರಿಂದ ಜನರು ರಸ್ತೆ ಗುಂಡಿ, ಕಸ, ಬೀದಿ ದೀಪ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಇನ್ನಿತರೆ ಸಮಸ್ಯೆಗಳಿಂದ ನಲುಗಿ ಹೋಗಿದ್ದಾರೆ’ ಎಂದು ಮಾಜಿ ಮೇಯರ್‌ಗಳು ವಾಸ್ತವ ಬಿಚ್ಚಿಟ್ಟರು.
‘ಸರಕಾರ, ಶಾಸಕರಿಗೆ ಬಿಬಿಎಂಪಿಗೆ ಕಾರ್ಪೊರೇಟರ್‌ಗಳು ಆಯ್ಕೆಯಾಗಿ ಬರುವುದು ಇಷ್ಟವಿಲ್ಲ. ಹೀಗಾಗಿಯೇ, ಚುನಾವಣೆ ನಡೆಸದಂತೆ ತಡೆಯಲು ಶತಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಸರಕಾರವೂ ಮಣಿದಿದ್ದು, ವಿಭಜನೆ ಮತ್ತು ವಾರ್ಡ್‌ ಮರುವಿಂಗಡಣೆ ಹೆಸರಿನಲ್ಲಿ ಚುನಾವಣೆ ಮುಂದೂಡುತ್ತಲೇ ಇದೆ. ರಾಜೀವ್‌ಗಾಂಧಿ ಅವರು ಸಂವಿಧಾನದ 74ನೇ ವಿಧಿಗೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಿದ್ದರು. ಅವರದ್ದೇ ಪಕ್ಷದ ಕಾಂಗ್ರೆಸ್‌ ಸರಕಾರವೇ ರಾಜೀವ್‌ಗಾಂಧಿ ಆಶಯವನ್ನು ಮಣ್ಣು ಪಾಲು ಮಾಡುತ್ತಿದೆ,’ ಎಂದು ಕಿಡಿಕಾರಿದರು.

ಹಳೆ ಕಲ್ಲು, ಹೊಸ ಬಿಲ್‌ಗೆ ಅನುಕೂಲ:

ಚುನಾಯಿತ ಕೌನ್ಸಿಲರ್‌ಗಳಿಲ್ಲದ ಕಾರಣ ಅಧಿಕಾರಿಗಳ ‘ಹಳೆ ಕಲ್ಲು, ಹೊಸ ಬಿಲ್‌’ ತಂತ್ರವು ರಾಜಾರೋಷವಾಗಿ ನಡೆಯುತ್ತಿದೆ. ಒಳಚರಂಡಿ, ಬೀದಿ ದೀಪ, ಕಸ, ರಸ್ತೆ ಗುಂಡಿ ಸಮಸ್ಯೆ ಕೇಳುವವರೇ ಇಲ್ಲವಾಗಿದ್ದಾರೆ. ಕಾರ್ಪೊರೇಟರ್‌ಗಳು ಅಧಿಕಾರದಲ್ಲಿದ್ದಿದ್ದರೆ ಬೀದಿಗಿಳಿದು ಕೆಲಸ ಮಾಡುತ್ತಿದ್ದರು. ಈಗ ಅಧಿಕಾರಿಗಳಿಗೆ ಮೂಗುದಾರ ಹಾಕುವವರೇ ಇಲ್ಲ. ಹೀಗಾಗಿ, ಜನರು ಸಮಸ್ಯೆಗಳ ಸುಳಿಯಲ್ಲಿಸಿಲುಕಿ ಹಾಕಿಕೊಂಡು ಒದ್ದಾಡುತ್ತಿದ್ದಾರೆ. ಸರಕಾರ ಕೂಡಲೇ ಪಾಲಿಕೆಗೆ ಚುನಾವಣೆ ನಡೆಸಬೇಕು. ಆನಂತರ ಪಾಲಿಕೆ ವಿಭಜಿಸಲಿ ಎಂದು ಜಿ.ಪದ್ಮಾವತಿ, ಮಾಜಿ ಮೇಯರ್‌ ಹೇಳಿದ್ದಾರೆ.

ಬಿಬಿಎಂಪಿ ರದ್ದುಪಡಿಸಿ ಶಾಸಕರೇ ಆಳ್ವಿಕೆ ನಡೆಸಲಿ

ಬಿಜೆಪಿ ಸರಕಾರವು ಚುನಾವಣೆ ವಿಳಂಬಕ್ಕೆ ಮುನ್ನುಡಿ ಬರೆಯಿತು. ಆ ಗಾಡಿಯನ್ನು ಕಾಂಗ್ರೆಸ್‌ನವರೂ ತಳ್ಳಿಕೊಂಡು ಹೋಗುತ್ತಿದ್ದಾರೆ. ಅಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲ. ರಸ್ತೆ ಗುಂಡಿ ಮುಚ್ಚುವಂತೆ ಸರಕಾರವೇ ತಾಕೀತು ಮಾಡುವಂತಹ ಸ್ಥಿತಿ ಬಂದಿದೆ. ಡಿಎಲ್‌ಪಿ ಮುಗಿಯದ ರಸ್ತೆಗಳಲ್ಲಿಮತ್ತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳು, ಗುತ್ತಿಗೆದಾರರಿಗೆ ಭಯವೇ ಇಲ್ಲದಂತಾಗಿದೆ. ಸಂವಿಧಾನದ 74ನೇ ತಿದ್ದುಪಡಿ ರದ್ದುಗೊಳಿಸಿ, ಶಾಸಕರೇ ಪಾಲಿಕೆ ಆಡಳಿತ ನಡೆಸಿಕೊಂಡು ಹೋಗಲಿ. ಅವರಿಗೂ ಅದೇ ಅಲ್ಲವೇ ಬೇಕಾಗಿರುವುದು ಎಂದು ಬಿ.ಎಸ್‌.ಸತ್ಯನಾರಾಯಣ, ಮಾಜಿ ಮೇಯರ್‌ ಹೇಳಿದ್ದಾರೆ.

225 ವಾರ್ಡ್‌ಗಳಿಗೆ ಮೊದಲು ಚುನಾವಣೆ ನಡೆಸಬೇಕು:

ಕಾರ್ಪೊರೇಟರ್‌ಗಳಿಲ್ಲದ ಬೆಂಗಳೂರಿನ ಸ್ಥಿತಿ ಅಧ್ವಾನವಾಗಿದೆ. ಭವಿಷ್ಯದ ಅಭಿವೃದ್ಧಿ ದೃಷ್ಟಿಯಿಂದ ಪಾಲಿಕೆಯ ವಿಭಜನೆ ಮತ್ತು ಹೆಚ್ಚುವರಿ ವಾರ್ಡ್‌ಗಳ ವಿಂಗಡಣೆ ಅಗತ್ಯವಿದೆ. ಆದರೆ, ಅದಕ್ಕೆ ಮೊದಲು 225 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕು. ಆನಂತರ ವಿಭಜನೆ ಬಗ್ಗೆ ತೀರ್ಮಾನ ಕೈಗೊಳ್ಳುವುದು ಉತ್ತಮ ಎಂದು ಎಸ್‌.ಸಂಪತ್‌ರಾಜ್‌, ಮಾಜಿ ಮೇಯರ್‌ ಹೇಳಿದ್ದಾರೆ.

ಅಧಿಕಾರಿಗಳಿಗೆ ಚಿವುಟುವವರೇ ಇಲ್ಲ:

ಸಂವಿಧಾನದ ಅನ್ವಯ ಸಕಾಲಕ್ಕೆ ಪಾಲಿಕೆಗೆ ಚುನಾವಣೆ ನಡೆಸಬೇಕಿದೆ. ಆದರೆ, ಕಾನೂನು ಪಾಲಿಸಲು ಯಾರೂ ಸಿದ್ಧರಿಲ್ಲ. ವಿಧಾನಸಭೆ, ಲೋಕಸಭಾ ಚುನಾವಣೆಗಳು ಎಂದಿಗೂ ತಡ ಆಗುವುದಿಲ್ಲ. ಆ ಚುನಾವಣೆಗಳು ಸಕಾಲಕ್ಕೆ ನಡೆಯುತ್ತಿವೆ. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುತ್ತಿರುವುದು ಸರಿಯಲ್ಲ. ಕಾರ್ಪೊರೇಟರ್‌ಗಳು ಇದ್ದಿದ್ದರೆ ಯಾವುದೇ ಸಮಸ್ಯೆಗಳು ಕಂಡುಬರುತ್ತಿರಲಿಲ್ಲ. ಅಧಿಕಾರಿಗಳಿಗೆ ಚಿವುಟುವವರು ಇಲ್ಲದ ಕಾರಣ, ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದ್ದಾರೆ. ಜನರು ಸಮಸ್ಯೆಗಳಿಂದ ಹೈರಾಣಾಗುತ್ತಿದ್ದಾರೆ ಎಂದು ಗಂಗಾಂಬಿಕೆ ಮಲ್ಲಿಕಾರ್ಜುನ್‌, ಮಾಜಿ ಮೇಯರ್‌ ಹೇಳಿದ್ದಾರೆ.

Leave a Reply

Your email address will not be published. Required fields are marked *