ದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದಹೆಚ್ಡಿ ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವಾಗಲೇ ಹೆಚ್ಡಿಕೆ ಕೇಂದ್ರ ಸಚಿವರಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಹೆಚ್ಡಿಕೆ ನಿರೀಕ್ಷೆಯಂತೆಯೇ ಕೇಂದ್ರ ಸಚಿವರಾಗಿ ಮೋದಿ ಸಂಪುಟ ಸೇರಿದ್ದಾರೆ. ಕ್ಯಾಬಿನೆಟ್ ದರ್ಜೆ ಸಚಿವರಾಗಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ್ದು, ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ, ಮತ್ತೊಮ್ಮೆ ಕೇಂದ್ರ ಸಚಿವರಾಗಿ ಮೋದಿ ಸಂಪುಟ ಸೇರಿದ್ದಾರೆ.
ಹಿರಿಯ ನಾಯಕರಿಗೆ ಸಂಪುಟದಲ್ಲಿ ಸ್ಥಾನ
ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನಂತರ ಕೇಂದ್ರ ಸಚಿವರಾಗಿ ರಾಜನಾಥ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಕ್ರಮವಾಗಿ ಅಮಿತ್ ಶಾ, ಜೆಪಿ ನಡ್ಡಾ ಪ್ರಮಾಣವಚನ ಸ್ವೀಕರಿಸಿದರು. ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರಾಷ್ಟ್ರಪತಿ ಪ್ರತಿಜ್ಞಾವಿಧಿ ಬೋಧಿಸಿದರು. ಮೊದಲ ಮಹಿಳಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಪ್ರಮಾಣವಚನ ಸ್ವೀಕರಿಸಿದರು. ಎಲ್ಲಾ ನಾಯಕರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು.
ಬಿಜೆಪಿ ನಾಯಕ ಎಸ್ ಜೈಶಂಕರ್ ಅವರು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರ ನಂತರ ಮನೋಹರ್ ಲಾಲ್ ಖಟ್ಟರ್ ಸಂಪುಟ ಸೇರಿದರು.
ಪಿಯೂಷ್ ಗೋಯಲ್ ,ಧರ್ಮೇಂದ್ರ ಪ್ರಧಾನ್ , ಜಿತನ್ ರಾಮ್ ಮಾಂಝಿ , ರಾಜೀವ್ ರಂಜನ್ (ಲಾಲನ್) ಸಿಂಗ್, ಸರ್ಬಾನಂದ ಸೋನೋವಾಲ್ ಪ್ರಮಾಣವಚನ ಸ್ವೀಕರಿಸಿದರು. ಕಿಂಜರಾಪು ರಾಮ್ ಮೋಹನ್ ನಾಯ್ಡು, ಡಾ ವೀರೇಂದ್ರ ಕುಮಾರ್, ಪ್ರಲ್ಹಾದ್ ಜೋಶಿ , ಜುಯಲ್ ಓರಂ, ಗಿರಿರಾಜ್ ಸಿಂಗ್, ಅಶ್ವಿನಿ ವೈಷ್ಣವ್, ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೇಂದ್ರ ಸಚಿವ ಸಂಪುಟ ಸೇರಿದರು.
ಭೂಪೇಂದ್ರ ಯಾದವ್, ಗಜೇಂದ್ರ ಸಿಂಗ್ ಶೇಖಾವತ್, ಅನ್ನಪೂರ್ಣ ದೇವಿ, ಕಿರಣ್ ರಿಜಿಜು, ಹರ್ದೀಪ್ ಸಿಂಗ್ ಪುರಿ, ಮನ್ಸುಖ್ ಮಾಂಡವಿಯಾ, ಜಿ ಕಿಶನ್ ರೆಡ್ಡಿ, ಚಿರಾಗ್ ಪಾಸ್ವಾನ್, ಸಿಆರ್ ಪಾಟೀಲ್ ಅವರು ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
ಮೋದಿ ಸಂಪುಟದಲ್ಲಿ 24 ರಾಜ್ಯದ 72 ಸಚಿವರು! ಮೈತ್ರಿ ಪಕ್ಷಗಳಿಗೆ 11 ಸ್ಥಾನ, ಜಾತಿವಾರು ವಿವರ ಇಲ್ಲಿದೆ ನೋಡಿ…


