BBMP
Loading ...

ಬೆಂಗಳೂರು : ರಾಜಧಾನಿಯಲ್ಲಿ ಕಳೆದ ಕೆಲ ದಿನಗಳಿಂದ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಮಳೆಯು ಬೆಸ್ಕಾಂಗೆ ದೊಡ್ಡ ಹೊಡೆತ ಕೊಟ್ಟಿದ್ದು, ವರುಣಾಘಾತಕ್ಕೆ ಕೋಟಿ ಕೋಟಿ ನಷ್ಟವಾಗಿದೆ. ಪೂರ್ವ ಮುಂಗಾರು ಮತ್ತು ಮುಂಗಾರು ಆರಂಭದ ನಂತರ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ 4,612 ವಿದ್ಯುತ್‌ ಕಂಬಗಳು ಧರೆಗುರುಳಿವೆ ಮತ್ತು 696 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದ್ದು, ಬರೋಬ್ಬರಿ 13.31 ಕೋಟಿ ರೂ. ನಷ್ಟವಾಗಿದೆ.

ಬಿಸಿಲಿನ ಝಳದಿಂದ ಬಸವಳಿದು ಹೋಗಿದ್ದ ಮಹಾನಗರದ ಜನರ ಮೊಗದಲ್ಲಿಮಳೆಯು ಸಂತಸ ಮೂಡಿಸಿದೆ. ಮತ್ತೊಂದೆಡೆ ಮಳೆಯೊಂದಿಗೆ ಬೀಸಿದ ಬಿರು ಗಾಳಿಯಿಂದ ಹಲವು ವಾಹನಗಳು ಜಖಂಗೊಂಡಿವೆ. ಆಸ್ತಿ-ಪಾಸ್ತಿಗೆ ನಷ್ಟ ಉಂಟಾಗಿದೆ. ಗಾಳಿಯ ತೀವ್ರತೆಗೆ ವಿದ್ಯುತ್‌ ಕಂಬಗಳು ನೆಲಕಚ್ಚಿವೆ. ಹಲವೆಡೆ ವಿದ್ಯುತ್‌ ಪರಿವರ್ತಕಗಳು ಬಿದ್ದು ಹೋಗಿವೆ. ವಿದ್ಯುತ್‌ ಪೂರೈಕೆ ಮಾರ್ಗಕ್ಕೂ ಹಾನಿಯಾಗಿದೆ. ವಿದ್ಯುತ್‌ ಪೂರೈಕೆ ಪ್ರಮಾಣದಲ್ಲಿ ವ್ಯತ್ಯಯವಾಗಿ ಕೃಷಿ ಉದ್ದೇಶದ ಕೊಳವೆ ಬಾವಿಗಳ ಪಂಪ್‌, ಮೋಟರ್‌ಗಳು ಸುಟ್ಟು ಹೋಗಿವೆ.

ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಏಪ್ರಿಲ್‌ ಆರಂಭದಿಂದ ಜೂ.3ರವರೆಗೆ 4,612 ವಿದ್ಯುತ್‌ ಕಂಬಗಳು ಮುರಿದು ಹೋಗಿದ್ದು, ಇದರಿಂದ ಸುಮಾರು 3.41 ಕೋಟಿ ರೂ. ನಷ್ಟವಾಗಿದೆ. ಹೊಸ ಕಂಬಗಳ ಖರೀದಿಗೆ 2.65 ಕೋಟಿ ರೂ. ಮತ್ತು ದುರಸ್ತಿ ಕಾರ್ಯಕ್ಕೆ ಕಾರ್ಮಿಕರಿಗೆ ಕೂಲಿ ನೀಡಲು 77.62 ಲಕ್ಷ ರೂ. ಖರ್ಚು ಮಾಡಲಾಗಿದೆ. 696 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದ್ದು, ಇದರ ನಷ್ಟ 9.04 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಹೊಸ ಟ್ರಾನ್ಸ್‌ಫಾರ್ಮರ್‌ಗಳ ಖರೀದಿಗೆ 7.62 ಕೋಟಿ ರೂ. ವೆಚ್ಚ ಮಾಡಲಾಗಿದೆ ಮತ್ತು ಕಾರ್ಮಿಕರ ಕೂಲಿಗೆ 1.42 ಕೋಟಿ ರೂ. ನೀಡಲಾಗಿದೆ.

ಸುಮಾರು 5.70 ಲಕ್ಷ ಕಿ.ಮೀ. ವಿದ್ಯುತ್‌ ಮಾರ್ಗಕ್ಕೆ ಹಾನಿಯಾಗಿದ್ದು, ಸಾಕಷ್ಟು ಕಡೆ ವಿದ್ಯುತ್‌ ತಂತಿಗಳು ತುಂಡಾಗಿವೆ. ಹೊಸದಾಗಿ ವಿದ್ಯುತ್‌ ತಂತಿ ಅಳವಡಿಕೆಗೆ 2.72 ಕೋಟಿ ರೂ. ವ್ಯಯಿಸಲಾಗಿದೆ. 239 ಎರಡು ಕಂಬಗಳ ಸ್ಟ್ರಕ್ಚರ್‌ಗಳಿಗೆ (ಡಿ.ಪಿ) ಹಾನಿಯಾಗಿದ್ದು, ಇವುಗಳ ದುರಸ್ತಿಗೆ 62.25 ಲಕ್ಷ ರೂ. ಖರ್ಚು ಮಾಡಲಾಗಿದೆ.

ಮಳೆಯಿಂದ ಹಾನಿಗೊಳಗಾಗುವ ವಿದ್ಯುತ್‌ ಕಂಬ, ತಂತಿಗಳು, ಟ್ರಾನ್ಸ್‌ಫಾರ್ಮರ್‌ ಸೇರಿದಂತೆ ಇತರೆ ವಿದ್ಯುತ್‌ ಉಪಕರಣಗಳನ್ನು ತಕ್ಷಣವೇ ಬದಲಿಸಲು ಬೆಸ್ಕಾಂ ಸುಸ್ಥಿತಿಯಲ್ಲಿರುವ ಹೆಚ್ಚುವರಿ ವಿದ್ಯುತ್‌ ಉಪಕರಣಗಳನ್ನು ದಾಸ್ತಾನು ಮಾಡಿದೆ. ಜನರಿಂದ ದೂರು ಬಂದ ತಕ್ಷಣ ಹಾಳಾದ ಕಂಬ, ತಂತಿ ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಿಸಿ, ವಿದ್ಯುತ್‌ ಪೂರೈಕೆಯಲ್ಲಿವ್ಯತ್ಯಯವಾಗದಂತೆ ಕ್ರಮ ವಹಿಸಲಾಗುತ್ತಿದೆ.

ಮಳೆ ಮತ್ತು ಗಾಳಿ ಅಬ್ಬರದ ಬೆನ್ನಲ್ಲೇ, ರಸ್ತೆಗಳ ಇಕ್ಕೆಲಗಳಲ್ಲಿ ವಿದ್ಯುತ್‌ ಕಂಬಗಳು, ತಂತಿಗಳು ಹಾಗೂ ಪರಿವರ್ತಕಗಳಿಗೆ ತಗಲುವಂತಿರುವ ಮರ, ರೆಂಬೆ ಕೊಂಬೆಗಳ ತೆರವಿಗೆ ಬೆಸ್ಕಾಂ ಮುಂದಾಗಿದೆ. ಮುಖ್ಯ ರಸ್ತೆಗಳು, ಜನವಸತಿ ಪ್ರದೇಶಗಳು ಹಾಗೂ ಅರಣ್ಯ ಪ್ರದೇಶದಲ್ಲಿಸಾಗಿರುವ ವಿದ್ಯುತ್‌ ಮಾರ್ಗದಲ್ಲಿನ ಕೊಂಬೆಗಳು, ಒಣಗಿದ ಮರಗಳನ್ನು ತೆರವು ಮಾಡಲು ಸೂಚನೆ ನೀಡಲಾಗಿದೆ. ಈಗಾಗಲೇ ತೆರವು ಕಾರ್ಯ ನಡೆದಿದ್ದರೂ, ಮುಂಗಾರು ಆರಂಭವಾಗಿರುವುದರಿಂದ ಮತ್ತೊಮ್ಮೆ ಪರಿಶೀಲನೆ ನಡೆಸಿ ತೆರವು ಮಾಡುವಂತೆ ಅಧಿಕಾರಿಗಳು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್​ಗೆ ವೋಟ್ ಹಾಕಿಲ್ಲ: ಗ್ಯಾರಂಟಿ ಯೋಜನೆ ನಿಲ್ಲಿಸಿ ಎಂದು ಕಾಂಗ್ರೆಸ್ ನಾಯಕ ಎಂ.ಲಕ್ಷ್ಮಣ್ ಆಗ್ರಹ

Leave a Reply

Your email address will not be published. Required fields are marked *