Greater Bengaluru News9 : ಸಿಸಿ ಮತ್ತು ಒಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ನ್ಯಾಯಾಲಯ ತೀರ್ಪಿನ ಪ್ರಕಾರ ಸಣ್ಣ ಪುಟ್ಟ ತೀರ್ಮಾನ ತೆಗೆದುಕೊಳ್ಳಬಹುದಾಗಿದೆ. ಅದರ ಅನ್ವಯ 30×40 ವಿಸ್ತೀರ್ಣದ ನಿವೇಶನ ಕಟ್ಟಡಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ರಾಜಧಾನಿ ಬೆಂಗಳೂರಿನಲ್ಲಿ ಒಸಿ (OC) ಮತ್ತು ಸಿಸಿ (CC) ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕುರಿತು ನಿನ್ನೆ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್ ಅವರು 30×40 ವಿಸ್ತೀರ್ಣದ ನಿವೇಶನ ಕಟ್ಟಡಗಳಿಗೆ ಈಗಾಗಲೇ ವಿನಾಯಿತಿ ನೀಡಲಾಗಿದೆ. ಇನ್ನೂ ಹೆಚ್ಚಿನ ವಿಸ್ತೀರ್ಣದ ಕಟ್ಟಡಗಳಿಗೆ ವಿನಾಯಿತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.
ನಗರದಲ್ಲಿ ಸಾವಿರಾರು ಜನ ಒಸಿ ಇಲ್ಲದ ಕಾರಣ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಬದುಕುತ್ತಿದ್ದಾರೆ. ಬಿಲ್ಡರ್ ತಪ್ಪು ಮಾಡಿರಬಹುದು, ಆದರೆ ಹಣ ಕೊಟ್ಟು ಮನೆ ಕೊಂಡುಕೊಂಡ ಸಾಮಾನ್ಯ ಜನರ ತಪ್ಪೇನಿದೆ? ಮಾನವೀಯ ದೃಷ್ಟಿಯಿಂದ ಅವರಿಗೆ ವಿದ್ಯುತ್ ನೀಡುವುದು ನಮ್ಮ ಜವಾಬ್ದಾರಿ,” ಎಂದು ಪ್ರತಿಪಾದಿಸಿದರು.
ನಿಯಮ ಉಲ್ಲಂಘಿಸುವ ಬಿಲ್ಡರ್ಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಆದರೆ, ಅಲ್ಲಿ ವಾಸಿಸುವ ನಿವಾಸಿಗಳಿಗೆ ತೊಂದರೆ ನೀಡುವುದಿಲ್ಲ. ವಿದ್ಯುತ್ ಸಂಪರ್ಕ ನೀಡಿದ ನಂತರವೂ ಅಕ್ರಮಗಳಿದ್ದರೆ ಬಿಬಿಎಂಪಿ ಮೂಲಕ ಕ್ರಮ ಜರುಗಿಸಲಾಗುವುದು ಎಂದು ಅವರು ವಿವರಿಸಿದರು.
‘ಇ–ಖಾತಾ ನೀಡಲು ಅಧಿಕಾರಿಯೊಬ್ಬರು ಲಂಚ ಪಡೆದ ವಿಚಾರವನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಪುರಾವೆ ಸಮೇತ ನನ್ನ ಗಮನಕ್ಕೆ ತಂದಿದ್ದು, ಲಂಚ ಪಡೆದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ’ ಎಂದು ಹೇಳಿದರು.


