BBMP
Loading ...

IPL

Greater Bengaluru News : ನಾಳೆ (ಮಾ.28) ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್​ನ ಮೊದಲನೇ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ನಮಗೂ ಮತ್ತು ನಮ್ಮ ಕುಟುಂಬಕ್ಕೆ 4 ಟಿಕೆಟ್​ ಕೊಡಿ ಎಂಬ ಶಾಸಕರ ಡಿಮಾಂಡ್​ ನಿನ್ನೆ ವಿಧಾನಸಭೆಯಲ್ಲೂ ದೊಡ್ಡ ಚರ್ಚೆಗೆ ಗುರಿಯಾಯಿತು. ಕಾಂಗ್ರೆಸ್​ ಶಾಸಕ ವಿಜಯಾನಂದ ಕಾಶಪ್ಪನವರ್​ ಮುಂದಿಟ್ಟ ಬೇಡಿಕೆಯನ್ನು ಕಡೆಗೂ ರಾಜ್ಯ ಸರ್ಕಾರ ಈಡೇರಿಸಿದೆ. ಸದ್ಯ ಇದು ಟಿಕೆಟ್​ಗಾಗಿ ಕ್ಯೂ ನಿಲ್ಲುವ ಜನಸಾಮಾನ್ಯರ ಪಿತ್ತವನ್ನು ನೆತ್ತಿಗೇರಿಸಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಶಾಸಕರು, ಸಚಿವರು ಮತ್ತು ಅವರ ಕುಟುಂಬಸ್ಥರಿಗೆ ಪ್ರತ್ಯೇಕ ಟಿಕೆಟ್‌ಗಳನ್ನು ನೀಡಬೇಕು ಎಂದು ಹುನಗುಂದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಸದನದಲ್ಲಿ​ ಆಗ್ರಹಿಸಿದರು. ಜನಸಾಮಾನ್ಯರ ಜೊತೆ ನಾವೂ ಕ್ಯೂನಲ್ಲಿ ನಿಂತು ಟಿಕೆಟ್​ ಖರೀದಿಸಬೇಕಾ? ನಾವು ವಿಐಪಿಗಳು. ಶಾಸಕರಿಗೆ ಮತ್ತು ಶಾಸಕರ ಕುಟುಂಬಕ್ಕೆ ಒಂದು ಟಿಕೆಟ್ ಅಲ್ಲ ಐದು​ ಟಿಕೆಟ್​ ಕೊಡಬೇಕು. ಇಲ್ಲಿ ಎಂಎಲ್​ಎಗಳಿಗೆ ಸರಿಯಾದ ಗೌರವ ಸಿಗುತ್ತಿಲ್ಲ ಎಂದು ಸ್ಪೀಕರ್​ಗೆ ಒತ್ತಾಯಿಸಿದರು.

ಶಾಸಕರ ಮಾತನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​, ಅವರೂ ಸರ್ಕಾರ ಭಾಗ. ಹೀಗಿರುವಾಗ, ಕೇಳುವ ಹಕ್ಕು ಅವರಿಗೂ ಇದೆ. ಶೀಘ್ರವೇ ಕೆಎಸ್​ಸಿಎ ಅಧ್ಯಕ್ಷರ ಜೊತೆ ಮಾತನಾಡಿ, ಸ್ಟೇಡಿಯಂನಲ್ಲಿ ನಮ್ಮ ಶಾಸಕರಿಗೂ ಟಿಕೆಟ್​ ಹಂಚುವ ಬಗ್ಗೆ ಹೇಳ್ತೀನಿ ಎಂದಿದ್ದರು. ಅಂತೆಯೇ, ನಾಳಿನ ಪಂದ್ಯಕ್ಕೆ ಆಹ್ವಾನಿಸಲು ಸಿಎಂರನ್ನು ಭೇಟಿಯಾದ ಕೆಎಸ್​ಸಿಎ ಅಧ್ಯಕ್ಷ ವೆಂಕಟೇಶ್​ ಪ್ರಸಾದ್ ಅವರು, ಶಾಸಕರಿಗೂ ಟಿಕೆಟ್​ ಹಂಚಿಕೆಯ ವಿಚಾರಕ್ಕೆ ಪ್ರತಿಕ್ರಿಯಿಸಿದರು.

ಸದನದಲ್ಲಿ ಐಪಿಎಲ್​ ಟಿಕೆಟ್​ ಬೇಕೆಂದು ಶಾಸಕರು ಕೇಳಿದ್ದಾರೆ. ಅವರಿಗೂ 4 ಟಿಕೆಟ್​ ಕೊಟ್ಟುಬಿಡಿ ಎಂದು ಸಿಎಂ ಹೇಳಿದರು. ಇದಕ್ಕೆ ಒಪ್ಪಿದ ವೆಂಕಟೇಶ್​ ಪ್ರಸಾದ್​, ನಾಳಿನ ಆರ್​ಸಿಬಿ ಮತ್ತು ಎಸ್​ಆರ್​ಎಚ್ ಪಂದ್ಯದ ಬಹುತೇಕ ಟಿಕೆಟ್​ ಬುಕ್ಕಿಂಗ್ ಆಗಿರುವ ಕಾರಣ, 1+1 ಕೊಡ್ತೀವಿ. ಅದು ಮಾ.28ಕ್ಕೆ ಮಾತ್ರ ಅನ್ವಯ. ಇನ್ನುಳಿದ ಪಂದ್ಯಗಳಿಗೆ 4 ಟಿಕೆಟ್​ ಅನ್ನೇ ಕೊಡುತ್ತೇವೆ ಎಂದು ಹೇಳಿದರು. ರಾಜ್ಯ ಸರ್ಕಾರದ ಮಾತಿಗೆ ತಲೆದೂಗಿದ ಕೆಎಸ್​ಸಿಎ ವಿರುದ್ಧ ಸದ್ಯ ಕ್ರಿಕೆಟ್​ ಪ್ರಿಯರು ಮತ್ತು ಜನಸಾಮಾನ್ಯರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *