Greater Bengaluru News9 : ಪಬ್ ಹಾಗೂ ಬ್ರೀವರಿಗಳಲ್ಲಿ ಅಪ್ರಾಪ್ತರು ಮದ್ಯಪಾನ ಮಾಡುವ ಪ್ರವೃತ್ತಿಗೆ ಕರ್ನಾಟಕ ಹೈಕೋರ್ಟ್ ಗಂಭೀರ ಕಡಿವಾಣ ಹಾಕಿದೆ. ಅಪ್ರಾಪ್ತರನ್ನು ಮದ್ಯಪಾನದ ವ್ಯಸನದಿಂದ ರಕ್ಷಿಸುವುದು ಆಡಳಿತ ಮಂಡಳಿಯ ನೈತಿಕ ಹಾಗೂ ಕಾನೂನುಬದ್ಧ ಕರ್ತವ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಬ್ರೀವರಿಗಳಿಗೆ ಪ್ರವೇಶಿಸುವ ಪ್ರತಿಯೊಬ್ಬ ಗ್ರಾಹಕರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಜೊತೆಗೆ, ಮದ್ಯ ಸರಬರಾಜು ಮಾಡುವಾಗಲೂ ಸಿಬ್ಬಂದಿಗಳು ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಆದೇಶಿಸಿದೆ.
ಪ್ರತಿ ಬ್ರೀವರಿಯಲ್ಲೂ “ಅಪ್ರಾಪ್ತರಿಗೆ ಮದ್ಯ ನೀಡಲಾಗುವುದಿಲ್ಲ” ಎಂಬ ಎಚ್ಚರಿಕೆ ಫಲಕಗಳನ್ನು ಸ್ಪಷ್ಟವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ. ಅಪ್ರಾಪ್ತರು ಕದ್ದುಮುಚ್ಚಿ ಮದ್ಯಪಾನ ಮಾಡಿದರೂ, ಅದರ ಸಂಪೂರ್ಣ ಹೊಣೆಗಾರಿಕೆ ಬ್ರೀವರಿ ಆಡಳಿತ ಮಂಡಳಿಯದ್ದೇ ಆಗುತ್ತದೆ. ಈ ಜವಾಬ್ದಾರಿಯಿಂದ ಮಾಲೀಕರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದೇ ವೇಳೆ, ರಾಜರಾಜೇಶ್ವರಿ ನಗರದಲ್ಲಿರುವ ಬ್ರೀವರಿ ಮಾಲೀಕ ವಿ. ಚಿಟ್ಟಿಬಾಬು ವಿರುದ್ಧ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡಿದ ಆರೋಪದಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಅಪ್ರಾಪ್ತರನ್ನು ಮದ್ಯಪಾನದಿಂದ ದೂರವಿಡುವುದು ಸಮಾಜದ ಹಿತದೃಷ್ಟಿಯಿಂದ ಅತ್ಯಂತ ಅಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.


