Greater Bengaluru News9 : 2025-26ನೇ ಹಂಗಾಮಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಹೆಚ್ಚುವರಿ ಕಬ್ಬು ಬೆಲೆ ನಿಗದಿಪಡಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಂಬಂಧಿಸಿದಂತೆ ಕನಿಷ್ಠ ಹೆಚ್ಚುವರಿ ಬೆಲೆಯನ್ನು ನಿಗದಿಪಡಿಸಲು ಹಾಗೂ ರೈತರಿಗೆ ರಾಜ್ಯ ಸರ್ಕಾರದಿಂದ ಒಂದು ಬಾರಿಯ ಆರ್ಥಿಕ ನೆರವು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.
ಆದೇಶದ ಪ್ರಮುಖ ಅಂಶಗಳು:
- 9.5% ಅಥವಾ ಕಡಿಮೆ ರಿಕವರಿ ದರ ಇರುವ ಕಬ್ಬಿಗೆ:
ಪ್ರತಿ ಟನ್ಗೆ ಕಾರ್ಖಾನೆಗಳಿಂದ ₹50 ಮತ್ತು ರಾಜ್ಯ ಸರ್ಕಾರದಿಂದ ₹50 ಸೇರಿ ಒಟ್ಟು ₹100 ಹೆಚ್ಚುವರಿ ನೀಡಲಾಗುತ್ತದೆ. - 10.25% ರಿಕವರಿ ದರ ಇರುವ ಕಬ್ಬಿಗೆ:
ಕಾರ್ಖಾನೆಗಳು ರೈತರಿಗೆ (ಸಾಗಾಟ ಹಾಗೂ ಕಟಾವು ವೆಚ್ಚ ಹೊರತುಪಡಿಸಿ) ₹3,100 ನೀಡಲು ಒಪ್ಪಿದ್ದು, ಅದರ ಮೇಲೆ ₹100 ಹೆಚ್ಚುವರಿ ಸೇರಿಸಿ ಒಟ್ಟು ₹3,200 ನಿಗದಿಪಡಿಸಲಾಗಿದೆ. - 11.25% ರಿಕವರಿ ದರ ಇರುವ ಕಬ್ಬಿಗೆ:
ಕಾರ್ಖಾನೆಗಳು ₹3,200 ಪಾವತಿಸಿ, ಅದರ ಮೇಲೆ ₹100 ಹೆಚ್ಚುವರಿ ಸೇರಿಸಿ ಪ್ರತಿ ಟನ್ಗೆ ₹3,300 ನಿಗದಿಪಡಿಸಲಾಗಿದೆ.
ರಿಕವರಿ ದರದ ಅನುಪಾತದ ಪರಿಗಣನೆ:
- 10.25% – 9.5% ಸಕ್ಕರೆ ಇಳುವರಿಯ ನಡುವೆ ಪ್ರತಿ 0.1% ಕಡಿಮೆಗೆ ₹3.46 ಪ್ರತಿ ಕ್ವಿಂಟಾಲ್ಗೆ ಕಡಿತ ಅನ್ವಯವಾಗಲಿದೆ.
- 11.25% – 10.25% ಸಕ್ಕರೆ ಇಳುವರಿಯ ನಡುವೆ ಪ್ರತಿ 0.1% ಕಡಿಮೆಗೆ ₹1 ಪ್ರತಿ ಕ್ವಿಂಟಾಲ್ಗೆ ಪರಿಗಣಿಸಲಾಗುತ್ತದೆ.
ಸರ್ಕಾರದ ಆದೇಶದಂತೆ, ಕಾರ್ಖಾನೆಗಳು ಸಕ್ಕರೆ ನಿಯಂತ್ರಣ ಕಾಯ್ದೆನಡಿ ನಿಗದಿಪಡಿಸಿರುವಂತೆ 14 ದಿನಗಳ ಒಳಗಾಗಿ ರೈತರಿಗೆ ಪ್ರಥಮ ಕಂತಿನ ಮೊತ್ತವನ್ನು ಪಾವತಿಸಬೇಕು ಎಂದು ಸೂಚಿಸಲಾಗಿದೆ. ಈ ತೀರ್ಮಾನದಿಂದ ರಾಜ್ಯದ ಕಬ್ಬು ಬೆಳೆಗಾರ ರೈತರಿಗೆ ಬಹುಮುಖ ಆರ್ಥಿಕ ನೆರವು ದೊರೆಯುವ ನಿರೀಕ್ಷೆಯಿದೆ.


