ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಜನತೆಗೆ ಬಹುದೊಡ್ಡ ಅನುಕೂಲವಾಗುವಂತೆ, ಇ-ಸ್ವತ್ತು (e-Swathu) ವಿತರಣೆಗಾಗಿ ನಿಗದಿತ ಕಾಲಾವಧಿಯನ್ನು 45 ದಿನಗಳಿಂದ 15 ದಿನಗಳಿಗೆ ಕಡಿತಗೊಳಿಸಲು ಸರ್ಕಾರ ತೀರ್ಮಾನಿಸಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ಕ್ಕೆ ತಿದ್ದುಪಡಿ ತರಲಾಗಿದೆ.
ಈ ಹೊಸ ಕ್ರಮದಂತೆ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಆಸ್ತಿಗಳಿಗೆ ಇ-ಸ್ವತ್ತು ಪ್ರಮಾಣಪತ್ರಗಳನ್ನು ವೈಜ್ಞಾನಿಕವಾಗಿ, ಪಾರದರ್ಶಕವಾಗಿ ಮತ್ತು ವೇಗವಾಗಿ ವಿತರಿಸಲಾಗುವುದು. ಈ ತಿದ್ದುಪಡಿ ಕ್ರಮದಿಂದ ರಾಜ್ಯದಲ್ಲಿ ಸುಮಾರು 95.75 ಲಕ್ಷ ಆಸ್ತಿಗಳಿಗೆ ಪ್ರಮಾಣಪತ್ರ ನೀಡುವ ಅವಕಾಶ ದೊರಕಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬದಲಾವಣೆಯ ಪ್ರಮುಖ ಅಂಶಗಳು:
- ಇ-ಸ್ವತ್ತು ವಿತರಣೆಗಾಗಿಯಿರುವ ಕಾಲಾವಧಿ ಈಗ 15 ದಿನಕ್ಕೆ ಸೀಮಿತ.
- ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಅನುಮೋದನೆ ನೀಡದಿದ್ದರೆ, ಸ್ವಯಂಚಾಲಿತ ಅನುಮೋದನೆ ಪ್ರಕ್ರಿಯೆ ಜಾರಿಗೊಳ್ಳುತ್ತದೆ.
- ಆಸ್ತಿಗಳ ಕರಡು ಪ್ರತಿ ಸಾರ್ವಜನಿಕರ ತಪಾಸಣೆಗೆ ತಂತ್ರಾಂಶದ ಮೂಲಕ ಲಭ್ಯವಾಗಲಿದೆ.
- ತೆರಿಗೆ ಲೆಕ್ಕಾಚಾರದ ವಿಧಾನವನ್ನು ಸರಳೀಕರಣಗೊಳಿಸಲಾಗಿದೆ.
- ಹೊಸ ನಿಯಮಗಳ ಮೂಲಕ ಪರವಾನಗಿ, NOC, ತೆರಿಗೆಗಳು, ದರಗಳು ಮತ್ತು ಶುಲ್ಕಗಳನ್ನು ವೈಜ್ಞಾನಿಕವಾಗಿ ನಿಗದಿಪಡಿಸಲಾಗಿದೆ.
- 2025-26ನೇ ಸಾಲಿನ ಬಜೆಟ್ ಘೋಷಣೆಗೂ ಅನುಗುಣವಾಗಿ, ಇ-ಸ್ವತ್ತು ಅಭಿಯಾನವನ್ನು ರಾಜ್ಯಾದ್ಯಂತ ಬಲವಾಗಿ ಅನುಷ್ಟಾನಗೊಳಿಸಲಾಗುತ್ತಿದೆ. ಇದರಿಂದ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲಗಳು ಹೆಚ್ಚಾಗಿ, ಅಭಿವೃದ್ಧಿ ಯೋಜನೆಗಳ ನಿರ್ವಹಣೆಯಲ್ಲಿ ಸಹಕಾರವಾಗಲಿದೆ.
ಸಮರ್ಪಣಾ ಮತ್ತು ಮೇಲ್ಮನವಿಗಳ ವ್ಯವಸ್ಥೆ:
- ತೆರಿಗೆ, ದರ ಅಥವಾ ಶುಲ್ಕಗಳಿಂದ ಬಾಧಿತರಾದವರು ಮೊದಲನೇ ಮೇಲ್ಮನವಿಯನ್ನು ಉಪ ಕಾರ್ಯದರ್ಶಿ (ಅಭಿವೃದ್ದಿ) ಅವರಿಗೆ ಸಲ್ಲಿಸಬಹುದು.
- ಎರಡನೇ ಮೇಲ್ಮನವಿಗಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ.
- ಈ ಕ್ರಮದಿಂದ ಗ್ರಾಮೀಣ ಜನತೆಗೆ ಸಮರ್ಪಕ ಮತ್ತು ಸಮಯೋಚಿತ ಸೇವೆಗಳು ಲಭಿಸುವಂತಾಗಿದ್ದು, ಗ್ರಾಮ ಪಂಚಾಯತಿಗಳನ್ನು ಸ್ವಾಯತ್ತತೆಯ ದಿಕ್ಕಿನಲ್ಲಿ ಮುಂದೂಡಲು ಈ ತಿದ್ದುಪಡಿ ಮಹತ್ವದ ಹೆಜ್ಜೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.


