Greater Bengaluru News9 : ಪತ್ನಿಗೆ 11 ಬಾರಿ ಚಾಕು ಇರಿದು ಪತಿ ಕೊಲೆ ಮಾಡಿರುವ ಘಟನೆ ನಗರದ ಸುಂಕದಕಟ್ಟೆ ಬಳಿ ನಡೆದಿದೆ. ರೇಖಾ ಮೃತ ದುರ್ಧೈವಿಯಾಗಿದ್ದು, ಲೋಹಿತಾಶ್ವ ಎಂಬಾತ ಚಾಕುವಿನಿಂದ ಇರಿದು ಕೊಂದಿದ್ದಾನೆ. ರೇಖಾಗೆ ಮದುವೆಯಾಗಿ ಎರಡು ಮಕ್ಕಳಿದ್ದರು. ಆದ್ರೆ ಮೊದಲ ಪತಿಯಿಂದ ರೇಖಾ ಬೇರಾಗಿದ್ದರು. ಇತ್ತ ಲೋಹಿತಾಶ್ವನಿಗೂ ಮದುವೆಯಾಗಿ ಡೈವರ್ಸ್ ಆಗಿತ್ತು.
ಕೆಲ ವರ್ಷಗಳಿಂದ ಇಬ್ಬರು ಸಂಪರ್ಕದಲ್ಲಿ ಇದ್ದರು. ಕೆಲ ತಿಂಗಳ ಹಿಂದೆ ಅಷ್ಟೆ ಇಬ್ಬರೂ ದೇವಾಲಯ ಒಂದರಲ್ಲಿ ಮದುವೆಯಾಗಿದ್ದಾರೆ. ಬಳಿಕ ಶಿರಾದಿಂದ ಬೆಂಗಳೂರಿಗೆ ಬಂದಿದ್ದ ರೇಖಾ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ಲು. ಅದಲ್ಲದೆ ಲೋಹಿತಾಶ್ವನಿಗೂ ಸಹ ಅದೇ ಕಂಪನಿಯಲ್ಲಿ ಡ್ರೈವರ್ ಕೆಲಸ ಕೊಡಿಸಿದ್ಲು.
ಆದ್ರೂ ಕೂಡ ಲೋಹಿತಾಶ್ವನಿಗೆ ರೇಖಾ ಮೇಲೆ ಅನುಮಾನವಿತ್ತು. ಈಕೆಗೆ ಇನ್ನೊರ್ವನ ಜೊತೆಗೆ ಸಂಬಂಧ ಇದೆ ಎಂದು ಇಂದು ಬೆಳಗ್ಗೆ ಬಂದು ಅಟ್ಯಾಕ್ ಮಾಡಿದ್ದಾನೆ. ರೇಖಾ ತನ್ನ ಹನ್ನೆರಡು ವರ್ಷದ ಮಗಳ ಜೊತೆಗೆ ಬಸ್ ನಿಲ್ದಾಣ ದಲ್ಲಿ ನಿಂತಿದ್ದ ವೇಳೆ ಅಟ್ಯಾಕ್ ಮಾಡಿದ್ದು, ಮೊದಲು ಎರಡು ಬಾರಿ, ನಂತ್ರ ಒಂಬತ್ತು ಬಾರಿ ಇರಿದಿದ್ದಾನೆ. ಕೃತ್ಯದ ಬಳಿಕ ಅಲ್ಲಿಂದ ಲೋಹಿತಾಶ್ವ ಎಸ್ಕೇಪ್ ಆಗಿದ್ದಾನೆ.
ಘಟನೆ ಬಳಿಕ ರೇಖಾಳನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿ ಯಾಗದೆ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಸ್ಥಳಕ್ಕೆ ಕಾಮಾಕ್ಷಿ ಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಕೇಸ್ ದಾಖಲು ಮಾಡಿಕೊಂಡು ಆರೋಪಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.


