ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ನಟ ದರ್ಶನ್ ತೂಗುದೀಪಗೆ ನ್ಯಾಯಾಂಗ ಬಂಧನವು ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿಯೇ ಮುಂದುವೆಯಲಿದೆ. ಹೆಚ್ಚುವರಿಯಾಗಿ ಹಾಸಿಗೆ, ದಿಂಬು, ಜೈಲಿನೊಳಗೆ ಓಡಾಡಲು ನ್ಯಾಯಾಲಯದಿಂದ ಅನುಮತಿ ನೀಡಲಾಗಿದೆ.
ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾವಣೆಗೆ ಸರ್ಕಾರವು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದ ಮೊರೆ ಹೋಗಿತ್ತು. ಇದೇ ಸಂದರ್ಭದಲ್ಲಿ ನಟನಿಗೆ ಹೆಚ್ಚುವರಿ ದಿಂಬು, ಬೆಡ್ಶೀಟ್ಗೆ ಕೋರಿ ವಕೀಲರು ಅರ್ಜಿ ಸಲ್ಲಿಸಿದ್ದರು. ಸದ್ಯ ನ್ಯಾಯಾಲಯವು ನಟನನ್ನು ಬೆಂಗಳೂರಿನ ಜೈಲಿನಲ್ಲಿಯೇ ನ್ಯಾಯಾಂಗ ಬಂಧನ ಮುಂದುವರೆಸಿ, ಅಗತ್ಯ ಮೂಲ ಸೌಲಭ್ಯ ನೀಡಿ ಎಂದು ಸೂಚನೆ ನೀಡಿದೆ.
ನಟ ದರ್ಶನ್ ಜಾಮೀನು ಸಿಗುವುದಕ್ಕೂ ಮುನ್ನ ಬಳ್ಳಾರಿ ಜೈಲಿನಲ್ಲಿದ್ದರು. ಮತ್ತೆ ಅವರನ್ನು ಅದೇ ಜೈಲಿಗೆ ವರ್ಗಾವಣೆ ಮಾಡಬೇಕು ಎಂಬ ಮನವಿ ಸರ್ಕಾರದ್ದಾಗಿತ್ತು. ಆದರೆ, ನಟನ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ” ದರ್ಶನ್ ತಾಯಿಗೆ ಅನಾರೋಗ್ಯವಿದ್ದ ಕಾರಣ ಮಗನನ್ನು ನೋಡಲು ಬಳ್ಳಾರಿಗೆ ತೆರಳಲು ಕಷ್ಟವಾಗುತ್ತದೆ. ಜತೆಗೆ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು, ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಬಳ್ಳಾರಿಯಿಂದ ಬೆಂಗಳೂರಿಗೆ ಕರೆತರುವುದು ಕಷ್ಟವಾಗುತ್ತದೆ. ಹೀಗಾಗಿ, ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿಯೇ ನ್ಯಾಯಾಂಗ ಬಂಧನ ಮುಂದುವರೆಸಬೇಕು ” ಎಂದು ದರ್ಶನ್ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದ್ದರು.
ಸದ್ಯಕ್ಕೆ ಬಳ್ಳಾರಿಗೆ ವರ್ಗಾಯಿಸಲು ಸಕಾರಣಗಳಿಲ್ಲ. ಜೈಲು ನಿಯಮ ಉಲ್ಲಂಘಿಸಿದರೆ ಜೈಲು ಐಜಿ ವರ್ಗಾವಣೆಗೆ ಕ್ರಮ ಕೈಗೊಳ್ಳಬಹುದು. ಕೈದಿಯ ಹಕ್ಕುಗಳನ್ನು ಗೌರವಿಸಲು ನ್ಯಾಯಾಲಯ ಸೂಚನೆ ನೀಡಿದೆ.
ಕೋರ್ಟ್ ವಿಚಾರಣೆ ವೇಳೆ ಕೈ ಎತ್ತಿದ ನಟ ದರ್ಶನ್, ” ನನಗೆ ಸ್ವಲ್ಪ ಪಾಯಿಸನ್ ನೀಡುವಂತೆ ಆದೇಶಿಸಬೇಕು. ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲಾ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡ ನನಗೆ ಮಾತ್ರ ಪಾಯಿಸನ್ ಕೊಡಲಿ ” ಎಂದು ನ್ಯಾಯಾಲಯಕ್ಕೆ ಕೋರಿದರು. ಆಗ ನ್ಯಾಯಾಧೀಶರು ಹಾಗೆಲ್ಲಾ ನೀವು ಕೇಳುವಂತಿಲ್ಲ ಎಂದು ಹೇಳಿದ್ದರು.
ಏನಿದು ಪ್ರಕರಣ?
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರನ್ನು 2024 ರ ಜೂನ್ 8 ರಂದು ನಟ ದರ್ಶನ್ ಗ್ಯಾಂಗ್ ಕೊಲೆ ಮಾಡಿತ್ತು. ಬಂಧನವಾಗಿ ಆ ಪ್ರಕರಣದಲ್ಲಿ ದರ್ಶನ್ ಎ2 ಆಗಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ 7 ತಿಂಗಳ ಬಳಿಕ ಜಾಮೀನು ನೀಡಿತ್ತು. ಆ ಬಳಿಕ ಸುಪ್ರೀಂ ಕೋರ್ಟ್ಗೆ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿ ಜಾಮೀನನನ್ನು ರದ್ದು ಮಾಡಿಸಿತ್ತು. ಸದ್ಯ ಎಲ್ಲಾ ಆರೋಪಿಗಳು ಮತ್ತೆ ಬಂಧನವಾಗಿ ಜೈಲಿನಲ್ಲಿದ್ದಾರೆ. ಪ್ರಕರಣದಲ್ಲಿ ಒಟ್ಟು 17 ಆರೋಪಿಗಳಿದ್ದು, 4 ಮಂದಿ ಜಾಮೀನಡಿ ಹೊರಗಿದ್ದು, ಉಳಿದ 13 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ.


