ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಗೆ ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು(ಬಿಡಿಎ) ವಿಳಂಬಧೋರಣೆ ಅನುಸರಿಸುತ್ತಿದೆ. ಬಡಾವಣೆಗೆ ವಿದ್ಯುತ್ ಸಂಪರ್ಕ ಒದಗಿಸುವ ಸಲುವಾಗಿ ಕೊಮ್ಮಘಟ್ಟ ವಿದ್ಯುತ್ ಉಪಕೇಂದ್ರ ಸ್ಥಾಪನೆಯಾಗಿದ್ದರೂ, ಕಳೆದ ಆರು ತಿಂಗಳಿಂದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ.
2024 ನವೆಂಬರ್ ವೇಳೆಗೆ ಬಡಾವಣೆಗೆ ಎಲ್ಲರೀತಿಯ ಮೂಲಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದ ಬಿಡಿಎ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. 5 ವಿದ್ಯುತ್ ಉಪಕೇಂದ್ರಗಳಲ್ಲಿ ಕೊಮ್ಮಘಟ್ಟ ವಿದ್ಯುತ್ ಉಪಕೇಂದ್ರದ ಕಾಮಗಾರಿ ಪೂರ್ಣಗೊಂಡು 6 ತಿಂಗಳು ಕಳೆದಿವೆ. ಆದರೆ, ಅದನ್ನು ಕಾರ್ಯಾರಂಭಗೊಳಿಸಲು ಮೀನಮೇಷ ಎಣಿಸಲಾಗುತ್ತಿದೆ. ಇದರಿಂದ ನಿವಾಸಿಗಳು, ನಿವೇಶನದಾರರು ಹೆಚ್ಚುವರಿಯಾಗಿ 10 ರಿಂದ 15 ಸಾವಿರ ರೂ. ವೆಚ್ಚ ಮಾಡಿ ಸಮೀಪದ ಹಳ್ಳಿಗಳು, ಕಂದಾಯ ಬಡಾವಣೆಗಳಿಂದ ತಾತ್ಕಾಲಿಕ ಸಂಪರ್ಕ ಪಡೆಯುವಂತಾಗಿದೆ.
5ರಲ್ಲಿ ಒಂದು ಕೇಂದ್ರವಷ್ಟೇ ಪೂರ್ಣ
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 30 ಸಾವಿರ ನಿವೇಶನಗಳ ಹಂಚಿಕೆಯಾಗಿದ್ದು, 240 ಮೆಗಾ ವ್ಯಾಟ್ ಅಗತ್ಯವಿದೆ. ಇದಕ್ಕಾಗಿ 5 ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲು ಬಿಡಿಎ, ಬೆಸ್ಕಾಂ ಯೋಜನೆ ರೂಪಿಸಿದ್ದವು. ಪ್ರತಿ ಕೇಂದ್ರ ಸ್ಥಾಪನೆಗೆ ತಲಾ 25 ರಿಂದ 32 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 32 ಕೋಟಿ ರೂ.ವೆಚ್ಚದಲ್ಲಿ ಕೊಮ್ಮಘಟ್ಟದಲ್ಲಿ 66/11 ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಲಾಗಿದೆ. ಭೀಮನಕುಪ್ಪೆ, ಕನ್ನಳ್ಳಿ, ಸೂಲಿಕೆರೆ, ಸೀಗೆಹಳ್ಳಿಯಲ್ಲಿ ಉಪ ಕೇಂದ್ರಗಳ ಸ್ಥಾಪನೆ ಕಾರ್ಯ ಬಾಕಿ ಇದೆ.
ಕೊಮ್ಮಘಟ್ಟ ಉಪಕೇಂದ್ರ ನಿರ್ಮಾಣಕ್ಕೆ 2021ರ ಆಗಸ್ಟ್ನಲ್ಲೇ ಟೆಂಡರ್ ಕರೆಯಲಾಗಿತ್ತು. 2022ರ ಮೇ ತಿಂಗಳಿನಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಯಿತು. ಕಾಮಗಾರಿ ಪೂರ್ಣಕ್ಕೆ 13 ತಿಂಗಳ ಗಡುವು ನೀಡಲಾಗಿತ್ತು. ಆದರೆ, 2 ವರ್ಷ ತಡವಾಗಿ ಕೆಲಸ ಮುಗಿಸಲಾಗಿದೆ. ಆದರೂ, ಕಾರ್ಯಾರಂಭಕ್ಕೆ ಮುಹೂರ್ತವೇ ಕೂಡಿಬಂದಿಲ್ಲ.
ಬಡಾವಣೆಗೆ ವಿದ್ಯುತ್ ಸಂಪರ್ಕ ಜಾಲವೇ ಇಲ್ಲ
ಬಡಾವಣೆಯನ್ನು ಅಭಿವೃದ್ಧಿಪಡಿಸಿರುವ ಬಿಡಿಎ ನಿಗದಿತ ಸಮಯದಲ್ಲಿ ರಸ್ತೆ, ವಿದ್ಯುತ್ ಸೇರಿದಂತೆ ಮೂಲಸೌಕರ್ಯ ಒದಗಿಸುವಲ್ಲಿವಿಫಲವಾಗಿದೆ. ಇಡೀ ಬಡಾವಣೆಯಲ್ಲಿವಿದ್ಯುತ್ ಸಂಪರ್ಕ ಜಾಲವೇ ಇಲ್ಲವಾಗಿದೆ. ಕೊಮ್ಮಘಟ್ಟ ಉಪಕೇಂದ್ರ ಉದ್ಘಾಟನೆ ನಂತರವಷ್ಟೇ ವಿದ್ಯುತ್ ಸಂಪರ್ಕ ಸಿಗಲಿದೆ. ಸದ್ಯ ನಿವಾಸಿಗಳು ಮತ್ತು ಮನೆ ನಿರ್ಮಾಣ ಕಾರ್ಯ ಆರಂಭಿಸಿರುವ ನಿವೇಶನದಾರರು ಪಕ್ಕದ ಹಳ್ಳಿಗಳು, ಕಂದಾಯ ಬಡಾವಣೆಗಳಿಂದ ತಾತ್ಕಾಲಿಕ ಸಂಪರ್ಕ ಪಡೆದುಕೊಳ್ಳುತ್ತಿದ್ದಾರೆ.
ಕತ್ತಲಲ್ಲೇ ಓಡಾಡಬೇಕಾದ ಪರಿಸ್ಥಿತಿ
9 ಬ್ಲಾಕ್ಗಳಲ್ಲೂ ವಿದ್ಯುತ್ ಕಂಬಗಳಿವೆ. ಆದರೆ, ಅವುಗಳಿಗೆ ಸಂಪರ್ಕ ಮತ್ತು ಬೀದಿ ದೀಪಗಳ ಅಳವಡಿಕೆ ಆಗಿಲ್ಲ. ಪರಿಣಾಮ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಸಿಮೆಂಟ್, ಸ್ಟೀಲ್ ಸೇರಿದಂತೆ ಇತರೆ ವಸ್ತುಗಳು ಕಳವಾಗುತ್ತಿವೆ. ಇನ್ನು ಕಟ್ಟಡ ನಿರ್ಮಾಣ ಕಾರ್ಮಿಕರು, ಭದ್ರತಾ ಸಿಬ್ಬಂದಿಗೆ ವಸತಿ ವ್ಯವಸ್ಥೆ ಕಲ್ಪಿಸಲು ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಲಾಗುತ್ತಿದೆ. ಆ ಶೆಡ್ಗಳಿಗೂ ವಿದ್ಯುತ್ ಸಂಪರ್ಕ ಇಲ್ಲ. ಹೀಗಾಗಿ, ಕಾರ್ಮಿಕರು, ಸಾರ್ವಜನಿಕರು ಕತ್ತಲೆಯಲ್ಲೇ ಓಡಾಡಬೇಕಾದ ಸ್ಥಿತಿ ಇದೆ. ವಿದ್ಯುತ್ ಸಂಬಂಧಿ ಸೌಕರ್ಯ ನೀಡಲು ಬೆಸ್ಕಾಂಗೆ ಬಿಡಿಎ 59 ಕೋಟಿ ರೂ. ಪಾವತಿಸಿದೆ. ಆದರೂ, ಯಾವುದೇ ಕೆಲಸಗಳು ತ್ವರಿತವಾಗಿ ನಡೆಯುತ್ತಿಲ್ಲ. ಬೆಸ್ಕಾಂ ಮತ್ತು ಬಿಡಿಎ ನಡುವಿನ ಸಮನ್ವಯದ ಕೊರತೆಯಿಂದ ನಿವಾಸಿಗಳು ಮತ್ತು ನಿವೇಶನದಾರರು ಪರದಾಡುವಂತಾಗಿದೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ: ಮಂಗಳೂರು ಬಂದ್, ಮೇ 6ರವೆಗೆ ನಿಷೇಧಾಜ್ಞೆ ಜಾರಿ


