BBMP
Loading ...

Wing Commander

ಬೆಂಗಳೂರು: ಬೆಂಗಳೂರಿನಲ್ಲಿ ಐಎಎಫ್ ಅಧಿಕಾರಿ ಮೇಲೆ ಕನ್ನಡಿಗನು ಹಲ್ಲೆ ಮಾಡಿದ್ದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಹೌದು… ಬೈಕ್‌ ಸವಾರನ ಮೇಲೆಯೂ ವಿಂಗ್‌ ಕಮಾಂಡರ್‌ ಬಾಕ್ಸರ್‌ನಂತೆ ಮಾರಣಾಂತಿಕ ಹಲ್ಲೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಂಗ್ ಕಮಾಂಡರ್ ಶೀಲಾಧಿತ್ಯ ಬೋಸ್ ಬೈಕ್ ಸವಾರನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದು ನಂತರ ಕನ್ನಡ ಭಾಷೆ ವಿಚಾರಕ್ಕೆ ತನ್ನ ಮೇಲೆ ಹಲ್ಲೆ ಅಂತ ಸುಳ್ಳು ಆರೋಪ ಮಾಡಿರುವುದು ಇದೀಗ ಸಿಸಿಟಿವಿ ದೃಶ್ಯಾವಳಿಗಳಿಂದ ಬೆಳಕಿಗೆ ಬಂದಿದೆ.

ಭಾರತೀಯ ವಾಯುಪಡೆಯ (IAF) ಅಧಿಕಾರಿ ಶಿಲಾದಿತ್ಯ ಬೋಸ್ ತಮ್ಮ ಪತ್ನಿಯೊಂದಿಗೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು. ಸ್ಕ್ವಾಡ್ರನ್ ಲೀಡರ್ ಪತ್ನಿ ಮಧುಮಿತಾ ದತ್ತಾ ಅವರು ನೀಡಿದ ದೂರಿನ ಆಧಾರದ ಮೇಲೆ, ಅಪರಿಚಿತ ವ್ಯಕ್ತಿಗಳ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದರ ಬೆನ್ನಲ್ಲೇ ಕಾರ್ಯಾಚರಣೆ ಕೈಗೊಂಡಿದ್ದ ಬೈಯಪ್ಪನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಿ. ದೇವರಾಜ ತಿಳಿಸಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ನಡುವೆ ರಸ್ತೆಯಲ್ಲಿ ನಮ್ಮ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಆರೋಪಿಸಿದ್ದಾರೆ. ಗಾಯಗೊಂಡು ರಕ್ತ ಸುರಿಯುತ್ತಿರುವಾಗಲೇ ಬೋಸ್ ವಿಡಿಯೋ ಮಾಡಿದ್ದು ಘಟನೆ ಕುರಿತು ವಿವರಿಸಿದ್ದರು. ಅಲ್ಲದೆ ಆ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

ವಿಡಿಯೋದಲ್ಲಿ ನಾವು ಸಿವಿ ರಾಮನ್ ನಗರ ಹಂತ 1ರಲ್ಲಿ ಇರುವ ಡಿಆರ್‌ಡಿಒನಲ್ಲಿ ವಾಸಿಸುತ್ತಿದ್ದೇವೆ. ಇಂದು ಬೆಳಿಗ್ಗೆ, ನನ್ನ ಹೆಂಡತಿ ನನ್ನನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯುತ್ತಿದ್ದಾಗ ಹಿಂದಿನಿಂದ ಬಂದ ಬೈಕ್ ನಮ್ಮ ಕಾರನ್ನು ಅಡ್ಡಗಟ್ಟಿತ್ತು. ನಾನು ಡ್ಯಾಶ್ ಕ್ಯಾಮ್ ದೃಶ್ಯಾವಳಿಯನ್ನು ಸಹ ಹಂಚಿಕೊಳ್ಳುತ್ತೇನೆ. ಸವಾರರಲ್ಲಿ ಒಬ್ಬರು ಕನ್ನಡದಲ್ಲಿ ನನ್ನನ್ನು ನಿಂದಿಸಲು ಪ್ರಾರಂಭಿಸಿದರು. ನನ್ನ ಕಾರಿನ ಮೇಲೆ ಡಿಆರ್‌ಡಿಒ ಸ್ಟಿಕ್ಕರ್ ಅನ್ನು ಗಮನಿಸಿ, ‘ನೀವು ಡಿಆರ್‌ಡಿಒ ಜನರು’ ಎಂದು ಹೇಳಿದರು. ನಂತರ ಕನ್ನಡದಲ್ಲಿ ಇನ್ನಷ್ಟು ನಿಂದನೆಗಳು ಮುಂದುವರೆದವು. ನಂತರ ಅವನು ನನ್ನ ಹೆಂಡತಿಯನ್ನು ನಿಂದಿಸಿದನು. ನನಗೆ ಅದನ್ನು ಸಹಿಸಲಾಗಲಿಲ್ಲ ಎಂದು ಅವರು ವೀಡಿಯೊದಲ್ಲಿ ಆರೋಪಿಸಿದ್ದಾರೆ.

ಹಲ್ಲೆಯನ್ನು ವಿವರಿಸುತ್ತಾ, ಬೋಸ್, ನಾನು ಕಾರಿನಿಂದ ಇಳಿದ ತಕ್ಷಣ, ಅವನು ತನ್ನ ಬೈಕ್ ಕೀನಿಂದ ನನ್ನ ಹಣೆಗೆ ಹೊಡೆದನು. ನಾನು ಅಲ್ಲಿಯೇ ನಿಂತು ಕೂಗುತ್ತಾ ಜನರು ಸೈನ್ಯ ಅಥವಾ ರಕ್ಷಣಾ ಪಡೆಗಳ ಯಾರನ್ನಾದರೂ ಹೀಗೆ ನಡೆಸಿಕೊಳ್ಳುತ್ತಾರೆಯೇ ಎಂದು ಕೇಳಿದೆ. ಈ ವೇಳೆ ಹೆಚ್ಚಿನ ಜನ ಸೇರಿದ್ದು ನಮ್ಮನ್ನೇ ನಿಂದಿಸಲು ಪ್ರಾರಂಭಿಸಿದರು. ಇನ್ನು ಅಷ್ಟಕ್ಕೆ ಸುಮ್ಮನಾಗದ ಆ ವ್ಯಕ್ತಿ ಕಲ್ಲನ್ನು ಎತ್ತಿಕೊಂಡು ನನ್ನ ಕಾರಿಗೆ ಹಾನಿ ಮಾಡಲು ಪ್ರಯತ್ನಿಸಿದನು. ನಾನು ಅವನನ್ನು ತಡೆಯಲು ಪ್ರಯತ್ನಿಸಿದಾಗ, ಅವನು ಮತ್ತೆ ನನಗೆ ಹೊಡೆದನು. ನನ್ನ ಮುಖದಿಂದ ರಕ್ತ ಸೋರುತ್ತಿರುವುದನ್ನು ನೋಡಬಹುದು. ಇದೇ ನಡೆದಿದ್ದು, ಅದೃಷ್ಟವಶಾತ್, ನನ್ನ ಹೆಂಡತಿ ನನ್ನನ್ನು ಅಲ್ಲಿಂದ ಕರೆದುಕೊಂಡು ಹೋದಳು.

ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಅಲ್ಲಿ ನಮಗೆ ತಕ್ಷಣದ ಸಹಾಯ ಸಿಗಲಿಲ್ಲ. ಕರ್ನಾಟಕ ಯಾಕೆ ಹೀಗಾಯಿತು. ನಾನು ಈ ಸ್ಥಿತಿಯನ್ನು ಕೇಳಿದ್ದೆ ಆದರೆ ಇಂದಿನ ಘಟನೆಯ ನಂತರ, ನಾನು ಆಘಾತಕ್ಕೊಳಗಾಗಿದ್ದೇನೆ. ದೇವರು ನಮಗೆ ಸಹಾಯ ಮಾಡಲಿ. ಪ್ರತೀಕಾರ ತೀರಿಸಿಕೊಳ್ಳದಿರಲು ದೇವರು ನನಗೆ ಶಕ್ತಿಯನ್ನು ನೀಡಲಿ. ಆದರೆ ಕಾನೂನು ಮತ್ತು ಸುವ್ಯವಸ್ಥೆ ವಿಫಲವಾದರೆ, ನಾನು ಪ್ರತೀಕಾರ ತೀರಿಸಿಕೊಳ್ಳುತ್ತೇನೆ ಎಂದು ಬೋಸ್ ವೀಡಿಯೊದಲ್ಲಿ ಆರೋಪಿಸಿದ್ದಾರೆ.

ನಿಖರವಾದ ಸ್ಥಳವನ್ನು ಇನ್ನೂ ಅಧಿಕೃತವಾಗಿ ದೃಢೀಕರಿಸಲಾಗಿಲ್ಲವಾದರೂ, ಸಿವಿ ರಾಮನ್ ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಘಟನೆ ಸಂಭವಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ. ನಂತರ ಪೋಸ್ಟ್ ಮಾಡಿದ ಎರಡನೇ ವೀಡಿಯೊದಲ್ಲಿ, ಬೋಸ್ ತನ್ನ ಅನಾರೋಗ್ಯ ಪೀಡಿತ ತಂದೆಯನ್ನು ಭೇಟಿ ಮಾಡಲು ಕೋಲ್ಕತ್ತಾಗೆ ಹೋಗುತ್ತಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಹಲ್ಲೆಯನ್ನು “ಆಘಾತಕಾರಿ” ಘಟನೆ ಎಂದು ಹೇಳಿದ್ದರು.

1 ಮನೆಗೆ 30 ವಿದ್ಯುತ್​ ಮೀಟರ್​: 2 ವರ್ಷದಿಂದ ಬಿಲ್​ ಸಹ ಕಟ್ತಿದ್ದ… ವಂಚನೆ ಮಾಡಲು ನಡೆದಿತ್ತು ಪ್ಲಾನ್​

Leave a Reply

Your email address will not be published. Required fields are marked *