BBMP
Loading ...

BBMP 1

ಬೆಂಗಳೂರು : ರಾಜಧಾನಿಯಲ್ಲಿ ರಸ್ತೆಗಳ ಅಭಿವೃದ್ಧಿ, ಡಾಂಬರೀಕರಣ, ವೈಟ್‌ಟಾಪಿಂಗ್‌, ಕೆರೆಗಳ ಪುನಶ್ಚೇತನ, ಘನತ್ಯಾಜ್ಯ ನಿರ್ವಹಣೆ, ರಾಜಕಾಲುವೆಗಳ ನಿರ್ಮಾಣ ಸೇರಿದಂತೆ ಇನ್ನಿತರೆ ಕಾಮಗಾರಿಗಳಲ್ಲಿ ಹಗರಣ ಸರ್ವೇಸಾಮಾನ್ಯ ಎಂಬಂತಾಗಿದೆ. ಬಿಬಿಎಂಪಿಯ ಕೆಲ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕೋಟ್ಯಂತರ ರೂ. ಲೂಟಿ ಹೊಡೆಯುತ್ತಿದ್ದಾರೆ.

ಬಿಬಿಎಂಪಿಯ 2022-23 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಕಾಮಗಾರಿಗಳಲ್ಲಿ ನಡೆದಿರುವ ಅಗಣಿತ ಅವ್ಯವಹಾರವನ್ನು ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಈ ವಿಭಾಗವೊಂದರಲ್ಲೇ 886 ಕೋಟಿ ರೂ. ಅಕ್ರಮದ ಶಂಕೆ ವ್ಯಕ್ತಪಡಿಸಲಾಗಿದೆ. ಒಟ್ಟು 816.87 ಕೋಟಿ ರೂ. ಬಿಲ್‌ ಪಾವತಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ. 69.17 ಕೋಟಿ ರೂ.ಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ವಸೂಲು ಮಾಡಲು ಮತ್ತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಪಾಲಿಕೆಯಲ್ಲಿ ಚುನಾಯಿತ ಕೌನ್ಸಿಲರ್‌ಗಳ ಅಧಿಕಾರಾವಧಿ 2020ರ ಸೆ.10 ಕ್ಕೆ ಅಂತ್ಯಗೊಂಡಿತು. ಅಂದಿನಿಂದಲೂ ಮಹಾನಗರದಲ್ಲಿ ಅಧಿಕಾರಿಗಳದ್ದೇ ದರ್ಬಾರು ಆಗಿದೆ. ಈ ಅಧಿಕಾರಿಗಳ ಆಡಳಿತಾವಧಿಯಲ್ಲೇ ಕೋಟ್ಯಂತರ ರೂ. ಅಕ್ರಮ ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ.

ಕೆಲ ಅಧಿಕಾರಿಗಳು ಬೇನಾಮಿಗಳ ಹೆಸರಿನಲ್ಲಿ ಕಾಮಗಾರಿಗಳ ಗುತ್ತಿಗೆ ಪಡೆದು ಬಿಲ್‌ ಪಡೆಯುತ್ತಿರುವ ಆರೋಪಗಳಿವೆ. ಅಲ್ಲದೆ, ಅಂದಾಜು ವೆಚ್ಚವನ್ನು ಜಾಸ್ತಿ ಮಾಡಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಆದರೆ, ಅಕ್ರಮವೆಸಗಿದ ಅಧಿಕಾರಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಇದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ.

ಅಧಿಕಾರಿಗಳಿಂದ 25.65 ಕೋಟಿ ರೂ. ಖೋತಾ: ಪಾಲಿಕೆ ಅಧಿಕಾರಿಗಳು ಸರಬರಾಜುದಾರರು ಹಾಗೂ ಗುತ್ತಿಗೆದಾರರ ಬಿಲ್‌ಗಳಿಂದ ಜಿಎಸ್‌ಟಿ, ಟಿಡಿಎಸ್‌ ಕಡಿತ ಮಾಡಿ ಸರಕಾರಕ್ಕೆ ಪಾವತಿಸಬೇಕು. ಆದರೆ, ಗುತ್ತಿಗೆದಾರರ ಬಿಲ್‌ಗಳಲ್ಲಿ ಜಿಎಸ್‌ಟಿ ಕಡಿತ ಮಾಡಿಲ್ಲ. ಅಲ್ಲದೆ, ಕೆಲವೊಂದು ಸೇವೆಗಳಿಂದ ಜಿಎಸ್‌ಟಿ ಪಾವತಿಯಿಂದ ವಿನಾಯಿತಿ ಇದ್ದರೂ, ಹೊರಗುತ್ತಿಗೆ ಸಂಸ್ಥೆಗಳಿಗೆ ಆ ಮೊತ್ತವನ್ನೂ ಸೇರಿಸಿ ಪಾವತಿಸಿದ್ದು, ಅಧಿಕಾರಿಗಳ ಬೇಜವಾಬ್ದಾರಿಯಿಂದ ಬಿಬಿಎಂಪಿಗೆ 25.65 ಕೋಟಿ ರೂ. ನಷ್ಟ ಉಂಟಾಗಿದೆ.

ಪರಿಷ್ಕೃತ ಅಂದಾಜಿಗಿಲ್ಲ ಅನುಮೋದನೆ: ಯಲಹಂಕ ವಲಯದಲ್ಲಿ ರಸ್ತೆ, ವಿದ್ಯಾ ಸಂಸ್ಥೆಯ ಕಾಂಪೌಂಡ್‌ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಪಿಜೆಬಿ ಎಂಜಿನಿಯರ್ಸ್ ಪ್ರೈ.ಲಿ.ಗೆ ನೀಡಲಾಗಿತ್ತು. ಒಟ್ಟು 24.68 ಕೋಟಿ ರೂ. ವೆಚ್ಚದ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಈ ಕಂಪನಿಗೆ ಹೆಚ್ಚುವರಿ ವೆಚ್ಚದ ಕೆಲಸವನ್ನೂ ವಹಿಸಲಾಗಿತ್ತು. ಆದರೆ, ಪರಿಷ್ಕೃತ ಅಂದಾಜು ಪಟ್ಟಿಗೆ ಸರಕಾರದಿಂದ ಅನುಮೋದನೆಯನ್ನೇ ಪಡೆದಿಲ್ಲ. ಹೀಗಾಗಿ, ಲೆಕ್ಕ ಪರಿಶೋಧಕರು 3.41 ಕೋಟಿ ರೂ.ಗಳಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.

222.60 ಕೋಟಿ ರೂ.ಗೆ ಆಕ್ಷೇಪಣೆ: ಸಾಮಾನ್ಯ ಮತ್ತು ಕಾಮಗಾರಿ ಇಲಾಖೆಗಳಲ್ಲಿ ನಾನಾ ಉದ್ದೇಶಗಳಿಗೆ ಬೇರೆ ಇಲಾಖೆ, ನಿಗಮ, ಮಂಡಳಿ, ಆಸ್ಪತ್ರೆಗಳಿಗೆ ಬಿಬಿಎಂಪಿ ವತಿಯಿಂದ ವಂತಿಗೆ ಪಾವತಿಸಲಾಗಿದೆ. ಈ ಮೊತ್ತಕ್ಕೆ ಸಂಬಂಧಪಟ್ಟ ಕಚೇರಿಗಳಿಂದ ಉಪಯುಕ್ತತಾ ಪ್ರಮಾಣಪತ್ರಗಳನ್ನು ಪಡೆದಿಲ್ಲ. ಹೀಗಾಗಿ, ವಂತಿಗೆ ನೀಡಿರುವ ಉದ್ದೇಶ ಈಡೇರಿರುವ ಮಾಹಿತಿ ಮತ್ತು ವೆಚ್ಚದ ವಿವರ ಲಭ್ಯವಾಗದಿರುವ ಕಾರಣ 222.60 ಕೋಟಿ ರೂ.ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.

ಡಿಪಿಆರ್‌ ಅನುಮೋದನೆಯಲ್ಲೂ ಅಕ್ರಮ: ಡಿಪಿಆರ್‌ ತಯಾರಿಕೆಗೆ ಅಧಿಸೂಚನೆ ಹೊರಡಿಸುವ ಮುನ್ನ ಲೈನ್‌ ಆಫ್‌ ಎಸ್ಟಿಮೇಟ್‌ ಸಿದ್ಧಪಡಿಸಿ, ಆನಂತರ ಕ್ರಮ ಕೈಗೊಳ್ಳಬೇಕು. ಆದರೆ, ಈ ಯಾವುದೇ ಕ್ರಮ ಅನುಸರಿಸದೇ ನೇರವಾಗಿ ದರ ಪಟ್ಟಿ ಮತ್ತು ಟೆಂಡರ್‌ ಆಹ್ವಾನಿಸಲಾಗಿದೆ. ಡಿಪಿಆರ್‌ ತಯಾರಿಸಲು ಆಯ್ಕೆಯಾದ ಸಂಸ್ಥೆಯು ಸಲ್ಲಿಸಿದ ಯೋಜನಾ ವರದಿಯನ್ನು ಯಾವುದೇ ಅಧಿಕಾರಿ ಪರಿಶೀಲಿಸಿಲ್ಲ ಹಾಗೂ ದೃಢೀಕರಿಸಿಲ್ಲ. ಬದಲಿಗೆ ನೇರವಾಗಿ ಅಂಗೀಕರಿಸಿ ಟೆಂಡರ್‌ ಕರೆದು ಕಾಮಗಾರಿ ನಿರ್ವಹಿಸಿರುವುದು ಬಹುತೇಕ ಕಡತಗಳ ಪರಿಶೀಲನೆಯಿಂದ ಕಂಡು ಬಂದಿದೆ ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿಉಲ್ಲೇಖಿಸಲಾಗಿದೆ.

ಜಾಬ್‌ ಕೋರ್ಡ್‌ ಒಂದೇ; ಹಲವು ಬಿಲ್‌: ದಾಸರಹಳ್ಳಿ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್‌ ಕಚೇರಿ ವ್ಯಾಪ್ತಿಯಲ್ಲಿ ಒಂದೇ ಜಾಬ್‌ ಕೋಡ್‌ ಮೂಲಕ ಬೇರೆ ಬೇರೆ ವಾರ್ಡ್‌ಗಳಲ್ಲಿ ಎರಡು ಕಾಮಗಾರಿಗಳನ್ನು ನಿರ್ವಹಿಸಿರುವುದಾಗಿ ಐಎಫ್‌ಎಂಎಸ್‌ ತಂತ್ರಾಂಶದಲ್ಲಿ ದಾಖಲಿಸಿ ಬಿಲ್‌ ಪಾವತಿಸಲಾಗಿದೆ. ಒಂದೇ ಜಾಬ್‌ಕೋಡ್‌ ನಮೂದಿಸಿ ಬಿಲ್‌ ಪಾವತಿಸುತ್ತಿರುವ ಪ್ರಕರಣಗಳಿಂದ ಪಾಲಿಕೆಯ ನಿಧಿ ದುರ್ಬಳಕೆಯಾಗುವ ಸಂಭವವಿದೆ. ಆದ ಕಾರಣ, ಐಎಫ್‌ಎಂಎಸ್‌ ಕಾಮಗಾರಿ ಬಿಲ್‌ ತಂತ್ರಾಂಶವನ್ನು ಸಕ್ಷಮ ಪ್ರಾಧಿಕಾರದಿಂದ ತನಿಖೆಗೆ ಒಳಪಡಿಸುವ ಅಗತ್ಯವಿದೆ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ನಿಗದಿತ ಶುಲ್ಕಕ್ಕಿಂತ 86.56 ಕೋಟಿ ರೂ. ಕಡಿಮೆ ವಸೂಲಿ
ಒಎಫ್‌ಸಿ ಅಳವಡಿಕೆಗೆ ಬಿಬಿಎಂಪಿ ವತಿಯಿಂದ ನಿಗದಿಪಡಿಸಿರುವ ಶುಲ್ಕಕ್ಕಿಂತ 2022-23ನೇ ಸಾಲಿನಲ್ಲಿ86,65,12,945 ರೂ. ಕಡಿಮೆ ವಸೂಲು ಮಾಡಲಾಗಿದೆ. ಇದರಿಂದ ಪಾಲಿಕೆಗೆ ಆದಾಯ ನಷ್ಟವಾದಂತಾಗಿದೆ. ಈ ರೀತಿ ಕಡಿಮೆ ಶುಲ್ಕಗಳ ಲೆಧಿಕ್ಕದ ವಿಧಿವರ ಸಧಿಲ್ಲಿಧಿಸಿದ ಕಾರಣ 12,80,19,972 ರೂ. ವಸೂಲಾತಿಗೆ ಸೂಚಿಸಲಾಗಿದೆ.

ವಿವಿಧ ಬೇಡಿಕೆ ಈಡೇರಿಕೆಗಾಗಿ ಫೆ.27 ರಿಂದ ಸಬ್ ರಿಜಿಸ್ಟ್ರಾರ್ ಸಿಬ್ಬಂದಿ ಕರೆ ಕೊಟ್ಟಿದ್ದ ಮುಷ್ಕರ ಮುಂದೂಡಿಕೆ

Leave a Reply

Your email address will not be published. Required fields are marked *