BBMP
Loading ...

Company Closed

ಬೆಂಗಳೂರು: ನಿಷ್ಕ್ರಿಯ ಹಾಗೂ ನಷ್ಟದಲ್ಲಿರುವ ಒಟ್ಟು 49 ಕಂಪನಿಗಳನ್ನು ಮುಚ್ಚಲು ಅಥವಾ ಮತ್ತೊಂದು ಕಂಪನಿಯ ಜತೆ ವಿಲೀನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯ ಸರ್ಕಾರಿ ಸ್ವಾಮ್ಯದಲ್ಲಿ ಸಾರ್ವಜನಿಕ ವಲಯದ ಒಟ್ಟು 125 ಉದ್ದಿಮೆಗಳಿವೆ. ಇವುಗಳಲ್ಲಿ 34 ಮಾತ್ರ ಲಾಭದಲ್ಲಿವೆ. 16 ನಿಷ್ಕ್ರಿಯಗೊಂಡಿದ್ದು, 33 ನಷ್ಟದಲ್ಲಿವೆ. ಸಾಮಾಜಿಕ ಆಶಯ (ಜಾತಿ ಆಧಾರಿತ) ಅಥವಾ ಕಾಮಗಾರಿ ನಿರ್ವಹಣೆಗಾಗಿ ಸ್ಥಾಪಿಸಲಾದ 42 ಕಂಪನಿ ಅಥವಾ ನಿಗಮಗಳಿವೆ.

ಈ ಪೈಕಿ ನಿಷ್ಕ್ರಿಯಗೊಂಡ ಹಾಗೂ ನಷ್ಟದಲ್ಲಿರುವ ಕಂಪನಿಗಳನ್ನು ಪಟ್ಟಿ ಮಾಡಿರುವ ಆರ್ಥಿಕ ಇಲಾಖೆ, ಅವುಗಳನ್ನು ಮೌಲ್ಯಮಾಪನ ಮಾಡಿ ಬೀಗ ಹಾಕುವ ಅಥವಾ ವಿಲೀನಗೊಳಿಸುವ ಕುರಿತಂತೆ ಜುಲೈ 31ರ ಒಳಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಬಂಧಪಟ್ಟ ಆಡಳಿತ ಇಲಾಖೆಗಳಿಗೆ ನಿರ್ದೇಶನ ನೀಡಿದೆ.

ನಷ್ಟದ ಹಾದಿಯಲ್ಲಿರುವ ಕಂಪನಿಗಳ ಬಗ್ಗೆಯೂ ತಜ್ಞರ ಮೂಲಕ ಮೌಲ್ಯಮಾಪನ ನಡೆಸಬೇಕು. ಜೊತೆಗೆ, ಸರ್ಕಾರದ ಹೂಡಿಕೆ ಮೇಲೆ ಉತ್ತಮ ಲಾಭ ಗಳಿಸಲು ಸಾಧ್ಯವಾಗುವಂತೆ ಇತರ ಕಂಪನಿಗಳ ಕಾರ್ಯಚಟುವಟಿಕೆಯ ಬಗ್ಗೆಯೂ ಮೌಲ್ಯಮಾಪನ ನಡೆಸಬೇಕು. ನಿಷ್ಕ್ರಿಯಗೊಂಡಿರುವ ಕಂಪನಿಗಳನ್ನು ಮುಚ್ಚುವುದರಿಂದ ಕಾರ್ಯಾಚರಣೆಗಳಿಗೆ ತಗಲುವ ವೆಚ್ಚವನ್ನು ಉಳಿತಾಯ ಮಾಡಬಹುದು. ಅಲ್ಲದೆ, ಸಂಪನ್ಮೂಲ ಕ್ರೋಡೀಕರಣ ಮತ್ತು ಉತ್ತಮ ಬಂಡವಾಳ ನಿರ್ವಹಣೆಯೂ ಸಾಧ್ಯವಾಗಲಿದೆ. ನಿಗದಿಪಡಿಸಿದ ರೀತಿಯಲ್ಲಿಯೇ ಕಂಪನಿಗಳನ್ನು ವಿಲೀನಗೊಳಿಸಿದರೆ ಲಾಭ ಪಡೆಯಬಹುದು ಎಂದೂ ಆರ್ಥಿಕ ಇಲಾಖೆ ಅಭಿಪ್ರಾಯಪಟ್ಟಿದೆ.

ಸಚಿವ ಸಂಪುಟ ಉಪ ಸಮಿತಿಯ ಶಿಫಾರಸಿನ ಅನ್ವಯ ಸಾರ್ವಜನಿಕ ಉದ್ಯಮಗಳ ಇಲಾಖೆಯನ್ನು 2022ರ ಮೇ 25ರಂದು ರದ್ದುಪಡಿಸಲಾಗಿದೆ. ಈ ಇಲಾಖೆಯು ನಿರ್ವಹಿಸುತ್ತಿದ್ದ ಉದ್ದಿಮೆಗಳನ್ನು ಆರ್ಥಿಕ ಇಲಾಖೆಗೆ ವಹಿಸಲಾಗಿದೆ. ಆ ನಂತರ ಸಾರ್ವಜನಿಕ ಉದ್ದಿಮೆಗಳನ್ನು ಪುನರ್ ರಚಿಸುವ ಮತ್ತು ಸದೃಢಗೊಳಿಸಲು ಹಲವು ಕ್ರಮಗಳನ್ನು ಇಲಾಖೆ ತೆಗೆದುಕೊಂಡಿದೆ. ಹಣಕಾಸು ಬೆಂಬಲ ನೀಡಲು ಆಂತರಿಕ ಕಾರ್ಪೊರೇಟ್ ಠೇವಣಿಗಳನ್ನು (ಐಸಿಡಿ) ಆರಂಭಿಸಲು ಸಚಿವ ಸಂಪುಟದಿಂದ ಆರ್ಥಿಕ ಇಲಾಖೆ ಅನುಮೋದನೆ ಪಡೆದುಕೊಂಡಿತ್ತು.

ನಿಷ್ಕ್ರಿಯಗೊಂಡಿರುವ ಕಂಪನಿಗಳನ್ನು ಮುಚ್ಚುವ ಪ್ರಸ್ತಾವದ ಬಗ್ಗೆ 2024ರ ಅ. 9ರಂದು ನಡೆದ ವಿಧಾನ ಮಂಡಲದ ಸಾರ್ವಜನಿಕ ಉದ್ದಿಮೆಗಳ ಸಭೆಯಲ್ಲಿ ಕೂಡಾ ಚರ್ಚಿಸಲಾಗಿತ್ತು. ಅಲ್ಲದೆ, ಈ ಕಂಪನಿಗಳು ಕುರಿತಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆರ್ಥಿಕ ಇಲಾಖೆಗೆ ಸಲಹೆ ನೀಡಲಾಗಿತ್ತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆರ್ಥಿಕ ಇಲಾಖೆಯ ಕಾರ್ಯದರ್ಶಿ (ವಿತ್ತೀಯ ಸುಧಾರಣೆ) ಆರ್. ವಿಶಾಲ್‌, ‘ನಷ್ಟದಲ್ಲಿರುವ ಮತ್ತು ನಷ್ಟದ ಕಡೆಗೆ ಸಾಗಿರುವ ಉದ್ಯಮಗಳನ್ನು ಲಾಭದ ಕಡೆಗೆ ಕೊಂಡೊಯ್ಯಲು ಅಗತ್ಯವಾದ ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿದ್ದರೂ, ಕೆಲವು ಉದ್ಯಮಗಳು ಯಶಸ್ಸು ಕಂಡಿಲ್ಲ. ಲಾಭರಹಿತ ಕಂಪನಿಗಳನ್ನು ಲಾಭದ ಕಡೆಗೆ ಕೊಂಡೊಯ್ಯಲು ರಚನಾತ್ಮಕ ಆಡಳಿತ ಚೌಕಟ್ಟು, ಹಣಕಾಸು ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಆಡಳಿತ ಇಲಾಖೆಗಳು ಮೇಲ್ವಿಚಾರಣೆ ನಡೆಸಬೇಕಿದೆ. ಈ ಕುರಿತಂತೆ ಮೌಲ್ಯಮಾಪನ ಮಾಡುವಂತೆ ಫೆ. 15ರಂದೇ ಆದೇಶ ಹೊರಡಿಸಲಾಗಿದೆ’ ಎಂದರು.

‘ಕೆಲವು ಕಂಪನಿಗಳು ತುಂಬ ಹಳೆಯದಾಗಿದ್ದು, ಸುದೀರ್ಘ ಅವಧಿಯಿಂದ ನಷ್ಟದಲ್ಲಿವೆ. ಎಲ್ಲ ಕಂಪನಿಗಳು ಕಂಪನಿ ಕಾಯ್ದೆಯಡಿ ನೋಂದಣಿಯಾಗಿವೆ. ಹೀಗಾಗಿ, ಅವುಗಳನ್ನು ಮುಚ್ಚುವ, ವಿಲೀನಗೊಳಿಸುವ ಮೊದಲು ಕಾಯ್ದೆಯಲ್ಲಿರುವ ನಿಯಮಗಳನ್ನು ಪಾಲಿಸಬೇಕಿದೆ. ದಿವಾಳಿ ಕಂಪನಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ (ಎನ್‌ಸಿಎಲ್‌ಟಿ) ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಕ್ರಮಗಳಿಂದ ಮಾನವ ಸಂಪನ್ಮೂಲ ಮತ್ತು ಕಂಪನಿ ಹೊಂದಿರುವ ಆಸ್ತಿಯ ಸಮರ್ಪಕ ಬಳಕೆ ಸಾಧ್ಯ. ನಿಷ್ಕ್ರಿಯ ಮತ್ತು ಲಾಭದ ಹಳಿಗೆ ತರಲು ಸಾಧ್ಯವೇ ಇಲ್ಲದ ತುಂಬಾ ನಷ್ಟದಲ್ಲಿರುವ ಕಂಪನಿಗಳನ್ನು ಮುಚ್ಚಲು, ಸ್ವಲ್ಪ ಪ್ರಮಾಣದ ನಷ್ಟ ಅಥವಾ ಲಾಭವೂ ಇಲ್ಲದ ನಷ್ಟವೂ ಇಲ್ಲದ ಕಂಪನಿಗೆ ದೊಡ್ಡ ಬಂಡವಾಳ ಹಾಕದೆ ಉತ್ತೇಜನ ನೀಡಲು, ಉತ್ತಮವಾಗಿ ನಡೆಯುವ ಕಂಪನಿಗಳನ್ನು ಇನ್ನಷ್ಟು ಸದೃಢಗೊಳಿಸುವ ಕ್ರಮಗಳನ್ನು ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ’ ಎಂದೂ ಅವರು ವಿವರಿಸಿದರು.

ಸಾರ್ವಜನಿಕ ವಲಯದ ಕಂಪನಿಗಳಲ್ಲಿ ₹64,440 ಕೋಟಿ ಮೊತ್ತವನ್ನು ರಾಜ್ಯ ಸರ್ಕಾರ ಈವರೆಗೆ ಹೂಡಿಕೆ ಮಾಡಿದೆ. ಈ ಹೂಡಿಕೆಯ ಮೇಲೆ 2023–24ರಲ್ಲಿ ಸರ್ಕಾರಕ್ಕೆ ಸಂದ ಲಾಭಾಂಶ ₹285 ಕೋಟಿ. ಈಕ್ವಿಟಿಯ ಮೇಲಿನ ಲಾಭ ಶೇ 0.46ರಷ್ಟು ಮಾತ್ರ. ಹೀಗಾಗಿ, ರಾಜ್ಯದ ಎಲ್ಲ ಸಾರ್ವಜನಿಕ ಉದ್ದಿಮೆಗಳ ಹೂಡಿಕೆಗಳ ಸಂಪೂರ್ಣ ಹೊರೆಯನ್ನು ಲಾಭದಾಯಕ ವಾಗಿರುವ 34 ಉದ್ದಿಮೆಗಳು ಹೊರಬೇಕಾಗಿದೆ ಎಂದು ಆರ್ಥಿಕ ಇಲಾಖೆ ಹೇಳಿದೆ.

ನಷ್ಟದಲ್ಲಿರುವ 33 ಕಂಪನಿಗಳು
1. ಬೆಸ್ಕಾಂ
2. ಚೆಸ್ಕಾಂ
3. ಮೈಸೂರು ಕಾಗದ ಕಾರ್ಖಾನೆ
4. ಹೆಸ್ಕಾಂ
5. ರಾಯಚೂರು ಪವರ್‌ ಕಾರ್ಪೊರೇಷನ್‌ ಲಿಮಿಟೆಡ್‌
6. ಕೆಎಸ್‌ಆರ್‌ಟಿಸಿ
7. ಬಿಎಂಟಿಸಿ,
8. ರಾಜೀವ್ ಗಾಂಧಿ ವಸತಿ ನಿಗಮ
9. ಜೆಸ್ಕಾಂ
10. ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ
11. ಆಹಾರ ಕರ್ನಾಟಕ ನಿಯಮಿತ
12. ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ
13. ಶ್ರೀ ಕಂಠೀರವ ಸ್ಟುಡಿಯೊ ನಿಯಮಿತ,
14. ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್‌
15. ಬೆಂಗಳೂರು ಸಂಯೋಜಿತ ರೈಲು ಮೂಲಸೌಲಭ್ಯ ಅಭಿವೃದ್ಧಿ ಉದ್ಯಮ ನಿಯಮಿತ
16. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ
17. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
18. ಬಾಬು ಜಗಜೀವನ್‌ ರಾಮ್‌ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ
19. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
20. ಮೈಸೂರು ಸಕ್ಕರೆ ಕಂಪನಿ ನಿಯಮಿತ
21. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ
22. ಹುಬ್ಬಳ್ಳಿ– ಧಾರವಾಡ ಬಿಆರ್‌ಟಿಎಸ್‌ ಕಂಪನಿ ಲಿಮಿಟೆಡ್‌
23. ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ಧಿ ನಿಗಮ
24. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ
25. ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ
26. ಎನ್‌ಜಿಇಎಫ್‌ (ಹುಬ್ಬಳ್ಳಿ)
27. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
28. ಕರ್ನಾಟಕ ಗೇರು ಅಭಿವೃದ್ಧಿ ನಿಗಮ
29. ದಿ ಮೈಸೂರು ಇಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಲಿಮಿಟೆಡ್‌
30. ಮೆಸ್ಕಾಂ
31. ಕರ್ನಾಟಕ ರಾಜ್ಯ ನಿರ್ಮಾಣ ನಿಗಮ,
32. ಡಿ. ದೇವರಾಜ ಅರಸು ಟ್ರಕ್‌ ಟರ್ಮಿನಲ್ಸ್‌ ಲಿಮಿಟೆಡ್‌.
33. ಕರ್ನಾಟಕ ವಿದ್ಯುತ್‌ ಕಾರ್ಖಾನೆ ನಿಯಮಿತ

ನಿಷ್ಕ್ರಿಯಗೊಂಡಿರುವ 16 ಕಂಪನಿಗಳು
1. ಕರ್ನಾಟಕ ರಾಜ್ಯ ಆಗ್ರೊ ಕಾರ್ನ್ ಪ್ರಾಡಕ್ಸ್ಸ್
2. ಕರ್ನಾಟಕ ಕೃಷಿ ಕೈಗಾರಿಕೆಗಳ ನಿಗಮ ನಿಯಮಿತ
3. ಬೆಂಗಳೂರು ವಿಮಾನ ನಿಲ್ದಾಣ ರೈಲು ಸಂಪರ್ಕ ನಿಯಮಿತ
4. ಬೆಂಗಳೂರು ಪಿಆರ್‌ಆರ್‌ ಅಭಿವೃದ್ಧಿ ನಿಗಮ ನಿಯಮಿತ
5. ಮೈಸೂರು ತಂಬಾಕು ಕಂಪನಿ ನಿಯಮಿತ
6. ಕರ್ನಾಟಕ ಪಲ್ಪ್‌ವುಡ್‌ ಲಿಮಿಟೆಡ್‌
7. ಕರ್ನಾಟಕ ರಾಜ್ಯ ವೀನರ್ಸ್‌ ಲಿಮಿಟೆಡ್‌
8. ಮೈಸೂರು ಮ್ಯಾಚ್‌ ಕಂಪನಿ ಲಿಮಿಟೆಡ್‌
9. ದಿ ಮೈಸೂರು ಲ್ಯಾಂಪ್‌ ವರ್ಕ್ಸ್‌ ಲಿಮಿಟೆಡ್‌
10. ಮೈಸೂರು ಕಾಸ್ಮೆಟಿಕ್ಸ್‌ ಲಿಮಿಟೆಡ್‌
11. ದಿ ಮೈಸೂರು ಕ್ರೋಮ್‌ ಟ್ಯಾನಿಂಗ್‌ ಕಂಪನಿ ಲಿಮಿಟೆಡ್‌
12. ಎನ್‌ಜಿಇಎಫ್‌ ಲಿಮಿಟೆಡ್‌ (ಬೆಂಗಳೂರು)
13. ಕರ್ನಾಟಕ ಟೆಲಿಕಾಂ ಲಿಮಿಟೆಡ್‌
14. ದಿ ಮೈಸೂರು ಅಸೀಟೆಡ್‌ ಆ್ಯಂಡ್ ಕೆಮಿಕಲ್ಸ್‌ ಕಂಪನಿ ಲಿಮಿಟೆಡ್‌
15. ವಿಜಯನಗರ ಸ್ಟೀಲ್‌ ಲಿಮಿಟೆಡ್‌
16. ಬೆಂಗಳೂರು ಉಪ ನಗರ ರೈಲು ಕಂಪನಿ ಲಿಮಿಟೆಡ್‌

ಸರಕಾರಿ ಕಚೇರಿಗಳ 6 ಸಾವಿರ ಕೋಟಿ ವಿದ್ಯುತ್‌ ಬಿಲ್‌ ಬಾಕಿ: ಸಚಿವ ಕೆ.ಜೆ.ಜಾರ್ಜ್‌ ಹೇಳಿಕೆ

Leave a Reply

Your email address will not be published. Required fields are marked *