ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ಬೃಹತ್ ಬೆಂಗಳೂರು ಮಾಹನಗರ ಪಾಲಿಕೆ’ ವ್ಯಾಪ್ತಿಯಲ್ಲಿ 2024-25ನೇ ಸಾಲಿನ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ ವಿವಿಧ ವರ್ಗ, ಸಮುದಾಯದವರು ಇದ್ದಾರೆ. ಈ ಸಂಬಂಧ ಬಿಬಿಎಂಪಿಯು 2025ರ ಫೆಬ್ರವರಿ 4ರೊಳಗೆ ಅರ್ಜಿ ಸಲ್ಲಿಸುವಂತೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
‘ಬೃಹತ್ ಬೆಂಗಳೂರು ಮಾಹನಗರ ಪಾಲಿಕೆ’ ವ್ಯಾಪ್ತಿಯಲ್ಲಿ ಕಲ್ಯಾಣ ಇಲಾಖೆ ವತಿಯಿಂದ 2024-25 ನೇ ಸಾಲಿನ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳು ಯೋಜನೆ ಸದುಪಯೋಗ ಪಡೆಯಲು ಕೂಡಲೇ ಅರ್ಜಿ ಸಲ್ಲಿಸುವಂತೆ ಬಿಬಿಎಂಪಿ ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ಕೋರಿದ್ದಾರೆ.
ಬೆಂಗಳೂರಿನಲ್ಲಿನ ಎಲ್ಲಾ ವರ್ಗಗಳ ಪೌರಕಾರ್ಮಿಕರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳು, ಆರ್ಥಿಕವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗ, ವಿಶೇಷ ಚೇತನರ ವರ್ಗ, ತೃತೀಯ ಲಿಂಗಿಗಳು ಮತ್ತು ಮಹಿಳಾ ವರ್ಗದ ಅರ್ಹ ಅಭ್ಯರ್ಥಿಗಳಿಂದ ಭೌತಿಕ ಹಾಗೂ ಅಂತರ್ಜಾಲ ತಂತ್ರಾಂಶದ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಬಹುದಾದ ಕಲ್ಯಾಣ ಕಾರ್ಯಕ್ರಮಗಳ ವಿವರವನ್ನು ಆನ್ಲೈನ್ ನಲ್ಲಿ ನೀಡಲಾಗಿದೆ.
* ಒಂಟಿ ಮನೆ ನಿರ್ಮಾಣ / ಅಮೃತ ಮಹೋತ್ಸವ ಯೋಜನೆ.
* ಶೈಕ್ಷಣಿಕ ಕಾರ್ಯಕ್ರಮದಡಿಯಲ್ಲಿ ಶಾಲಾ ಶುಲ್ಕ ಮರುಪಾವತಿ / ಉನ್ನತ ವ್ಯಾಸಂಗಕ್ಕೆ / ವಿದೇಶ ವ್ಯಾಸಂಗಕ್ಕಾಗಿ ಸಹಾಯಧನ.
* ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಗಂಭೀರ ಸ್ವರೂಪ ಕಾಯಿಲೆಗಳಿಗೆ / ಹಿರಿಯ ನಾಗರೀಕರ ಆರೋಗ್ಯ ತಪಾಸಣೆ / ವಿಶೇಷ ಚೇತನರಿಗೆ ಅಂಗ ಜೋಡಣೆ / ಅಂಗವೈಫಲ್ಯ ಸರಿಪಡಿಸುವ ಶಸ್ತ್ರಚಿಕಿತ್ಸೆಗೆ / ವಿಶೇಷ ಚೇತನರಿಗೆ ಫೀಜಿಯೋತೆರಫಿಗೆ ಸಹಾಯಧನ ನೀಡಲಾಗುತ್ತದೆ.
* ಆರ್ಥಿಕ ಸಹಾಯ ಹಾಗೂ ಪ್ರೋತ್ಸಾಹ ಧನದಡಿಯಲ್ಲಿ ಸಂಗೀತ ಸಾಧನ ಖರೀದಿಸಲು / ಕ್ರೀಡಾಪಡುಗಳಿಗೆ, ಸಣ್ಣ ಉದ್ಯಮ ಹಾಗೂ ಸ್ವಯಂ ಉದ್ಯೋಗಕ್ಕೆ / ವಿಶೇಷ ಚೇತನರಿಗೆ ಮೆಡಿಕಲ್ ಶಾಫ್ಗೆ / ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸ್ವಂತ ಸಣ್ಣ ಕೈಗಾರಿಕೋದ್ಯಮ ಸ್ಥಾಪಿಸಲು / ಆಟೋ, ಕಾರ್ ಖರೀದಿಸಲು ಸಹಾಯಧನ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಒದಗಿಸಲಾಗುತ್ತದೆ.
* ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿರುವ / ನಡೆಸುವ ಸಂಘಸಂಸ್ಥೆಗಳಿಗೆ / ವಿಶೇಷ ಚೇತನ ಸಂಸ್ಥೆಗಳಿಗೆ ವಿದ್ಯಾಸಂಸ್ಥೆಗಳಿಗೆ ಆರ್ಥಿಕ ಸಹಾಯ.
* ಪೌರಕಾರ್ಮಿಕರಿಗೆ ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಎಲೆಕ್ನಿಕಲ್ ದ್ವಿಚಕ್ರ ವಾಹನ ವಿತರಣೆ (ಗಾರ್ಮೆಂಟ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು).
* ಮಹಿಳಾ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ.
* ವಿಶೇಷ ಚೇತನರಿಗೆ ಹೆಚ್ಚುವರಿಯಾಗಿ ಅಳವಡಿಸಿರುವ ಉಚಿತ ದ್ವಿಚಕ್ರ ವಾಹನ ವಿತರಣೆ.
* ವಿಶೇಷ ಚೇತನರಿಗೆ ಉಚಿತ ಎಲೆಕ್ಟ್ರಿಕಲ್ ವೀಲ್ ಚೇರ್ ಒದಗಿಸುವುದು.
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಬೀದಿ ಬದಿ ವ್ಯಾಪಾರಿಗಳಿಗೆ ಇ-ಮಾರಾಟ ವಾಹನ ಖರೀದಿಗೆ ಸಹಾಯಧನ ಶೇ.90ರಷ್ಟು ಅಥವಾ ರೂ.1.50 ಲಕ್ಷಗಳವರೆಗೆ ಯಾವುದು ಕಡಿಮೆಯೋ ಸದರಿ ಮೊತ್ತದ ಸಹಾಯಧನ ನೀಡಲಾಗುತ್ತದೆ.
* ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ, ಪೌರ ಕಾರ್ಮಿಕರ ಮಕ್ಕಳಿಗೆ ಹಾಗೂ ಎಲ್ಲಾ ವರ್ಗದ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು.
ಅಭ್ಯರ್ಥಿಗಿಗೆ ವಿಶೇಷ ಸೂಚನೆ
ಈ ಮೇಲ್ಕಂಡ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರಗಳನ್ನು ಬಿಬಿಎಂಪಿಯ ಅಧಿಕೃತ ವೆಬ್ಸೈಟ್ https://bbmp.gov.in/home ಅಥವಾ https://site.bbmp.gov.in/departmentwebsites/welfare/ ಅಥವಾ https://site.bbmp.gov.in/departmentwebsites/welfare/welfareactivities.html ಪ್ರಕಟಿಸಲಾಗಿದೆ.
ಅನುದಾನದ ಲಭ್ಯತೆಯನ್ನು ಪರಿಗಣಿಸಿ ಮೇಲ್ಕಂಡ ಕಾರ್ಯಕ್ರಗಳಿಗೆ ಆಯ್ಕೆಯಾಗುವ ಫಲಾನುಭವಿಗಳಿಗೆ ಸೌಲಭ್ಯವನ್ನು ನೀಡಲಾಗುವುದು / ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಸಲ್ಲಿಕೆ ಆಗುವ ಅರ್ಜಿಗಳನ್ನು 2024-25ನೇ ಸಾಲಿನ ಪಾಲಿಕೆಯ ಅನುಮೋದಿತ ಮಾರ್ಗಸೂಚಿಗಳ ಅನುಸಾರ ಅರ್ಜಿಯನ್ನು ಪಾಲಿಕೆಯ ವಲಯ ಜಂಟಿ ಆಯುಕ್ತರ ಕಛೇರಿಗಳಲ್ಲಿರುವ ಸಹಾಯಕ ಕಂದಾಯ ಅಧಿಕಾರಿ (ಕಲ್ಯಾಣ) ರವರ ಕಛೇರಿಯಿಂದ ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡುತ್ತಾರೆ.
ಇನ್ನೂ ಭೌತಿಕ ಅರ್ಜಿಗಳನ್ನು ಫೆಬ್ರವರಿ 04ರೊಳಗೆ ಆಯಾ ವಲಯಗಳ ಸಹಾಯಕ ಕಂದಾಯ ಅಧಿಕಾರಿ(ಕಲ್ಯಾಣ) ರವರ ಕಚೇರಿಗಳಲ್ಲಿ ಸಲ್ಲಿಸಬಹುದು ಎಂದು ಬಿಬಿಎಂಪಿಯು ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.


