BBMP
Loading ...

ಕರುನಾಡ ಕಣ್ಮಣಿಗೆ ಕಣ್ಣೀರ ವಿದಾಯ. ಬಿಸಿಯೂಟದ ಹರಿಕಾರನಿಗೆ ಕಂಬನಿಯ ನಮನ. ಬಡಜನ್ರಿಗೆ ಆರೋಗ್ಯ ಭಾಗ್ಯಕೊಟ್ಟಿದ್ದ ನಾಯಕನಿಗೆ ದಾರಿಯುದ್ದಕ್ಕೂ ಅಂತಿಮ ಗೌರವ. ಕನ್ನಡ ನೆಲದ ಕಂಪನ್ನ ವಿಶ್ವಕ್ಕೆ ಪಸರಿಸಿರುವ ನಾಯಕರಲ್ಲಿ ಒಬ್ಬರಾಗಿದ್ದ ಎಸ್‌ಎಂ ಕೃಷ್ಣ ಬದುಕಿನ ಪಯಣ ಅಂತ್ಯಗೊಳಿಸಿದ್ದಾರೆ. ನಿನ್ನೆ (ಡಿಸೆಂಬರ್ 10) ಬೆಳಗಿನಜಾವ ಉಸಿರು ನಿಲ್ಲಿಸಿದ್ದ ಮುತ್ಸದಿ ರಾಜಕಾರಣಿಗೆ, ಇಂದು (ಡಿಸೆಂಬರ್ 11) ಸರ್ಕಾರಿ ಗೌರವ, ನಾಯಕರ ಕಂಬನಿ, ಕುಟುಂಬದವರ ಕಣ್ಣೀರಿನೊಂದಿಗೆ ವಿದಾಯ ಹೇಳಲಾಯ್ತು.

ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ನಾಯಕ ಎಸ್‌ಎಂ ಕೃಷ್ಣ, ಇನ್ನಿಲ್ಲ ಅನ್ನೋ ಸುದ್ದಿ ಗೊತ್ತಾಗ್ತಿದ್ದಂತೆ ನಿನ್ನೆಯೇ ನಾಯಕರೆಲ್ಲಾ ನುಡಿನಮನ ಸಲ್ಲಿಸಿದ್ರು. ಬೆಳಗಾವಿಯಲ್ಲಿ ನಡೆಯುತ್ತಿದ್ದ ಸದನವನ್ನೇ ಮುಂದೂಡಿದ್ದ ನಾಯಕರು ಇಂದು ಸೋಮನಹಳ್ಳಿಗೆ ಬಂದು ಕೃಷ್ಣರ ಅಂತಿಮ ದರ್ಶನ ಪಡೆದ್ರು.

ಸಿದ್ದರಾಮಯ್ಯ ಸಂಪುಟದ ಸಹೋದ್ಯೋಗಿಗಳು, ಶಾಸಕರು, ಒಕ್ಕಲಿಗ ಹಾಗೂ ಇತರ ಮಠದ ಶ್ರೀಗಳು ಸೇರಿದಂತೆ ಎಲ್ಲರೂ ನಮನ ಸಲ್ಲಿಸಿದ್ರೆ, ಪೊಲೀಸ್‌ ಬ್ಯಾಂಡ್‌ ಮೂಲಕವೂ ಗೌರವ ಸಲ್ಲಿಸಲಾಯ್ತು.

ಇನ್ನು ಡಿಸಿಎಂ ಡಿಕೆಶಿಯಂಥೂ ನಿನ್ನೆಯಿಂದಲೂ ಕಣ್ಣೀರಾಗಿದ್ದಾರೆ. ಇಂದು ತಮ್ಮ ನಾಯಕನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟಿದ್ದ ಡಿಕೆಶಿ ಕಣ್ಣೀರಿಡುತ್ತಾಲೇ ಎಲ್ಲವನ್ನೂ ನಿರ್ವಹಿಸಿದ್ರು.

ತಾವೊಬ್ಬ ಡಿಸಿಎಂ ಅನ್ನೋದನ್ನ ಮರೆತು ಇಲ್ಲಿ ಎಸ್‌ಎಂಕೆಯ ಶಿಷ್ಯನಾಗಿ ಕಾಣಿಸಿಕೊಂಡಿದ್ರು. ಕೈಯಲ್ಲಿ ಮೈಕ್‌ ಹಿಡಿದು ಎಲ್ಲವನ್ನೂ ನಿರ್ವಹಿಸಿದ ಡಿಕೆಶಿ, ಪುಷ್ಪಗುಚ್ಚ ಇಡುವಾಗ ಕಣ್ಣೀರಾದ್ರು. ಅಲ್ಲದೇ ಗುರುವಿಗೆ ಹೆಗಲು ನೀಡಿ ಅಂತಿಮ ವಿದಾಯ ಹೇಳಿದರು.

ಮುಗಿಯುತ್ತಿದ್ದಂತೆ ಎಸ್‌ಎಂಕೆ ಪಾರ್ಥೀವ ಶರೀರದ ಮೇಲಿದ್ದ ರಾಷ್ಟ್ರಧ್ವಜವನ್ನ ಕುಟುಂಬಕ್ಕೆ ಹಸ್ತಾಂತರಿಸಲಾಯ್ತು. ಸಿಎಂ ಹಾಗೂ ಗೃಹಸಚಿವರು ಕೃಷ್ಣ ಅವರ ಪತ್ನಿ ಪ್ರೇಮ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದ್ರು.

ನಿರ್ಮಲಾನಂದನಾಥ ಸ್ವಾಮೀಜಿ ಸ್ವಾಮೀಜಿ ಸೇರಿದಂತೆ ವಿವಿಧ ಸಮುದಾಯಗಳ ಸ್ವಾಮೀಜಿಗಳು ಸಹ ಎಸ್​ಎಂ ಕೃಷ್ಣ ಅವರ ಅಂತಿಮ ದರ್ಶನ ಪಡೆದುಕೊಂಡರು.

ಕಾಂಗ್ರೆಸ್‌ ಸೇರ್ಪಡೆಯಾಗಲು ಮೊದಲು ಎಸ್‌ಎಂ ಕೃಷ್ಣ ಅವರ ಸಲಹೆಯನ್ನೇ ಪಡೆದಿದ್ದೇ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಹಿತೈಸಿಯ ಅಂತಿಮ ದರ್ಶನ ಪಡೆದು ಪುಷ್ಪಗುಚ್ಚವಿಟ್ಟು ಗೌರವ ಸಲ್ಲಿಸಿದ್ರು.

ಇನ್ನು ತಮ್ಮ ಜಿಲ್ಲೆಯ ಹೆಸರನ್ನು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ್ದ ಎಸ್​ಎಂ ಕೃಷ್ಣ ಅವರನ್ನು ಕಳೆದುಕೊಂಡು ಮಂಡ್ಯ ಜಿಲ್ಲೆ ಕಣ್ಣೀರಿಟ್ಟಿದೆ. ಮಂಡ್ಯ ಜನತೆಗೆ ಮನೆ ಮಗನನ್ನೇ ಕಳೆದುಕೊಂಡ ಭಾವ

ಪೂಜೆ, ವಿಧಿವಿಧಾನ ಮುಗಿಯುತ್ತಿದ್ದಂತೆ ಮೊಮ್ಮಗ ಅಮೃತ್‌ಹೆಗ್ಡೆ, ಹೆಗಲ ಮೇಲೆ ಹಿಂಡೆಕೂಳು ಹೊತ್ತು ಅಜ್ಜನ ಚಿತೆಗೆ ಮೂರು ಸುತ್ತು ಹಾಕಿದ್ರು. ಬಳಿಕ ಕೃಷ್ಣರ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ರು. ಹೀಗೆ 92 ಸಾರ್ಥಕ ಬದುಕು ಸವೆಸಿದ್ದ ಎಸ್‌ಎಂ ಕೃಷ್ಣ ಪಂಚಭೂತಗಳಲ್ಲಿ ಲೀನವಾದ್ರು. ಆ ಮೂಲಕ ಹೈಟೆಕ್‌ ರಾಜಕಾರಣಿಯ ಯುಗಾಂತ್ಯವಾಗಿತ್ತು.

ಧೀಮಂತ ರಾಜಕಾರಣಿಯ ಯುಗಾಂತ್ಯ! ಪಂಚಭೂತಗಳಲ್ಲಿ ಲೀನರಾದ ಎಸ್‌ಎಂ ಕೃಷ್ಣ

Leave a Reply

Your email address will not be published. Required fields are marked *