BBMP
Loading ...

BESCOM

ಬೆಂಗಳೂರು: ಹಿಂಗಾರು ಮಳೆಯ ಅಬ್ಬರಕ್ಕೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಗೆ (ಬೆಸ್ಕಾಂ) ಅಕ್ಟೋಬರ್‌ ತಿಂಗಳಲ್ಲಿ 3.49 ಕೋಟಿ ರೂ. ನಷ್ಟವಾಗಿದೆ. ಇದು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬೆಸ್ಕಾಂ ತಿಂಗಳೊಂದರಲ್ಲಿ ಅನುಭವಿಸಿದ ಅತ್ಯಧಿಕ ನಷ್ಟದ ಮೊತ್ತ.

ಮಳೆ ಗಾಳಿಯಿಂದಾಗಿ ನಿರಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಜೊತೆಗೆ, ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ 840 ವಿದ್ಯುತ್‌ ಕಂಬಗಳು ಧರೆಗುರುಳಿವೆ. 30 ಡಿಪಿ ಸ್ಟ್ರಕ್ಚರ್‌ಗಳು ಹಾಗೂ ನೂರಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ಪರಿಕರಗಳ ಬದಲಾವಣೆಗಾಗಿ 2.7 ಕೋಟಿ ರೂ. ಹಾಗೂ ದುರಸ್ತಿಗಾಗಿ (ಕಾರ್ಮಿಕರ ವೆಚ್ಚ) 66 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.

ದಾವಣಗೆರೆಯಲ್ಲಿ ಹೆಚ್ಚು ಹಾನಿ: ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳ ಪೈಕಿ ದಾವಣಗೆರೆ ಜಿಲ್ಲೆಯಲ್ಲಿ 227 ವಿದ್ಯುತ್‌ ಕಂಬಗಳು ಮುರಿದುಬಿದ್ದಿವೆ. ಅಂದಾಜು 13 ಲಕ್ಷ ರೂ. ನಷ್ಟವಾಗಿದೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆಯಲ್ಲಿ 142, ರಾಮನಗರದಲ್ಲಿ 119 ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ 111 ಕಂಬಗಳು ಮುರಿದುಬಿದ್ದಿವೆ. ನಾಲ್ಕು ಜಿಲ್ಲೆಗಳಿಂದ ಅಂದಾಜು 39 ಲಕ್ಷ ರೂ.ನಷ್ಟು ನಷ್ಟವಾಗಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.

‌ವಿದ್ಯುತ್‌ ಕಂಬಗಳಷ್ಟೇ ಅಲ್ಲದೇ, 189 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿವೆ. ಅಂದಾಜು ₹2.19 ಕೋಟಿಯಷ್ಟು ನಷ್ಟವಾಗಿದೆ. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 117 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ಟ್ರಾನ್ಸ್‌ಫಾರ್ಮರ್‌ಗಳ ಹಾನಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. 46 ಟ್ರಾನ್ಸ್‌ಫಾರ್ಮರ್‌ಗಳು ಹಾನಿಯಾಗಿರುವ ರಾಮನಗರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

‘ಬೆಸ್ಕಾಂ ವ್ಯಾಪ್ತಿಯಲ್ಲಿ ಹಾನಿಗೊಳಗಾದ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಿಸುವ ಹಾಗೂ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ವಿಳಂಬವಿಲ್ಲದೇ ದುರಸ್ತಿ ಕಾರ್ಯ ಕೈಗೊಂಡಿದ್ದೇವೆ. ದುರಸ್ತಿ ವೇಳೆ, ಗ್ರಾಹಕರಿಗೆ ಪರ್ಯಾಯವಾಗಿ ವಿದ್ಯುತ್ ಪೂರೈಸಿ, ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದರು.

ಏಳು ತಿಂಗಳಲ್ಲಿ 24 ಕೋಟಿ ರೂ. ನಷ್ಟ
ಬೆಸ್ಕಾಂ ವ್ಯಾಪ್ತಿಯಲ್ಲಿ ಈ ವರ್ಷದ ಏಪ್ರಿಲ್‌ನಿಂದ ಅಕ್ಟೋಬರ್‌ 22ರವರೆಗೆ 8225 ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. 1367 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. 9.20 ಕಿ.ಮೀಗಳಷ್ಟು ಉದ್ದದ ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ಒಟ್ಟು ₹24.93 ಕೋಟಿ ನಷ್ಟವಾಗಿದೆ.

ಹಾಸನಾಂಬ ದರುಶನಕ್ಕೆ ನೂಕುನುಗ್ಗಲು: ಆಡಳಿತ ಮಂಡಳಿಯಿಂದ ಎಲ್ಲಾ ಪಾಸ್ ರದ್ದು

Leave a Reply

Your email address will not be published. Required fields are marked *