BBMP
Loading ...

Namma Metro

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ಮೂರನೇ ಹಂತಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ರಾಜ್ಯ ದ ಜನತೆಗೆ ವರಮಹಾಲಕ್ಷ್ಮೀ ಮತ್ತು ಗೌರಿ ಗಣೇಶ ಹಬ್ಬಕ್ಕೆ ಭರ್ಜರಿ ಗಿಫ್ಟ್‌ ನೀಡಿದೆ. ಒಂದೂವರೆ ವರ್ಷದ ಹಿಂದೆ ಕರ್ನಾಟಕ ಸರ್ಕಾರ 3ನೇ ಹಂತದ ಎರಡು ಕಾರಿಡಾರರ್​ಗಳ ಈ ಯೋಜನೆಗಳಿಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು.

ಈ ಯೋಜನೆಯ ಒಟು ಉದ್ದ 44.65 ಕಿಲೋಮೀಟರ್‌ ನಷ್ಟಿದ್ದು, 31 ನಿಲ್ದಾಣಗಳನ್ನು ಹೊಂದಿರಲಿದೆ. 32.15 ಕಿಮೀ ಉದ್ದದ ಬೆಂಗಳೂರಿನ ಜೆಪಿ ನಗರದ 4ನೇ ಹಂತದಿಂದ ಪಶ್ಚಿಮ ಬಾಗದ ಹೊರ ವರ್ತುಲ ರಸ್ತೆಯಿಂದ ಕೆಂಪಾಪುರವರೆಗೆ 21 ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದರ ಜೊತೆಗೆ ಹೊಸಹಳ್ಳಿಯಿಂದ ಮಾಗಡಿ ರಸ್ತೆ ಮೂಲಕ ಕಡಬಗೆರೆವರೆಗಿನ ಕಾರಿಡಾರ್-2 ಕ್ಕೂ ಅನುಮೋದನೆ ದೊರೆತಿದೆ. ಇದರ ಉದ್ದ 12.50 ಕಿಮೀಗಳಷ್ಟಿದ್ದು, 9 ನಿಲ್ದಾಣಗಳನ್ನು ಹೊಂದಿದೆ.

2018ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು ಈ ಯೋಜನೆಗೆ ಗ್ರೀನ್​ ಸಿಗ್ನಲ್​ ನೀಡಿದ್ದರು. ನಾಗರಬಾವಿಯಲ್ಲದೆ, ಮಾಗಡಿ ರಸ್ತೆಯ ಕಾಮಾಕ್ಷಿ ಪಾಳ್ಯ, ಮತ್ತು ಸುಂಕದಕಟ್ಟೆಯಲ್ಲೂ ಮೆಟ್ರೋ ಸೇವೆ ತರಲು ಶಾಸಕರಾದ ಪ್ರಿಯಕೃಷ್ಣ ಅವರು ಯತ್ನಿಸಿದ್ದರು. ಕೊನೆಗೂ ಅವರ ಕನಸು ಇಂದು ನನಸಾಗಿದೆ.

ನಮ್ಮ ಮೆಟ್ರೋ ಪ್ರಸ್ತಾವನೆ ಅಂಗೀಕರಿಸಿದ ಕೇಂದ್ರ ಸಚಿವ ಸಂಪುಟ
ನಮ್ಮ ಮೆಟ್ರೋಗೆ ಸಂಬಂಧಿಸಿದ ಈ ಯೋಜನೆಗಳ ಒಟ್ಟು ವೆಚ್ಚ 15,611 ಕೋಟಿ ರೂ.ಗಳ ಈ ಯೋಜನೆಗಳಿಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಈ ಮೂಲಕ ಬೆಂಗಳೂರಿನ ನಮ್ಮ ಮೆಟ್ರೋ ಉದ್ದ 220.20 ಕಿಮೀಗೆ ವಿಸ್ತರಣೆಯಾಗುತ್ತದೆ.

ಕೆಂಪೇಗೌಡ ವಿಮಾನ ನಿಲ್ದಾಣ ಮತ್ತು ಪೂರ್ವ ಭಾಗದ ಹೊರ ವರ್ತುಲ ರಸ್ತೆಗೆ ಸಂಪರ್ಕ ಲಭ್ಯವಾಗಲಿದ್ದು, ನಗರದ ಪ್ರಮುಖ ಮಾಹಿತಿ ತಂತ್ರಜ್ಞಾನ ಕ್ಲಸ್ಟರ್‌ ಗಳಿಗೆ ಮತ್ತು ಬಹುತೇಕ ಭಾಗಗಳಿಗೆ ನಮ್ಮ ಮೆಟ್ರೋ ರೈಲು ಸಂಪರ್ಕ ಕಲ್ಪಿಸಿದಂತಾಗುತ್ತದೆ.

ನಮ್ಮ ಮೆಟ್ರೋ 3ನೇ ಹಂತ ಯೋಜನೆಯ ಪ್ರಯೋಜನಗಳು
ನಮ್ಮ ಮೆಟ್ರೋ ಯೋಜನೆಯ 3ನೇ ಹಂತವು ನಗರದ ಮೂಲಭೂತ ಸೌಕರ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಪ್ರಮುಖ ಪ್ರದೇಶಗಳಾದ ಪೀಣ್ಯ ಕೈಗಾರಿಕಾ ಪ್ರದೇಶ, ಬನ್ನೇರುಘಟ್ಟ ಮತ್ತು ಹೊರ ವರ್ತುಲ ರಸ್ತೆಯ ಪ್ರಮುಖ ಕೈಗಾರಿಕಾ ಪ್ರದೇಶಗಳು, ತುಮಕೂರು ರಸ್ತೆ , ಒಆರ್‌ ಆರ್‌ ರಸ್ತೆಯ ಗಾರ್ಮೆಂಟ್ಸ್ ಮತ್ತು ಇಂಜಿನಿಯರಿಂಗ್‌ ಕೈಗಾರಿಕೆಗಳು, ಬಿಇಎಲ್‌, ಪಿಇಎಸ್‌ ವಿಶ್ವವಿದ್ಯಾಲಯದಂತಹ ಪ್ರಮುಖ ಶಿಕ್ಷಣ ಸಂಸ್ಥೆಗಳು, ಅಂಬೇಡ್ಕರ್‌ ಕಾಲೇಜು, ಕೆಎಲ್‌ ಇ ಕಾಲೇಜು, ದಯಾನಂದಸಾಗರ ವಿಶ್ವವಿದ್ಯಾಲಯ, ಐಟಿಐ ಸೇರಿದಂತೆ ಅನೇಕ ಪ್ರಮುಖ ಕೇಂದ್ರಗಳಿಗೆ ಸಂಪರ್ಕ ಕೊಂಡಿಯಾಗಲಿದೆ. ದಕ್ಷಿಣ ಭಾಗದ ಹೊರ ವರ್ತುಲ ರಸ್ತೆ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ಮಾಗಡಿ ರಸ್ತೆ ಮತ್ತಿತರ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸಲಿದೆ.

ಈ ಮೂಲಕ ನಗರದ ಬಹುಭಾಗಕ್ಕೆ ಮೆಟ್ರೋ ಜಾಲ ವಿಸ್ತರಣೆಯಾಗಲಿದ್ದು, ಒಂದು ತುದಿಯಿಂದ ಮತ್ತೊಂದು ತುದಿಗೆ ಸುಲಭವಾಗಿ ತಲುಪಬಹುದಾಗಿದೆ. ರಸ್ತೆ ಸಾರಿಗೆಗೆ ಮೆಟ್ರೋ ರೈಲು ಪ್ರಮುಖ ಪರ್ಯಾಯ ಸಾರಿಗೆ ಮಾರ್ಗವಾಗಿದ್ದು, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಯೋಜನೆ ಹಾದು ಹೋಗುವ ಮಾರ್ಗಗಳಲ್ಲಿ ಟ್ರಾಫಿಕ್‌ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದ್ದು, ಪ್ರಯಾಣಿಕರು ಸುಲಭವಾಗಿ ಪ್ರಯಾಣಿಸಬಹುದಾಗಿದೆ.

ಮೆಟ್ರೋದಿಂದ ಮಾಲಿನ್ಯ ನಿಯಂತ್ರಣವಾಗಲಿದ್ದು, ಕಾರ್ಬನ್‌ ಹೊರಸೂಸುವುದು ಕಡಿಮೆಯಾಗಲಿದೆ. ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ತಲುಪುವುದು ಸುಲಭವಾಗಲಿದ್ದು ಉದ್ಯೋಗಿಗಳು ಮತ್ತು ಕಾರ್ಮಿಕರಿಗೆ ವರದಾನವಾಗಲಿದೆ. ಈ ಮೂಲಕ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಲಿದೆ. ಸ್ಥಳೀಯ ವ್ಯಾಪಾರ ಮತ್ತು ವಹಿವಾಟು ಹೆಚ್ಚಾಗಲಿದೆ. ಇದರಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳ ಸಂಖ್ಯೆ ಹೆಚ್ಚಾಗಲಿದೆ. ಈ ಮೆಟ್ರೋ ರೈಲು ಯೋಜನೆಗೆ ಅನುಮತಿ ನೀಡುವ ಮೂಲಕ ಕೇಂದ್ರ ಸರ್ಕಾರ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಕೊಡುಗೆ ನೀಡಿದೆ ಎಂದು ಕೇಂದ್‌ ಸಚಿವ ಪ್ರಹ್ಲಾದ ಜೋಷಿ ತಿಳಿಸಿದ್ದಾರೆ.

ನಮ್ಮ ಮೆಟ್ರೋ 3ನೇ ಹಂತ: ಒಟ್ಟು 31 ನಿಲ್ದಾಣ, ನಾಗರಬಾವಿ, ಕಾಮಾಕ್ಷಿ ಪಾಳ್ಯಕ್ಕೂ ಸಂಪರ್ಕ, ಪ್ರಿಯಕೃಷ್ಣ ಕನಸು ನನಸು

Leave a Reply

Your email address will not be published. Required fields are marked *