ಬೆಂಗಳೂರು: ಜಿಕೆವಿಕೆ ಆವರಣದಲ್ಲಿ 4 ದಿನ ನಡೆದ ಕೃಷಿ ಮೇಳ ಭಾನುವಾರ ತೆರೆ ಕಂಡಿತು. ಈ ಬಾರಿ ದಾಖಲೆಯ 34 ಲಕ್ಷ ಜನ ಭೇಟಿ ನೀಡಿದ್ದು ವಿಶೇಷವಾಗಿದೆ. ಕೃಷಿ ಸಮಸ್ಯೆಗಳ ಪರಿಹಾರ ಕುರಿತು ಮಾಹಿತಿ, ಹೊಸ ಯಂತ್ರ, ತಳಿಗಳ ಪರಿಚಯ, ಭರವಸೆ ಮೂಡಿಸುವ ಕಾರ್ಯಕ್ರಮಗಳು ರೈತರಲ್ಲಿ ಚೈತನ್ಯ ತುಂಬಿದವು.
ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ರಿಮೋಟ್ ಕಂಟ್ರೋಲ್ ಕೃಷಿಬಾಟ್ ಯಂತ್ರಗಳನ್ನು ಪರಿಶೀಲಿಸಿದರು. ನಂತರ ಟ್ರ್ಯಾಕ್ಟರ್ ಚಲಾಯಿಸಿ ಸಂಭ್ರಮಿಸಿದರು.
‘ಹವಾಮಾನ ಚತುರ ಡಿಜಿಟಲ್ ಕೃಷಿ’ ಘೋಷವಾಕ್ಯದಡಿ ಆರಂಭವಾದ ಮೇಳದಲ್ಲಿಹವಾಮಾನ ಮತ್ತು ಡಿಜಿಟಲ್ ಕೃಷಿ ಕುರಿತು ಕೃಷಿ ವಿವಿಯ ಪ್ರಾತ್ಯಕ್ಷಿಕೆಗಳು ಹಾಗೂ ಯಶಸ್ವಿ ಪ್ರಯೋಗಗಳ ಸಂಖ್ಯೆ ಹೆಚ್ಚಾಗಿದ್ದವು.
ಮೊದಲ ಎರಡು ದಿನ ಜಿಟಿ ಜಿಟಿ ಮಳೆ ಕೊಂಚ ಅಡ್ಡಿ ಉಂಟು ಮಾಡಿತು. ಶನಿವಾರ ಮತ್ತು ಭಾನುವಾರ ಜಾತ್ರೆಗೆ ಕಳೆ ಬಂದಿತ್ತು. 21 ಬಗೆಯ ದೇಸಿ ತಳಿಯ ಹಸುಗಳು, ದುಬಾರಿ ಬೆಲೆಯ ಕುರಿ, ಮೇಕೆಗಳು ಹಾಗೂ ವರ್ಷಕ್ಕೆ 280 ಮೊಟ್ಟೆಗಳನ್ನು ಕೊಡುವ ಕೋಳಿಗಳ ಜತೆಗೆ ನಾನಾ ಯಂತ್ರೋಪಕರಣಗಳು ಗಮನಸೆಳೆದವು. ಕೃಷಿ ಯಂತ್ರಗಳು, ನೀರಾವರಿ ಪರಿಕರ, ಸಸ್ಯ ವೈವಿಧ್ಯ, ಸಮಗ್ರ ಕೃಷಿ, ಪಶು, ಕೋಳಿ ಸಾಕಣೆ, ಜೇನು ಸಾಕಾಣಿಕೆ, ಮೀನು ಸಾಕಾಣಿಕೆ ಕೃಷಿ-ಉದ್ಯಮ ಕ್ಷೇತ್ರಗಳ ಹೊಸ ಬೆಳವಣಿಗೆಗಳ ಕುರಿತು ಕುತೂಹಲಕರ ಮಾಹಿತಿ ವಿನಿಮಯ ನಡೆಯಿತು.
ತೋಟಗಾರಿಕೆ ವಿಭಾಗವು ಹಸಿರು ಮನೆಯಲ್ಲಿಬೆಳೆಸಿದ ನಾನಾ ಜಾತಿಯ ಪುಷ್ಪ ಹಾಗೂ ತರಕಾರಿ ಬೆಳೆಗಳು, ನರ್ಸರಿ ಸಸಿಗಳನ್ನು ಮಾರಾಟಕ್ಕಿಡಲಾಗಿತ್ತು. ಈ ಬಾರಿ ಕೊಳೆಯುವ, ಕೊಳೆಯದ, ಅಪಾಯಕಾರಿ ಕಸ ವಿಂಗಡಣೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದ್ದು ವಿಶೇಷವಾಗಿತ್ತು. ನಾನಾ ಆಹಾರ ಬೆಳೆ, ತರಕಾರಿ ಬೆಳೆಗಳು, ಸುಗಂಧ ದ್ರವ್ಯ, ಔಷಧೀಯ ಸಸ್ಯಗಳನ್ನು ಬೆಳೆದಿರುವ ತಾಕುಗಳು ಜನರನ್ನು ಸೆಳೆದವು. ರೈತರಷ್ಟೇ ಅಲ್ಲದೆ ಕೈತೋಟ, ತಾರಸಿ ತೋಟ ಆಸಕ್ತರು ಕೂಡ ಮಾಹಿತಿ ಪಡೆದರು. ಲಕ್ಷಾಂತರ ಸಂಖ್ಯೆಯಲ್ಲಿಸಾಮಾನ್ಯ ಜನ ಕೂಡ ಭೇಟಿ ನೀಡಿ, ಕೃಷಿ ಜಾತ್ರೆಯಲ್ಲಿಮಿಂದೆದ್ದರು. ಆಹಾರ, ಗೃಹೋಪಯೋಗಿ ವಸ್ತುಗಳ ಮಳಿಗೆಗಳಲ್ಲಿಭಾರಿ ಸಂಖ್ಯೆಯ ಜನರು ನೆರೆದಿದ್ದರು. ವೈವಿಧ್ಯಮಯ ಆಹಾರ ಜನರ ಬಾಯಿ ತಣಿಸಿತು.
6 ಕೋಟಿ ವಹಿವಾಟು: ಕೃಷಿ ಮೇಳದಲ್ಲಿ ಮೊದಲ ದಿನ 3.82 ಲಕ್ಷ ಮಂದಿ ಭಾಗಿಯಾಗಿ 85 ಲಕ್ಷ ರೂ ವಹಿವಾಟು ನಡೆದಿತ್ತು. ಮೂರು ಮತ್ತು ನಾಲ್ಕನೇ ದಿನ 10 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು. ನಾಲ್ಕು ದಿನಗಳಲ್ಲಿ ಒಟ್ಟು 34.13 ಲಕ್ಷ ಮಂದಿ ಭೇಟಿ ನೀಡಿ, 6.17 ಕೋಟಿ ವಹಿವಾಟು ನಡೆದಿದೆ.
ಬೆಸ್ಕಾಂ’ನಲ್ಲಿ 935 ಜೂನಿಯರ್ ಪವರ್ಮ್ಯಾನ್ ನೇಮಕಾತಿ: ಅರ್ಜಿಗೆ ಕೊನೆ 2 ದಿನ ಬಾಕಿ, ಇಲ್ಲಿದೆ ಸಂಪೂರ್ಣ ಮಾಹಿತಿ…


