ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋದಲ್ಲಿದ್ದ ಮಹಿಳೆಯನ್ನು ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಮಾಜಿ ಸಚಿವ ಎಚ್ಡಿ ರೇವಣ್ಣ (ಅವರು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಇದರ ನಡುವೆಯೇ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಮತ್ತೆ ದೂರು ನೀಡಲು ಮೂವರು ಸಂತ್ರಸ್ತೆಯರು ಎಸ್ಐಟಿಯನ್ನು ಸಂಪರ್ಕಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎಸ್ಐಟಿ ಅಧಿಕಾರಿಗಳು ಸದ್ಯ ಮೂವರು ಮಹಿಳೆಯರ ಪೂರ್ವಾಪರಿ ಪರಿಶೀಲನೆ ನಡೆಸುತ್ತಿದ್ದಾರೆ. ನಿಜಕ್ಕೂ ಸಂತ್ರಸ್ತೆಯರ ಅಥವಾ ಸುಳ್ಳು ದೂರು ನೀಡಲು ಬಂದಿದ್ದಾರಾ, ಜೊತೆಗೆ ಆರೋಪಕ್ಕೆ ಪೂರಕವಾದ ಸಾಕ್ಷಿಗಳು ಏನಾದರೂ ಇದೆಯಾ ಎಂಬ ಬಗ್ಗೆಯೂ ಅಧಿಕಾರಿಗಳು ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿದ್ದಾರಂತೆ. ಒಂದು ವೇಳೆ ಎಸ್ ಐ ಟಿ ಪರಿಶೀಲನೆ ವೇಳೆ ಸತ್ಯಾಂಶ ಕಂಡು ಬಂದಲ್ಲಿ ಮತ್ತೆ ಮೂವರು ಪ್ರತ್ಯೇಕ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ದೂರು ದಾಖಲಿಸಿ ಮತ್ತೆ ಎಫ್ ಐ ಆರ್ ಗಳನ್ನು ದಾಖಲಿಸುವ ಸಾಧ್ಯತೆ ಇದ್ದು, ಹೀಗಾಗಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಮತ್ತೆ ಸಂಕಷ್ಟ ಹೆಚ್ಚಾಗಲಿದೆಯಾ ಎಂಬ ಪ್ರಶ್ನೆ ಎದುರಾಗಿದೆ.
ಇನ್ನು, ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಎಚ್.ಡಿ ರೇವಣ್ಣ ಬಂಧನ ಹಿನ್ನೆಲೆಯಲ್ಲಿ ಬೆಂಗಳೂರಿನ ಬಸವನಗುಡಿಯ ರೇವಣ್ಣ ನಿವಾಸ ಖಾಲಿ ಖಾಲಿಯಾಗಿದೆ. ಭವಾನಿ ರೇವಣ್ಣ, ಸೂರಜ್ ರೇವಣ್ಣ ಅವರು ಹೊಳೆನರಸೀಪುರ ನಿವಾಸಕ್ಕೆ ತೆರಳಿದ್ದಾರೆ. ಸದ್ಯ ಮನೆಯ ಬಳಿ ಮನೆ ಕೆಲಸದವರು, ಪೊಲೀಸ್ ಸಿಬ್ಬಂದಿ ಮಾತ್ರ ಇದ್ದಾರೆ.
ಈ ನಡುವೆ ಮಾಜಿ ಸಚಿವ ರೇವಣ್ಣ ಹಠಾತ್ ಬಂಧನದಿಂದ ಹೊಳೆನರಸೀಪುರದಲ್ಲಿ ಆತಂಕ ಮಡುಗಟ್ಟಿದೆ. ತಮ್ಮ ನಾಯಕನ ಬಂಧನ ಖಂಡಿಸಿ ಇಂದು ಪ್ರತಿಭಟನೆ ನಡೆಸಲು ಜೆಡಿಎಸ್ ಸ್ಥಳೀಯ ನಾಯಕರು ಸಿದ್ಧತೆ ನಡೆಸಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಿದ್ದಾರಂತೆ.


