Greater Bengaluru News9 : ಬೆಂಗಳೂರಿನ ಖ್ಯಾತ ಬಿಲ್ಡರ್ ಹಾಗೂ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯ ಅಧ್ಯಕ್ಷ ಸಿ.ಜೆ.ರಾಯ್ ಅವರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರು ತಮ್ಮ ಕಚೇರಿಯಲ್ಲೇ ತಮ್ಮನ್ನು ತಾವೇ ಗುಂಡು ಹಾರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡಿದ್ದ ರಾಯ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಪ್ರಸ್ತುತ ಹೆಚ್ಎಸ್ಆರ್ ಲೇಔಟ್ನ ನಾರಾಯಣ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ರಾಯ್ ಅವರ ಹಿನ್ನೆಲೆ ಏನು? ಎನ್ನುವ ವಿವರ ಇಲ್ಲಿದೆ.
ರಾಯ್ ಅವರ ಪೂರ್ಣ ಹೆಸರು ಡಾ.ಚಿರಿಯಾಂಕಂಡತ್ ಜೋಸೆಫ್ ರಾಯ್ (ಸಿ.ಜೆ. ರಾಯ್). ವ್ಯವಹಾರದ ದೊರೆ ಎಂದೇ ಕರೆಸಿಕೊಂಡಿದ್ದ ಅವರು ರಿಯಲ್ ಎಸ್ಟೇಟ್ ಜಗತ್ತಿನಲ್ಲಿ ತನ್ನದೇ ಹೆಸರು ಮಾಡಿದ್ದರು. ಇನ್ನು ಕುಟುಂಬದ ವಿಚಾರಕ್ಕೆ ಬಂದರೆ ರಾಯ್ ಅವರ ಪತ್ನಿ ಲಿನಿ ರಾಯ್ ಮತ್ತು ಇಬ್ಬರು ಮಕ್ಕಳಾದ ರೋಹಿತ್ ಮತ್ತು ರಿಯಾ ಇದ್ದಾರೆ. ಕೇರಳದ ಕೊಚ್ಚಿ ಮೂಲದ ರಾಯ್ ಅವರು ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪ್ರಸಿದ್ಧ ಉದ್ಯಮಿಯಾಗಿದ್ದು, ಅವರು ಸ್ಥಾಪಿಸಿದ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯನ್ನು ದೇಶದ ಹಲವು ನಗರಗಳಲ್ಲಿ ವಿಸ್ತರಿಸಿ, ಅನೇಕ ಮಹತ್ವದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದರು.
ಉದ್ಯಮ ವಲಯದಲ್ಲಿ ಅವರು ಗೌರವಾನ್ವಿತ ವ್ಯಕ್ತಿಯಾಗಿದ್ದರು. ರಾಯ್ ಅವರು 2005ರಲ್ಲಿ ಸ್ಥಾಪನೆಯಾದ ಕಾನ್ಫಿಡೆಂಟ್ ಗ್ರೂಪ್ನ ಸ್ಥಾಪಕ ಮತ್ತು ಅಧ್ಯಕ್ಷರು. ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಸಂಸ್ಥೆಯು ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಹೊಂದಿದೆ. ರಿಯಲ್ ಎಸ್ಟೇಟ್ ಮಾತ್ರವಲ್ಲದೆ, ಆತಿಥ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿಯೂ ಸಂಸ್ಥೆ ತನ್ನ ಚಟುವಟಿಕೆಗಳನ್ನು ವಿಸ್ತರಿಸಿದೆ.
ಸಿ.ಜೆ.ರಾಯ್ ಅವರು ಸ್ವಿಟ್ಜರ್ಲ್ಯಾಂಡ್ನ ಜ್ಯೂರಿಕ್ನ ಎಸ್ಬಿಎಸ್ ಬಿಸಿನೆಸ್ ಸ್ಕೂಲ್ನಿಂದ ವ್ಯವಹಾರ ಆಡಳಿತದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು. ಅವರ ನಾಯಕತ್ವದಲ್ಲಿ ಕಾನ್ಫಿಡೆಂಟ್ ಗ್ರೂಪ್, ನಿರ್ಮಾಣ ಗುಣಮಟ್ಟ ಮತ್ತು ಸಮಯಕ್ಕೆ ಸರಿಯಾಗಿ ಯೋಜನೆ ಪೂರ್ಣಗೊಳಿಸುವಿಕೆಗಾಗಿ ಹೆಸರುವಾಸಿಯಾಗಿದೆ. ಈ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆ ಬೆಂಗಳೂರು, ಕೊಚ್ಚಿ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಯೋಜನೆಗಳನ್ನು ಕೈಗೊಂಡಿದೆ.
“ನಾವು ನೀಡುವ ಭರವಸೆಯನ್ನು ನಿಷ್ಠೆಯಿಂದ ಅನುಷ್ಠಾನಗೊಳಿಸುವುದೇ ನಮ್ಮ ಮೂಲ ತತ್ವ” ಎಂದು ಸಿ.ಜೆ. ರಾಯ್ ಅವರು ಸಂಸ್ಥೆಯ ವೆಬ್ಸೈಟ್ನಲ್ಲಿ ತಮ್ಮ ಸಂದೇಶ ತಿಳಿಸಿದ್ದರು. ಇನ್ನು ರಾಯ್ ಅವರಿಗೆ ಐಷಾರಾಮಿ ಕಾರುಗಳ ಕ್ರೇಜ್ ಕೂಡ ಹೆಚ್ಚಾಗಿತ್ತು. ರೋಲ್ಸ್ ರಾಯ್ಸ್ ಸೇರಿ ಹಲವು ದುಬಾರಿ ಕಾರುಗಳ ಮಾಲೀಕರೂ ಆಗಿದ್ದರು.
ಆತ್ಯಹತ್ಯೆಗೆ ಕಾರಣವೇನು?
ವರದಿಗಳ ಪ್ರಕಾರ ರಾಯ್ ಅವರ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಯುತ್ತಿದ್ದ ಸಂದರ್ಭದಲ್ಲೇ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ವೇಳೆ ಅವರು ಗುಂಡು ಹಾರಿಸಿಕೊಂಡ ಪರಿಣಾಮವಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಉದ್ಯಮ ವಲಯದಲ್ಲಿ ತೀವ್ರ ಆಘಾತ ಮೂಡಿಸಿದ್ದು, ರಾಯ್ ಅವರ ಅಕಾಲಿಕ ನಿಧನಕ್ಕೆ ಹಲವು ಗಣ್ಯರು ಮತ್ತು ಉದ್ಯಮಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ತನಿಖೆಯ ಮೂಲಕ ಇನ್ನಷ್ಟು ವಿವರಗಳು ಹೊರಬೀಳುವ ನಿರೀಕ್ಷೆಯಿದೆ.
ಕಳೆದ ಡಿಸೆಂಬರ್ನಲ್ಲಿಯೂ ಕಾನ್ಫಿಡೆಂಟ್ ಗ್ರೂಪ್ ವಿರುದ್ಧ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯ ನಡೆಸಿತ್ತು. ಶುಕ್ರವಾರ ಮತ್ತೆ ಐಟಿ ಅಧಿಕಾರಿಗಳು ಕಚೇರಿಯಲ್ಲಿ ಶೋಧ ನಡೆಸುತ್ತಿದ್ದ ವೇಳೆ, ಸಿ.ಜೆ.ರಾಯ್ ತಮ್ಮ ಚೇಂಬರ್ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಐಟಿ ಅಧಿಕಾರಿಗಳು ಕಚೇರಿಯಲ್ಲಿ ರಾಯ್ ಅವರನ್ನು ವಿಚಾರಣೆ ನಡೆಸುತ್ತಿದ್ದಾಗ ತಮ್ಮ ಕೊಠಡಿಗೆ ತೆರಳಿ ಗುಂಡು ಹಾರಿಸಿಕೊಂಡಿದ್ದಾರೆ. ಆ ವೇಳೆ ಅಧಿಕಾರಿಗಳು ಕಟ್ಟಡದಲ್ಲೇ ಇದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.


