BBMP
Loading ...

Maheshwarrao

Greater Bengaluru News9 : ಸಿಲಿಕಾನ್ ಸಿಟಿ ಬೆಂಗಳೂರಿನ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸುವ ಒತ್ತುವರಿದಾರರ ವಿರುದ್ಧ ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಯುದ್ಧ ಸಾರಿದೆ. ಹಳೆ ಮದ್ರಾಸ್ ರಸ್ತೆಯಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ತಕ್ಷಣವೇ ದಂಡ ವಿಧಿಸಿ, ತೆರವು ಕಾರ್ಯಾಚರಣೆ ನಡೆಸುವಂತೆ ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಶನಿವಾರ ಅಧಿಕಾರಿಗಳ ತಂಡದೊಂದಿಗೆ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಹಲಸೂರು ಕೆರೆವರೆಗೆ ಕಾಲ್ನಡಿಗೆಯಲ್ಲೇ ಸಂಚರಿಸಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದ ಆಯುಕ್ತರು, ಪಾದಚಾರಿಗಳ ಹಿತದೃಷ್ಟಿಯಿಂದ ಹಲವು ಮಹತ್ವದ ಸೂಚನೆಗಳನ್ನು ನೀಡಿದರು.

ಒತ್ತುವರಿದಾರರಿಗೆ ದಂಡದ ಬಿಸಿ:
ಪರಿಶೀಲನೆ ವೇಳೆ ಹಳೆ ಮದ್ರಾಸ್ ರಸ್ತೆಯ ಆಂಜನೇಯ ದೇವಸ್ಥಾನದ ಬಳಿ ಪಾದಚಾರಿ ಮಾರ್ಗದಲ್ಲಿ ನರ್ಸರಿಗಳು ಹಾಗೂ ಗ್ರಾನೈಟ್ ಮಳಿಗೆಗಳನ್ನು ಇಟ್ಟಿರುವುದು ಮತ್ತು ಮರ್ಪಿ ರಸ್ತೆಯಲ್ಲಿ ಫುಟ್‌ಪಾತ್ ಸಂಪೂರ್ಣವಾಗಿ ಒತ್ತುವರಿಯಾಗಿರುವುದನ್ನು ಕಂಡು ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಒತ್ತುವರಿಗಳನ್ನು ಕೂಡಲೇ ತೆರವುಗೊಳಿಸಿ, ಸಂಬಂಧಪಟ್ಟವರಿಗೆ ದಂಡ ವಿಧಿಸಲು ನಿರ್ದೇಶನ ನೀಡಿದರು. ಅಲ್ಲದೆ, ಪಾದಚಾರಿ ಮಾರ್ಗದಲ್ಲಿ ವಾಹನ ಪಾರ್ಕಿಂಗ್ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲು ತಿಳಿಸಿದರು.

ಸ್ವಚ್ಛತೆ ಮತ್ತು ದುರಸ್ತಿಗೆ ಆದ್ಯತೆ:
‘ಪಾದಚಾರಿ ಮಾರ್ಗಗಳಲ್ಲಿ ವಿಶೇಷ ತಂಡಗಳನ್ನು ನಿಯೋಜಿಸಿ ಸಾಮೂಹಿಕ ಸ್ವಚ್ಛತಾ ಕಾರ್ಯ (Mass Cleaning Drive) ಕೈಗೊಳ್ಳಬೇಕು. ಧೂಳು ಮತ್ತು ಕಸವನ್ನು ಸಂಪೂರ್ಣವಾಗಿ ತೆಗೆದು ಹಾಕಿ ಮಾರ್ಗಗಳು ಸುಂದರವಾಗಿ ಕಾಣುವಂತೆ ಮಾಡಬೇಕು’ ಎಂದು ಮಹೇಶ್ವರ್ ರಾವ್ ತಿಳಿಸಿದರು. ಪಾದಚಾರಿ ಮಾರ್ಗಗಳಲ್ಲಿ ಹಾನಿಗೊಳಗಾಗಿರುವ ಸ್ಲ್ಯಾಬ್‌ಗಳು ಮತ್ತು ಕರ್ಬ್ ಸ್ಟೋನ್‌ಗಳನ್ನು ಯುದ್ಧೋಪಾದಿಯಲ್ಲಿ ದುರಸ್ತಿಗೊಳಿಸಿ ಪಾದಚಾರಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಇಂಜಿನಿಯರ್‌ಗಳಿಗೆ ಸೂಚಿಸಿದರು.

ಇತರೆ ಪ್ರಮುಖ ನಿರ್ದೇಶನಗಳು:
ಪರಿಶೀಲನೆ ವೇಳೆ ಮಹೇಶ್ವರ್ ರಾವ್ ಅವರು ಈ ಕೆಳಗಿನ ಪ್ರಮುಖ ಸೂಚನೆಗಳನ್ನು ನೀಡಿದರು:

ಅಪಾಯಕಾರಿ ತಂತಿಗಳ ತೆರವು: ಎಂಇಜಿ ತಡೆಗೋಡೆ ಬಳಿ ಪಾದಚಾರಿಗಳಿಗೆ ತಾಗುವಂತಿರುವ ಕಬ್ಬಿಣದ ತಂತಿಗಳನ್ನು ಕೂಡಲೇ ಸರಿಪಡಿಸಬೇಕು.


ಸೌಂದರ್ಯೀಕರಣ: ಪಾದಚಾರಿ ಮಾರ್ಗಗಳಲ್ಲಿ ಬಿದಿರು ಸಸಿಗಳನ್ನು ನೆಟ್ಟು ಪೋಷಿಸಬೇಕು.


ತಾಂತ್ರಿಕ ಸುಧಾರಣೆ: ಸ್ವಚ್ಛತಾ ಕಾರ್ಯಗಳಿಗೆ ಟ್ರಾಕ್ಟರ್‌ಗಳ ಬದಲಿಗೆ ಟಿಪ್ಪರ್‌ಗಳನ್ನು ಬಳಸಬೇಕು.
ಒತ್ತುವರಿ ತೆರವು: 100 ಅಡಿ ರಸ್ತೆ ಜಂಕ್ಷನ್‌ನಲ್ಲಿ ಮೆಟ್ರೋ ಜಾಗದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಬಿಎಂಆರ್‌ಸಿಎಲ್ ಅಧಿಕಾರಿಗಳು ತೆರವುಗೊಳಿಸಬೇಕು.


ರಸ್ತೆ ದುರಸ್ತಿ: ಜಲಮಂಡಳಿಯ ವಾಲ್ವ್ ಸೋರಿಕೆಯಿಂದ ರಸ್ತೆ ಕುಸಿತವಾಗಿರುವ ಜಾಗಗಳನ್ನು ಕೂಡಲೇ ಸರಿಪಡಿಸಬೇಕು.
ಈ ಸಂದರ್ಭದಲ್ಲಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಕೆ. ರಂಗನಾಥ್, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಪಾದಚಾರಿಗಳ ಹಕ್ಕನ್ನು ಮರುಸ್ಥಾಪಿಸಲು ಜಿಬಿಎ ಕೈಗೊಂಡಿರುವ ಈ ಕ್ರಮವು ಸಾರ್ವಜನಿಕರಲ್ಲಿ ಆಶಾಭಾವನೆ ಮೂಡಿಸಿದೆ.

Leave a Reply

Your email address will not be published. Required fields are marked *