Greater Bengaluru News9: ಹೊಸ ವರ್ಷ ಸ್ವಾಗತಕ್ಕೆ ದೇಶಾದ್ಯಂತ ಭರದ ಸಿದ್ದತೆಗಳು ಪ್ರಾರಂಭವಾಗಿವೆ. ಈ ನಡುವೆ ಮೊಬೈಲ್ ಗಳಿಗೆ ಶುಭಾಶಯ ಸಂದೇಶಗಳನ್ನು ಕಳುಹಿಸಲು ವಂಚಕರು ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಎಚ್ಚರಿಕೆ ವಹಿಸುವಂತೆ ತೆಲಂಗಾಣ ಪೊಲೀಸರು ತಿಳಿಸಿದ್ದಾರೆ. ಹೊಸ ವರ್ಷಾಚರಣೆಗೆ ಮೊದಲೇ ‘ಶುಭಾಶಯ ವಂಚನೆ’ಗಳ ಬಗ್ಗೆ ಎಚ್ಚರಿಕೆ ನೀಡಿರುವ ತೆಲಂಗಾಣ ಪೊಲೀಸರು ವಿಶೇಷವಾಗಿ ಬಳಕೆದಾರರು “ವಿಶೇಷ ವೈಯಕ್ತಿಕ ಶುಭಾಶಯ”, “ಹೊಸ ವರ್ಷದ ಉಡುಗೊರೆ” ಅಥವಾ “ಎಸ್ ಬಿಐ ವರ್ಷಾಂತ್ಯದ ಬಹುಮಾನ” ಮೊದಲಾದ ಲಿಂಕ್ ತೆರೆಯುವ ಮುನ್ನ ಎಚ್ಚರ ಎಂದು ಹೇಳಿದ್ದಾರೆ.
ಈ ಕುರಿತು ಎಚ್ಚರಿಕೆ ಮಾಹಿತಿ ನೀಡಿರುವ ತೆಲಂಗಾಣ ಸೈಬರ್ ಸೆಕ್ಯುರಿಟಿ ಬ್ಯೂರೋ, ಸಾಮಾನ್ಯವಾಗಿ ಈಗ ಶುಭಾಶಯಗಳನ್ನು ಎಮೋಜಿ ಅಥವಾ ಜಿಫ್ ಮೂಲಕ ಕಳುಹಿಸಲಾಗುತ್ತದೆ. ಆದರೆ ಹೃದಯಸ್ಪರ್ಶಿ ಶುಭಾಶಯ ವಂಚನೆಯ ಉದ್ದೇಶವನ್ನು ಹೊಂದಿರಬಹುದು ಎಂದು ತಿಳಿಸಿದೆ.
ವಾಟ್ಸ್ ಆಪ್, ಟೆಲಿಗ್ರಾಮ್ ಮೂಲಕ ಕಳುಹಿಸಲಾಗುವ ಶುಭಾಶಯ ಸಂದೇಶಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ಇದು ಅಪಾಯಕಾರಿಯಾಗಿರುತ್ತದೆ. ಇಂತಹ ವಂಚನೆಯ ಸಂದೇಶವನ್ನು ಸುಲಭವಾಗಿ ಗುರುತಿಸಬಹುದು ಎಂದು ತೆಲಂಗಾಣ ಸೈಬರ್ ಸೆಕ್ಯುರಿಟಿ ಬ್ಯೂರೋ ತಿಳಿಸಿದೆ.
ಶುಭಾಶಯ ವಂಚನೆಯ ಸಂದೇಶಗಳಿಂದ ಈಗಾಗಲೇ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಳಕೆದಾರರು ಇದನ್ನು ಕ್ಲಿಕ್ ಮಾಡಿದ ತಕ್ಷಣ ವಂಚನೆಯ ಜಲದೊಳಗೆ ಸಿಲುಕಿಕೊಳ್ಳುತ್ತಾರೆ. ಇದು ಮುಖ್ಯವಾಗಿ APK ಅಥವಾ Android ಪ್ಯಾಕೇಜ್ ಕಿಟ್ ಫೈಲ್ ಅನ್ನು ಹೊಂದಿರುತ್ತದೆ. ಇದನ್ನು ತೆರೆದ ತಕ್ಷಣ ವಂಚಕರು ಫೋನ್ ನಲ್ಲಿರುವ ಎಲ್ಲ ಮಾಹಿತಿಯನ್ನು ಕೇವಲ ಕದಿಯುವುದಿಲ್ಲ ಬದಲಾಗಿ ಸಂಪೂರ್ಣ ಮೊಬೈಲ್ ಅನ್ನೇ ಹ್ಯಾಕ್ ಮಾಡುತ್ತಾರೆ. ಇದರಿಂದ ಗ್ರಾಹಕರ ಎಲ್ಲ ಫೈಲ್ ಗಳು ಸುಲಭವಾಗಿ ಹ್ಯಾಕರ್ ಕೈಗೆ ಸಿಗುತ್ತದೆ. ಇದು ಕೇವಲ ಒಬ್ಬರ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಮೊಬೈಲ್ ನಲ್ಲಿರುವ ಇತರರ ಸಂಪರ್ಕ ಸಂಖ್ಯೆ, ಇಮೇಲ್ ವಿಳಾಸಗಳು ಕೂಡ ವಂಚಕರ ಪಾಲಾಗುತ್ತದೆ. ಇದು ಸಾಮಾನ್ಯ ಜನರ ಹೆಸರಿನಲ್ಲಿ ಸುಲಿಗೆ, ಕಳ್ಳತನಕ್ಕೆ ದಾರಿ ಮಾಡಿಕೊಡುತ್ತದೆ.
ಸಾಮಾನ್ಯವಾಗಿ ಜನರು ಶುಭಾಶಯ ಸಂದೇಶವನ್ನು ತೆರೆಯುತ್ತಿದ್ದಾರೆ ಎಂದು ನಂಬಿರುತ್ತಾರೆ. ವಾಸ್ತವದಲ್ಲಿ ಇದು ತಮ್ಮ ಬ್ಯಾಂಕ್ ಖಾತೆಯ ಕೀಲಿಗಳನ್ನು ವಂಚಕರ ಕೈಗೆ ಹಸ್ತಾಂತರಿಸಿದಂತೆ ಎಂದು ಬ್ಯೂರೋ ಮುಖ್ಯಸ್ಥೆ ಶಿಖಾ ಗೋಯೆಲ್ ತಿಳಿಸಿದ್ದಾರೆ.
ಹೊಸ ವರ್ಷಾಚರಣೆಯ ಸಂಭ್ರಮದಲ್ಲಿರುವವರು ಯಾವುದೇ ರೀತಿಯ ವಂಚನೆಗೆ ಒಳಗಾಗದಂತೆ ಖಚಿತಪಡಿಸಿಕೊಳ್ಳಲು ತಮ್ಮ ಮೊಬೈಲ್ ಸಾಧನಗಳನ್ನು ಸುರಕ್ಷಿತವಾಗಿರಿಸುವಂತೆ ತೆಲಂಗಾಣ ಸೈಬರ್ ಸೆಕ್ಯುರಿಟಿ ಬ್ಯೂರೋ ಕೆಲವು ಸಲಹೆಗಳನ್ನು ನೀಡಿದೆ.
ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ
ಶುಭಾಶಯಗಳು, ಉಡುಗೊರೆಗಳು ಅಥವಾ ಕೊಡುಗೆಗಳ ಕುರಿತಾದ ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ.
ಎಪಿಕೆ ಫೈಲ್ ನಿರ್ಬಂಧಿಸಿ
ಖಾಸಗಿಯಾಗಿ ಬರುವ ಎಪಿಕೆ ಫೈಲ್ ಅನ್ನು ನಿರ್ಬಂಧಿಸಿ. ಇವುಗಳನ್ನು ತೆರೆಯದೇ ಇರುವುದು ಒಳ್ಳೆಯದು.
ಎರಡು ಹಂತದ ಪರಿಶೀಲನೆ
ಮೊಬೈಲ್ ಹ್ಯಾಕ್ ಆಗುವುದನ್ನು ತಡೆಯಲು ವಾಟ್ಸ್ ಆಪ್ ನಲ್ಲಿ ಎರಡು-ಹಂತದ ಪರಿಶೀಲನೆಯನ್ನು ತೆರೆಯಿರಿ.
ಆಪ್ ಅಪ್ಡೇಟ್ ಮಾಡಿ
ಯಾವುದೇ ಆಪ್ ಅಪ್ಡೇಟ್ ಮಾಡುವಾಗ ಅಧಿಕೃತವಾದ Google Play ಸ್ಟೋರ್ ಅಥವಾ apple ಅಪ್ಲಿಕೇಶನ್ ಸ್ಟೋರ್ನಿಂದ ಮಾತ್ರ ಪಡೆದುಕೊಳ್ಳಿ.
ಸಂಪರ್ಕ ಕಡಿತಗೊಳಿಸಿ
ಅನುಮಾನಾಸ್ಪದ ಯಾವುದೇ ಲಿಂಕ್ ಕ್ಲಿಕ್ ಮಾಡಿದರೆ ಕೂಡಲೇ ಅಪ್ಲಿಕೇಶನ್ ಡಿಲೀಟ್ ಮಾಡಿ. ಬ್ಯಾಂಕ್ಗೆ ಮಾಹಿತಿ ನೀಡಿ. ಸೈಬರ್ ಅಪರಾಧದ ಕುರಿತು ದೂರು ಸಲ್ಲಿಸಿ.
ವಂಚನೆಗೆ ಒಳಗಾದ ತಕ್ಷಣ ಗಂಟೆಯೊಳಗೆ ವರದಿ ಮಾಡುವುದು ಒಳ್ಳೆಯದು. ಇದರಿಂದ ಹೆಚ್ಚಿನ ಹಾನಿಯನ್ನು ತಡೆಯಬಹುದಾಗಿದೆ. ಸೈಬರ್ ವಂಚನೆಗೆ ಒಳಗಾದರೆ 1930 ಅನ್ನು ತಕ್ಷಣ ಡಯಲ್ ಮಾಡಿ ಮತ್ತು www.cybercrime.gov.in ನಲ್ಲಿ ದೂರು ದಾಖಲಿಸಿ.


