Greater Bengaluru News9 : ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾನವೀಯತೆ ಮೆರೆದಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಕುಮಾರಸ್ವಾಮಿ ಹಾಸನಕ್ಕೆ ತೆರಳುವಾಗ ಈ ಘಟನೆ ನಡೆದಿದೆ.
ಬೆಂಗಳೂರು-ಹಾಸನ ಹೆದ್ದಾರಿಯಲ್ಲಿ ಆಟೋ ಮತ್ತು ಕಾರು ನಡುವೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಸಚಿವರು ಮಾನವೀಯತೆ ಮೆರೆದಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ ವಿಕ್ರಂ ಎಂಬ ವ್ಯಕ್ತಿಯನ್ನು ಅರ್ಧ ಗಂಟೆಯಿಂದ ಯಾರು ಗಮನಿಸದೆ ರಸ್ತೆಯಲ್ಲಿಯೇ ಇದ್ದಿದ್ದನ್ನ ನೋಡಿ ಪೊಲೀಸ್ ವಾಹನದಲ್ಲಿ ಆದಿಚುಂಚನಗಿರಿ ಆಸ್ಪತ್ರೆಗೆ ಕಳುಹಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಅಲ್ಲಿನ ವೈದ್ಯರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.
ಹೌದು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿಕ್ರಮ್ ನರಳಾಡುತ್ತಿದ್ದರು.ಇದೇ ಮಾರ್ಗವಾಗಿ ತೆರಳುತ್ತಿದ್ದ ಕೇಂದ್ರ ಸಚಿವರು ತಮ್ಮ ಕಾರನ್ನ ನಿಲ್ಲಿಸಿ ಹೆದ್ದಾರಿ ಗಸ್ತು ಅವರಿಗೆ ದೂರವಾಣಿ ಕರೆಮಾಡಿ, ಅವರನ್ನ ಆದಿಚುಂಚನಗಿರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ಜೊತೆಗೆ ಖುದ್ದು ಸಚಿವರೇ ವೈದ್ಯರಿಗೆ ಕರೆಮಾಡಿ ಸ್ಪಂದಿಸುವಂತೆ ತಿಳಿಸಿದರು. ಸಚಿವರ ಮಾನವೀಯತೆ ಕಾರ್ಯಕ್ಕೆ ಗಾಯಾಳು ಧನ್ಯವಾದ ಅರ್ಪಿಸಿದರು.


