ಬೆಂಗಳೂರು: ಸಾಲ ಮಾಡ್ಕೊಂಡಾದರೂ ತುಪ್ಪ ತಿನ್ನು ಅನ್ನೋ ಮಾತು ಬಿಬಿಎಂಪಿಗೆಂದೇ ಹುಟ್ಟಿಕೊಂಡಂತಿದೆ. ಅದಾಯ ತೆರಿಗೆ ಸಂಗ್ರಹ ಮಾಡಿ ಅಭಿವೃದ್ಧಿ ಮಾಡಿ ಅಂದ್ರೆ ಸಾಲ ಮಾಡಿ ಅಭಿವೃದ್ಧಿ ಮಾಡೋಕೆ ಪಾಲಿಕೆ ಹೊರಟಿದೆ. ಪಾಲಿಕೆ ಜೊತೆಗೆ ಈ ಬಾರಿ ಜಲ ಮಂಡಳಿಯೂ ಸಾಲಕ್ಕೆ ಕೈ ಚಾಚಿದ್ದು, ಅಭಿವೃದ್ಧಿ ನೆಪ ಕೊಟ್ಟಿದೆ. ಅಷ್ಟಕ್ಕೂ ಪಾಲಿಕೆಗೆ ಸಾಲ ಕೊಡ್ತಿರೋದು ಯಾರು? ಎಷ್ಟು ಸಾಲ ಕೊಡಲಾಗ್ತಿದೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಹೊಸ ಸರ್ಕಾರ ಬಂದ ಮೇಲೆ ನಿರೀಕ್ಷಿತ ಮಟ್ಟದಲ್ಲಿ ಬಿಬಿಎಂಪಿ ಹಾಗೂ ಬೆಂಗಳೂರಿನ ಇತರೆ ಸರ್ಕಾರಿ ಅಧೀನದ ಸಂಸ್ಥೆಗಳಿಗೆ ಅನುದಾನ ಬಿಡುಗಡೆಯಾಗ್ತಿಲ್ಲ ಅನ್ನೋದು ಹಳೆಯ ವಿಚಾರ. ಅದರೂ ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿ ಸಮಪರ್ಕವಾಗಿ ಆದಾಯ ಸಂಗ್ರಹ ಮಾಡೋದಕ್ಕೆ ಪ್ರತಿ ವರ್ಷವೂ ಎಡವುತ್ತಿದೆ. ಇದರ ಜೊತೆಗೆ ಜಲಮಂಡಳಿ ಕೂಡ ಈ ಬಾರಿ ಆರ್ಥಿಕವಾಗಿ ಹೊಡೆ ಎದುರಿಸುತ್ತಿದೆ.
ಜನರು ಸಮಪರ್ಕವಾಗಿ ನೀರಿನ ಬಿಲ್ ಕಟ್ಟುತ್ತಿಲ್ಲ ಹಾಗೂ ಕಾವೇರಿ ಐದನೇ ಹಂತದ ಕಾಮಗಾರಿ ವಿಳಂಬವಾಗುತ್ತಿದೆ. ಹೀಗಾಗಿ ಕಾಮಗಾರಿ ವೆಚ್ಚವೂ ದುಪ್ಪಟ್ಟಾಗುತ್ತಿದೆ. ಇದರ ಜೊತೆಗೆ ಈ ಬಾರಿ ಬರವೂ ಬೆಂಗಳೂರು ಎದುರಿಸಿದ್ದ ಕಾರಣಕ್ಕೆ ಆರ್ಥಿಕವಾಗಿ ಜಲಮಂಡಲಿಯೂ ಹಿಂದೆ ಬಿದ್ದಿದೆ. ಹೀಗಾಗಿ ವಿಶ್ವ ಬ್ಯಾಂಕ್ ಮುಂದೆ ಬಿಬಿಎಂಪಿ 2 ಸಾವಿರ ಕೋಟಿ ಹಾಗೂ ಜಲಮಂಡಳಿ 1 ಸಾವಿರ ಕೋಟಿ ಸಾಲಕ್ಕೆ ಕೈಚಾಚಿದೆ.
ವಾಸ್ತವದಲ್ಲಿ ಬಿಬಿಎಂಪಿ ಮನಸ್ಸು ಮಾಡಿದರೆ ಪ್ರತಿ ವರ್ಷ 8 ಸಾವಿರಕ್ಕೂ ಅಧಿಕ ಆದಾಯ ಸಂಗ್ರಹಣೆ ಮಾಡಬಹುದು. ಆದರೆ ಈಗ ಆಗುತ್ತಿರುವುದು ಸುಮಾರು 4 ಸಾವಿರ ಕೋಟಿಯಷ್ಟೇ. ಎಂದರೆ ಅರ್ಧಕ್ಕರ್ಧ ಆದಾಯ ಸಂಗ್ರಹಿಸುವಲ್ಲಿ ಪಾಲಿಕೆ ಎಡವುತ್ತಲೇ ಇದೆ. ಇದರ ಜತೆಗೆ ವರ್ಷದಿಂದ ವರ್ಷಕ್ಕೆ ಬಿಬಿಎಂಪಿ ಖರ್ಚು ವೆಚ್ಚಗಳು ಏರಿಕೆಯಾಗುತ್ತಿದೆ. ಸರ್ಕಾರದ ಬಜೆಟ್ ನಲ್ಲೂ ಪಾಲಿಕೆಗೆ ನಿರೀಕ್ಷಿತ ಮಟ್ಟದಲ್ಲಿ ಅನುದಾನವೂ ಲಭ್ಯವಾಗುತ್ತಿಲ್ಲ. ಹೀಗಾಗಿ ಆರ್ಥಿಕ ಸಂಕಷ್ಟದಲ್ಲಿದೆ ಪಾಲಿಕೆ. ಹೀಗಾಗಿ 2 ಸಾವಿರ ಕೋಟಿ ಸಾಲಕ್ಕೆ ವಿಶ್ವಬ್ಯಾಂಕ್ ಮುಂದೆ ಬಿಬಿಎಂಪಿ ಕೈ ಚಾಚಿದೆ. ಸಾಲ ನೀಡಲು ವಿಶ್ವ ಬ್ಯಾಂಕ್ ಪಾಲಿಕೆಗೆ ಅಡಮಾನಕ್ಕಾಗಿ ತನ್ನ ಒಡೆತನದ ಕೆಲವು ಸ್ವತ್ತುಗಳ ದಾಖಲೆಯನ್ನೂ ಕೇಳಿದೆ. ಶೀಘ್ರವೇ ಪಾಲಿಕೆ ಸಾಲಕ್ಕಾಗಿ ಅದನ್ನೂ ಸಲ್ಲಿಕೆ ಮಾಡಲಿದೆ. ಆದರೆ ಬಿಬಿಎಂಪಿಯ ಈ ದಯನೀಯ ಸ್ಥಿತಿಗೆ ಬಂದಿರೋದು ಪಾಲಿಕೆಯ ಅಧಿಕಾರಿಗಳ ಲಂಚಬಾಕತನದಿಂದ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.
2014ರ ಸುಮಾರಿಗೆ ಇದೇ ರೀತಿ ಬಿಬಿಎಂಪಿ ನಗರದ ಕೆಆರ್ ಮಾರ್ಕೆಟ್ ಹಾಗೂ ಟೌನ್ ಹಾಲ್ ಅನ್ನು ಲಂಡನ್ ನ ಪ್ರತಿಷ್ಟಿತ ಬ್ಯಾಂಕ್ ಗಳಲ್ಲಿ ಅಡಮಾನ ಇಟ್ಟು ಸುಮಾರು 2,500 ಕೋಟಿ ಸಾಲ ಪಡೆದುಕೊಂಡಿತ್ತು. ಆದರೆ ಬೆಂಗಳೂರು ಮುನ್ಸಿಪಲ್ ಅಧ್ಯಕ್ಷರಾಗಿದ್ದ ಪುಟ್ಟಣ್ಣ ಚೆಟ್ಟಿ ಹೆಸರಲ್ಲಿ ಇರುವ ಕಾರಣಕ್ಕಾಗಿ ಅದನ್ನೂ ಅಡಮಾನ ಇಟ್ಟು ಸಾಲ ಪಡೆದುಕೊಂಡ ಮುಜುಗರಿಂದ ಪಾಲಿಕೆ ಇತ್ತೀಚೆಗಷ್ಟೇ ಟೌನ್ ಹಾಲ್ ಮೇಲಿನ ಸಾಲ ತೀರಿಸಿಕೊಂಡು, ಟೌನ್ ಹಾಲ್ ಅನ್ನು ಬಿಡಿಸಿಕೊಂಡಿತ್ತು.
ದುರಾದೃಷ್ಟರ ಸಂಗತಿ ಏನೆಂದರೆ ನಗರದ ಅತಿ ದೊಡ್ಡ ಮಾರುಕಟ್ಟೆಯಾಗರುವ ಮಹರಾಜರ ಹೆಸರಲ್ಲಿರುವ ಕೆಆರ್ ಮಾರುಕಟ್ಟೆ ಇನ್ನೂ ಲಂಡನ್ ನ ಬ್ಯಾಂಕ್ ವೊಂದರಲ್ಲಿ ಅಡವಾಗಿ ಕೂತಿದೆ. ಇದರ ನಡುವೆ ಇದೀಗ ಹೊಸ ಸಾಲ ಪಡೆಯಲು ಮುಂದಾಗಿರುವ ಬಿಬಿಎಂಪಿ ಇದೀಗ ಯಾವ ಸ್ವತ್ತನ್ನು ಅಡವಿಟ್ಟು ಸಾಲ ಪಡೆಯಲಿದ್ದಾರೆ ಅನ್ನೋದನ್ನು ಕಾದು ನೋಡಬೇಕಿದೆ.


