ಬೆಂಗಳೂರು : ಒಂದೇ ಕಾಮಗಾರಿಗೆ ಇಬ್ಬರು ಗುತ್ತಿಗೆದಾರರಿಗೆ ಬಿಲ್ ಪಾವತಿ. ರಸ್ತೆ ಬದಿ ಚರಂಡಿಯ ಹೂಳು ತೆರವಿನಲ್ಲೂಗೋಲ್ಮಾಲ್. ಟೆಂಡರ್ ಮೊತ್ತಕ್ಕಿಂತ ಹೆಚ್ಚು ಹಣ ಪಾವತಿಸಿ ದೋಖಾ. ಹಳೇ ಕಲ್ಲು, ಹೊಸ ಬಿಲ್!
ರಸ್ತೆಗಳ ಅಭಿವೃದ್ಧಿ, ಡಾಂಬರೀಕರಣ, ಚರಂಡಿ, ಫುಟ್ಪಾತ್, ರಾಜಕಾಲುವೆ, ಕಟ್ಟಡ ನಿರ್ಮಾಣ, ಹೂಳು ತೆರವು ಸೇರಿದಂತೆ ಪ್ರತಿಯೊಂದು ಕಾಮಗಾರಿಯಲ್ಲೂ ಮಹಾನಗರ ಜನರ ತೆರಿಗೆ ಹಣ ಲೂಟಿ ಹೊಡೆಯುವುದು ಮುಂದುವರಿದಿದೆ. ಚರಂಡಿ, ಫುಟ್ಪಾತ್ ನಿರ್ಮಾಣ ಕಾಮಗಾರಿಗಳಲ್ಲಿ ಗುತ್ತಿಗೆದಾರರು ಹಾಲಿ ಇರುವ ಹಳೆಯ ಚಪ್ಪಡಿ ಕಲ್ಲುಗಳನ್ನೇ ಅಳವಡಿಸಿ, ಹೊಸದಾಗಿ ಬಿಲ್ ಪಡೆದು ವಂಚಿಸಲಾಗುತ್ತಿದೆ. ಇದರಲ್ಲೆಲ್ಲಾ ಅಧಿಕಾರಿಗಳ ಶಾಮೀಲು ಇದ್ದೇ ಇದೆ.
98.10 ಕೋಟಿ ರೂ. ದುರ್ಬಳಕೆ ಶಂಕೆ: ಪಾಲಿಕೆಯ ದಕ್ಷಿಣ ವಲಯ ವ್ಯಾಪ್ತಿಯ ಕಚೇರಿಗಳ ಲೆಕ್ಕ ಪರಿಶೋಧನೆಯಲ್ಲಿ ಅನುಮಾನಾಸ್ಪದ ಮತ್ತು ದ್ವಿಪಾವತಿಯಾಗಿರುವ ಪ್ರಕರಣಗಳು ಮೇಲ್ನೋಟಕ್ಕೆ ಕಂಡು ಬಂದಿವೆ. 2021-22ನೇ ಸಾಲಿನಲ್ಲಿ ಅನುಮಾನಾಸ್ಪದ ಮತ್ತು ದ್ವಿಪಾವತಿಯಾಗಿರುವ 2348 ಪಾವತಿ ವೋಚರ್ಗಳಿಗೆ ಸಂಬಂಧಿಸಿದ ಮೂಲ ಕಡತ, ಪೂರಕ ದಾಖಲೆಗಳು ಹಾಗೂ ವೋಚರ್ಗಳನ್ನು ಲೆಕ್ಕ ತನಿಖೆಗೆ ಒದಗಿಸುವಂತೆ ಲೆಕ್ಕ ಪರಿಶೋಧಕರು ಕೋರಿದ್ದರು. ಆದರೆ, ಕೇವಲ 50 ವೋಚರ್ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಿದ್ದು, 2298 ವೋಚರ್ಗಳನ್ನು ಲೆಕ್ಕ ತನಿಖೆಗೆ ಹಾಜರುಪಡಿಸಿಲ್ಲ.
ಒಟ್ಟು 2348 ಪಾವತಿ ವೋಚರ್ಗಳು ಅನುಮಾನಾಸ್ಪದವಾಗಿದ್ದು, ಹಣ ದುರುಪಯೋಗದ ಶಂಕೆ ವ್ಯಕ್ತವಾಗಿದೆ. ಈ ಕುರಿತು ಆಡಳಿತಾತ್ಮಕ ತನಿಖೆ ನಡೆಸಬೇಕೆಂದು ಸೂಚಿಸಿ, 98.10 ಕೋಟಿ ರೂ.ಗಳಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ. ವಿಶೇಷ ಆಯುಕ್ತರು (ಹಣಕಾಸು) ಮತ್ತು ವಲಯ ಆಯುಕ್ತರು 2023ರ ಜ.12 ರಂದೇ ಮುಖ್ಯ ಲೆಕ್ಕ ಪರಿಶೋಧಕರಿಧಿಗೆ ಪತ್ರ ಬರೆದು, ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ವಿಜಯನಗರ ವಿಭಾಗದಲ್ಲಿರಸ್ತೆಗಳ ಡಾಂಬರೀಕರಣಕ್ಕೆ ಸಂಬಂಧಿಸಿದಂತೆ ಅಂದಾಜು ಪಟ್ಟಿಯಲ್ಲಿ ವಿವರಿಸಿರುವ ರಸ್ತೆಗಳಿಗೂ ಹಾಗೂ ಅಳತೆ ಪುಸ್ತಕದಲ್ಲಿ ದಾಖಲಿಸಿರುವ ರಸ್ತೆಗಳಿಗೂ ಸಂಪೂರ್ಣ ವ್ಯತ್ಯಾಸ ಕಂಡುಬಂದಿದೆ. ಹೀಗಾಗಿ, 2.33 ಕೋಟಿ ರೂ.ಗಳಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ.
ಹಳೇ ಕಲ್ಲು; ಹೊಸ ಬಿಲ್: ಹೂಳು ತೆರವು, ಚರಂಡಿ ನಿರ್ಮಾಣ ಕಾಮಗಾರಿ ವೇಳೆ ಹಾಲಿ ಇರುವ ಬಿ.ಎಸ್. ಸ್ಪ್ಯಾಬ್ಗಳನ್ನೇ ಮರುಬಳಕೆ ಮಾಡಬೇಕು. ಹೆಚ್ಚುವರಿ ವೆಚ್ಚದ ಪ್ರಿಕಾಸ್ಟ್ ಸ್ಪ್ಯಾಬ್ಗಳನ್ನು ಬಳಸಬಾರದು. ಇದರಿಂದ ಪಾಲಿಕೆಗೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗುತ್ತದೆ ಎಂದು ಸೂಚಿಸಲಾಗಿದೆ. ಆದಾಗ್ಯೂ, ಕೆಲ ವಿಭಾಗಳಲ್ಲಿ ಕಲ್ಲುಚಪ್ಪಡಿಗಳ ಬದಲಿಗೆ ಪ್ರಿಕಾಸ್ಟ್ ಸ್ಪ್ಯಾಬ್ಗಳನ್ನು ಅಳವಡಿಸಲಾಗಿದೆ. ಹೊರ ತೆಗೆದ ಕಲ್ಲುಚಪ್ಪಡಿಗಳನ್ನು ಬೇರೆ ಕಾಮಗಾರಿಯಲ್ಲಿ ಬಳಸಿದ ಇಲ್ಲವೇ, ಎಂಎಎಸ್ ಲೆಕ್ಕಕ್ಕೆ ತೆಗೆದುಕೊಂಡಿರುವ ದಾಖಲೆಗಳಿಲ್ಲ. ಈ ಹಿನ್ನೆಲೆಯಲ್ಲಿ1.44 ಕೋಟಿ ರೂ. ಮೊತ್ತಕ್ಕೆ ಆಕ್ಷೇಪಣೆ ಸಲ್ಲಿಸಿ, 14.23 ಲಕ್ಷ ರೂ. ವಸೂಲಾತಿಗೆ ಶಿಫಾರಸು ಮಾಡಲಾಗಿದೆ.
ಪಾಲಿಕೆಯ ರಸ್ತೆ ಅಗಲೀಕರಣ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಇತರೆ ಕಾಮಗಾರಿಗಳನ್ನು ಕೈಗೊಳ್ಳಲು ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ವಿತರಿಸಿರುವ ಪ್ರಕರಣಗಳಲ್ಲಿಶೇ 10ರಷ್ಟು ಆದಾಯ ತೆರಿಗೆ ಕಡಿತ ಮಾಡಬೇಕಿತ್ತು. ಆದರೆ, ಶೇ 1ರಷ್ಟು ಆದಾಯ ತೆರಿಗೆ ಕಡಿತ ಮಾಡಿ ಪಾವತಿಸಲಾಗಿದೆ. ಕಡಿಮೆ ತೆರಿಗೆ ಕಡಿತ ಮಾಡಿರುವುದರಿಂದ ಪಾಲಿಕೆಗೆ ನಷ್ಟವಾಗಿದ್ದು, 46.71 ಲಕ್ಷ ರೂ. ವಸೂಲಿ ಮಾಡಬೇಕೆಂದು ಸೂಚನೆ ನೀಡಲಾಗಿದೆ. ಬೊಮ್ಮನಹಳ್ಳಿ ವಾರ್ಡ್ 175 ರಲ್ಲಿ ರಸ್ತೆ ಬದಿಯ ಚರಂಡಿಗಳಲ್ಲಿ ಹೂಳು ತೆರವುಗೊಳಿಸಿರುವುದಾಗಿ 34 ಡಿಸಿ ಬಿಲ್ಗಳಲ್ಲಿ33.55 ಲಕ್ಷ ರೂ.ಗಳನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಆಯುಕ್ತರ ಆದೇಶದಲ್ಲಿಪ್ರತಿ ತಿಂಗಳಿಗೆ 1 ಲಕ್ಷ ರೂ. ಮಾತ್ರ ಅನುವು ಮಾಡಿದ್ದರೂ ಗುತ್ತಿಗೆದಾರರಿಗೆ 33.55 ಲಕ್ಷ ರೂ. ಪಾವತಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ.
2018-19ನೇ ಸಾಲಿನ ದರಪಟ್ಟಿ ಜಾರಿಯಲ್ಲಿದ್ದರೂ ಅಳವಡಿಸಿಕೊಳ್ಳದೆ 2016-17ನೇ ಸಾಲಿನ ದರ ಪಟ್ಟಿ ಅಳವಡಿಸಿಕೊಂಡು ಪಾಲಿಕೆಯ ಟಿಇಸಿ ವಿಭಾಗದಿಂದ ಕಾಮಗಾರಿ ನಿರ್ವಹಿಸಲಾಗಿದೆ. ಸೈನ್ ಬೋರ್ಡ್ ಅಳವಡಿಕೆ ಕಾಮಗಾರಿಗೆ 2018ರ ನ.15ರಂದು ಟೆಂಡರ್ ಆಹ್ವಾನಿಸಿದ್ದು, 2018ರ ಅ.10ರಿಂದ ಅನ್ವಯವಾಗುವಂತೆ ದರ ಪಟ್ಟಿ ಅಳವಡಿಸಿಕೊಳ್ಳದೆ 2016-17ನೇ ಸಾಲಿನ ದರ ಪಟ್ಟಿಯನ್ನು ಅಳವಡಿಸಿಕೊಂಡು ಅಂದಾಜು ಪಟ್ಟಿ ತಯಾರಿಸಲಾಗಿದೆ. 2018-19ನೇ ಸಾಲಿನ ದರಪಟ್ಟಿಯಲ್ಲಿರುವ ಐಟಂಗಳ ದರಗಳನ್ನು ಅಳವಡಿಸದೆ ಅನುಮೋದಿತ ಡಾಟಾ ದರಗಳನ್ನು ಅಳವಡಿಸಿಕೊಂಡು ಹೆಚ್ಚುವರಿಯಾಗಿ 62.93 ಲಕ್ಷ ರೂ. ಪಾವತಿಸಿ ಅಕ್ರಮವೆಸಗಲಾಗಿದೆ.
ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿಎರಡು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜೇಷ್ಠತೆ ಉಲ್ಲಂಘಿಘಿಸಿ ಆಫ್ಲೈನ್ ಮೂಲಕ ಬಿಲ್ ಪಾವತಿಸಲಾಗಿದೆ. ಜೇಷ್ಠತಾ ಅವಧಿ ಉಲ್ಲಂಘಿಘಿಸಿ ಹಾಗೂ ಆಫ್ಲೈನ್ ಮುಖಾಂತರ ಪಾವತಿಯಾಗಿರುವ ಕಾಮಗಾರಿ ಬಿಲ್ಗಳು ಎರಡನೇ ಬಾರಿ ಆನ್ಲೈನ್ ಮುಖೇನ ಪಾವತಿಯಾಗದಿರುವ ಮತ್ತು ಜಾಬ್ ಸಂಖ್ಯೆಗಳನ್ನು ವಲ್ಲಭ್ ಸಾಫ್ಟ್ವೇರ್ನಲ್ಲಿಶಾಶ್ವತವಾಗಿ ಲಾಕ್ ಮಾಡಿಸಿರುವ ಬಗ್ಗೆ ಯಾವುದೇ ದೃಢೀಕೃತ ದಾಖಲೆಗಳನ್ನು ಹಾಜರುಪಡಿಸಿಲ್ಲ. ಈ ನ್ಯೂನತೆಗಳ ಕಾರಣ 14.14 ಕೋಟಿ ರೂ. ಮೊತ್ತಕ್ಕೆ ಆಕ್ಷೇಪಣೆ ಸಲ್ಲಿಸಲಾಗಿದೆ.
ಜಿಎಸ್ಟಿ/ಟಿಡಿಎಸ್ ಸಂಗ್ರಹದಲ್ಲಿ ನ್ಯೂನತೆ: ಸರಕು ಮತ್ತು ಸೇವಾ ಕಾಯಿದೆ ಅನ್ವಯ ಗುತ್ತಿಗೆದಾರರ ಬಿಲ್ಗಳಿಂದ ಜಿಎಸ್ಟಿ, ಟಿಡಿಎಸ್ ಕಡಿತ ಮಾಡಿ ಸರಕಾರಕ್ಕೆ ಪಾವತಿಸಬೇಕಿದೆ. ಆದರೆ, ಗುತ್ತಿಗೆದಾರರ ಬಿಲ್ಗಳಲ್ಲಿ ಕಡಿತ ಮಾಡಿ ಸಂಗ್ರಹಿಸಿಲ್ಲ. ಕೆಲವೊಂದು ಕಾರ್ಯಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆ, ಪ್ರಾಧಿಕಾರಗಳು ಪಡೆಯುವ ಶುದ್ಧ ಸೇವೆಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದ್ದರೂ, ಹೊರಗುತ್ತಿಗೆ ಸಂಸ್ಥೆಗಳಿಗೆ ಜಿಎಸ್ಟಿ ಪಾವತಿಸಿರುವುದೂ ಸೇರಿದಂತೆ ಇತರೆ ಪ್ರಮುಖ ನ್ಯೂನತೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ10.05 ಕೋಟಿ ರೂ. ಮೊತ್ತಕ್ಕೆ ಆಕ್ಷೇಪಣೆ ಸಲ್ಲಿಸಿ, 11.25 ಕೋಟಿ ರೂ. ವಸೂಲಾತಿಗೆ ಲೆಕ್ಕ ಪರಿಶೋಧನಾ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ರೇಣುಕಾಸ್ವಾಮಿ ಶವ ಸಾಗಿಸಲು ಆರೋಪಿಗಳಿಗೆ ನೆರವು; ಪಿಎಸ್ಐ ಬಂಧನ ಸಾಧ್ಯತೆ


