BBMP
Loading ...

images (5)

ನವದೆಹಲಿ: ಪ್ರಸ್ತುತ 2024ರ ಲೋಕಸಭೆ ಚುನಾವಣೆ ಫಲಿತಾಂಶ ಹಲವು ಸಂಗತಿಗಳಿಗಾಗಿ ನೆನಪಿನಲ್ಲುಳಿಯುವಂಥ ಫಲಿತಾಂಶ. ಬಿಜೆಪಿ ನೇತೃತ್ವದ ಎನ್ಡಿಎ ಸರಳ ಬಹುಮತ ಪಡೆದಿದ್ದರೂ ಬಿಜೆಪಿಯ ಹಿನ್ನಡೆಯಿಂದಾಗಿ ತೊಳಲಾಡುತ್ತಿದೆ. ಕಾಂಗ್ರೆಸ್ ಮುಂದಾಳತ್ವದ ಇಂಡಿ ಒಕ್ಕೂಟ ಉತ್ತಮ ಪ್ರದರ್ಶನ ನೀಡಿದ್ದರೂ ಅಧಿಕಾರದಿಂದ ವಂಚಿತವಾಗಿ ಕೈಕೈ ಹಿಚುಕಿಕೊಳ್ಳುವಂತಾಗಿದೆ.

ಒಂದೆಡೆ, ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದಕ್ಕಾಗಿ ಮತ್ತು ಬಿಜೆಪಿಯ ಅಹಂ ಅನ್ನು ಮುರಿದಿದ್ದಕ್ಕಾಗಿ ಇಂಡಿ ಒಕ್ಕೂಟ ಸಂತಸದಿಂದ ಬೀಗುತ್ತಿದ್ದರೆ, ಮತ್ತೊಂದೆಡೆ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಭಾರೀ ಹಿನ್ನಡೆ ಕಂಡಿದ್ದರೂ ಅಧಿಕಾರ ಉಳಿಸಿಕೊಳ್ಳುವತ್ತ ಎನ್ಡಿಎ ಹೆಜ್ಜೆ ಹಾಕುತ್ತ ಮುಖ ಬಾಡಿಸಿಕೊಂಡಿದ್ದರೂ ಅಂತಿಮ ನಗೆ ಬೀರಿದೆ.

ಒಂದು ಬಾರಿ ಸಂಪೂರ್ಣ ಭಾರತವನ್ನು ಗಮನಿಸಿ ನೋಡಿ, ಎಲ್ಲ ಪ್ರಮುಖ ಪಕ್ಷಗಳು, ಆಯಾ ಪಕ್ಷಗಳ ನಾಯಕರು, ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ, ಪಟಾಕಿ ಸಿಡಿಸಿ ನಲಿದಾಡುತ್ತಿದ್ದಾರೆ, ಸಿಹಿಯನ್ನು ಹಂಚಿ ನಗೆಬೀರುತ್ತಿದ್ದಾರೆ, ಡೋಲು ಬಾರಿಸುತ್ತಿದ್ದಾರೆ, ಕುಣಿದಾಡುತ್ತಿದ್ದಾರೆ, ಗುಲಾಲು ಎರಚಿ ರಂಗುರಂಗಿನಾಟ ಆಡುತ್ತಿದ್ದಾರೆ.

ಬಿಜೆಪಿಯ ಮತ್ತು ಮೋದಿಯ ನಿಂದಕರು, ಅವರ ನೀತಿಗಳನ್ನು ವಿರೋಧಿಸುವವರು, ಅವರ ಅಧಿಕಾರ ನಡೆಸುವ ವರಸೆಯನ್ನು ಟೀಕಿಸುವವರು, ‘ಅಬ್ ಕಿ ಬಾರ್, ಚಾರ್ ಸೌ ಪಾರ್ ಅನ್ನುತ್ತಿದ್ದ ನರೇಂದ್ರ ಮೋದಿಗೆ ಹೇಗಾಯಿತು ನೋಡು’ ಎಂದು ಹೊಟ್ಟೆಯಲ್ಲಿದ್ದ ಮಡುಗಟ್ಟಿದ್ದ ಆಕ್ರೋಶದ ಬೆಂಕಿಯನ್ನು ಉಗುಳಿ ಉದರ ಶಾಂತಿ ಮಾಡಿಕೊಳ್ಳುತ್ತಿದ್ದಾರೆ. ಅಂಥವರಲ್ಲಿ ಪ್ರಮುಖರು ಫುಲ್ ಟೈಂ ನಟ ಪಾರ್ಟ್ ಟೈಂ ರಾಜಕಾರಣಿ ಪ್ರಕಾಶ್ ರಾಜ್, ಮೋದಿ ಸೋಲನ್ನೇ ಜೀವನದ ಧ್ಯೇಯ ಅಂದುಕೊಂಡಿದ್ದ ಯುಟ್ಯೂಬರ್ ಧ್ರುವ್ ರಾಠಿ, ಬಿಜೆಪಿಯಲ್ಲಿ ಇದ್ದೂ ಇಲ್ಲದಂತಿರುವ ಹಿರಿಯ ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ.

ಹಾಗೆಯೆ, ರಾಹುಲ್ ಗಾಂಧಿಯನ್ನು ‘ಬಿಜೆಪಿಯ ಟ್ರಂಪ್ ಕಾರ್ಡ್’, ‘ಕೆಲಸಕ್ಕೆ ಬಾರದ ನಿರುದ್ಯೋಗಿ’ ಎಂದು ನಿಂದಿಸುತ್ತಿದ್ದ ಅವರ ಟೀಕಾಕಾರರು, ಅವರ ಭಾರತ್ ಜೋಡೋ ನ್ಯಾಯ ಯಾತ್ರಾದಿಂದ ಅವರು ಕಂಡುಕೊಂಡಿರುವ ಯಶಸ್ಸು, ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ಜೊತೆ ಸೇರಿ ಮಾಡಿರುವ ಕಮಾಲನ್ನು ನೋಡಿ ಬೆದರುಬೊಂಬೆಯಂತೆ ಅವಾಕ್ಕಾಗಿ ನಿಂತಿದ್ದಾರೆ.

ಕರ್ನಾಟಕದಲ್ಲೇ ತೆಗೆದುಕೊಳ್ಳಿ. ಇಪ್ಪತ್ತೆಂಟರಲ್ಲಿ ಇಪ್ಪತ್ತೈದು ಗೆದ್ದೇ ಗೆಲ್ಲುತ್ತೇವೆ ಎಂದು ‘ಮೋದಿ ಅಲೆ’ಯ ಮೇಲೆ ತೇಲುತ್ತ, ಮೇಲುತ್ತ ಅಸಲಿ ಪ್ರಚಾರದ ಪ್ರಾಮುಖ್ಯತೆಯನ್ನೇ ಮರೆತಿದ್ದ ಭಾರತೀಯ ಜನತಾ ಪಕ್ಷ ಹದಿನೇಳಕ್ಕಿಳಿದಿದ್ದರೂ, ಗ್ಯಾರಂಟಿಗಳ ಹರಿಕಾರ ಆಡಳಿತಾರೂಢ ಕಾಂಗ್ರೆಸ್ಸಿಗಿಂತ ಹೆಚ್ಚು ಸ್ಥಾನ ಗೆದ್ದಿದ್ದಕ್ಕಾಗಿ ಕಮಲದಂತೆ ಮುಖ ಅರಳಿಸಿಕೊಂಡಿದೆ. ಅದೇ ಸಮಯದಲ್ಲಿ, ಗ್ಯಾರಂಟಿಗಳನ್ನು ನಂಬಿಕೊಂಡು ಇಪ್ಪತ್ತೊಂದು ಸ್ಥಾನ ಗೆಲ್ಲುತ್ತೇವೆ ಎಂದು ಎದೆತಟ್ಟಿ ಹೇಳುತ್ತಿದ್ದ ಕಾಂಗ್ರೆಸ್ ಎರಡಂಕಿ ಕೂಡ ದಾಟದೆ ಒಂಬತ್ತು ಒಂಬತ್ತು ಒಂಬತ್ತು ತೋಳು ಹಳ್ಳಕ್ಕೆ ಬಿತ್ತು ಎಂಬಂತಾಗಿದೆ.

ಇನ್ನು ಉತ್ತರ ಪ್ರದೇಶದಲ್ಲಿ ಹದಿನೈದು ದಾಟುವ ಕನಸು ಕೂಡ ಕಾಣದ ಅಖಿಲೇಶ್ ಯಾದವ್ ಅವರು ಬಿಜೆಪಿಗಿಂತ ಹೆಚ್ಚು ಸ್ಥಾನ (38) ಗೆದ್ದು ಅಚ್ಚರಿಯಿಂದ ತಮ್ಮನ್ನೇ ತಾವು ಚಿಗುಟಿಕೊಂಡು ನೋಡುವಂತಾಗಿದೆ. ಕಳೆದ ಚುನಾವಣೆಯಲ್ಲಿ ಸೊನ್ನೆ ಸುತ್ತಿದ್ದ ಕಾಂಗ್ರೆಸ್ ಕೇವಲ 6 ಸೀಟು ಗೆದ್ದಿದ್ದರೂ ರಾಹುಲ್ ಗಾಂಧಿ ಅವರ ಗೆಲುವಿನಿಂದ ಮತ್ತು ಸ್ಮೃತಿ ಇರಾನಿ ಅವರನ್ನು ಆಘಾತಕಾರಿಯಾಗಿ ಸೋಲಿಸಿ ಕೇಕೇ ಹಾಕುತ್ತಿದೆ. ಉತ್ತರ ಪ್ರದೇಶದಲ್ಲಿ ಎಲ್ಲ 80 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಭಾರತೀಯ ಜನತಾ ಪಕ್ಷಕ್ಕೆ ಮುಸ್ಲಿಂ ಮತದಾರರು ಮರ್ಮಾಘಾತ ನೀಡಿದ್ದಾರೆ.

ಇವೆಲ್ಲವುಗಳ ಕಥೆ ಒಂದೆಡೆಯಾದರೆ, ಜೆಡಿ(ಯು) ನಾಯಕ ನಿತಿಶ್ ಕುಮಾರ್ ಮತ್ತು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ‘ಕಿಂಗ್ ಮೇಕರ್ಸ್’ ಆಗಿ ಮೆರೆದಾಡುತ್ತಿದ್ದಾರೆ. ಇವರಿಬ್ಬರು ಯಾವ ಪಕ್ಷ ಅಥವಾ ಒಕ್ಕೂಟ ಸೇರುತ್ತಾರೋ ಅವರಿಗೇ ಅಧಿಕಾರ. ಸದ್ಯಕ್ಕೆ, ನರೇಂದ್ರ ಮೋದಿ ಜೊತೆ ಕೈಕುಲುಕಿದ್ದ ಇವರಿಬ್ಬರೂ ರಾಹುಲ್ ಗಾಂಧಿ ಅವರಿಗೆ ಕೈಕೊಡು ಲಕ್ಷಣಗಳು ಹೆಚ್ಚಾಗಿ ಕಾಣಿಸುತ್ತಿವೆ. ಆದರೆ ಯಾರು ಬಲ್ಲರು? ರಾತ್ರೋರಾತ್ರಿ ಏನು ಬೇಕಾದರೂ ಸಂಭವಿಸಬಹುದು, ತಕ್ಕಡಿ ಎತ್ತ ಬೇಕತ್ತಾದರೂ ತೂಗಬಹುದು. ಯಾಕಂದ್ರೆ, ಇದು ರಾಜಕೀಯ ಸ್ವಾಮೀ.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಲೋಕಸಭೆ ಮತ್ತು ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಯ ಮಹೋತ್ಸವದಲ್ಲಿ ಇಡೀ ದೇಶ ಮಿಂದೆದ್ದಿದೆ. ದೇಶದ ಜನರು ಬಿಜೆಪಿ ನೇತೃತ್ವದ ಎನ್ಡಿಎಯಿಂದ ಅಧಿಕಾರ ಕಿತ್ತುಕೊಟ್ಟಂತೆ ಮಾಡಿ ಕೊಟ್ಟು ಮತ್ತು ಕಾಂಗ್ರೆಸ್ ಮುಂದಾಳತ್ವದ ಇಂಡಿ ಒಕ್ಕೂಟಕ್ಕೆ ಅಧಿಕಾರದ ಆಸೆ ತೋರಿಸಿ ಪ್ರಜಾಪ್ರಭುತ್ವದ ಪಾಠ ಕಲಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ, ಸೋಲಿಸುವವರು ಯಾರೂ ಇಲ್ಲ ಎಂದು ಮದದಿಂದ ಬೀಗುತ್ತಿದ್ದ ಡಿಕೆ ಸುರೇಶ್ ಅಂಥವರಿಗೆ ಸೋಲಿನ ರುಚಿ ತೋರಿಸಿದ್ದು ಪ್ರಜೆಯೇ ಪ್ರಭು ಎನ್ನುವುದಕ್ಕೆ ಕೇವಲ ಒಂದು ಉದಾಹರಣೆ ಮಾತ್ರ.

Leave a Reply

Your email address will not be published. Required fields are marked *