ಬೆಂಗಳೂರು: ‘ಬಿಲ್ ಪಾವತಿ ಮಾಡಲು ಮುಖ್ಯ ಎಂಜಿನಿಯರ್ ಸೇರಿದಂತೆ ಹಲವು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇರಿಸುತ್ತಿದ್ದಾರೆ’ ಎಂಬ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ಆರೋಪದ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಬಿಲ್ ಪಾವತಿಯನ್ನು ಸ್ಥಗಿತಗೊಳಿಸಲಾಗಿದೆ.
‘ಬಿಲ್ ಪಾವತಿಯಾಗಬೇಕು ಎಂಬ ಸಂದರ್ಭದಲ್ಲಿ ‘ರ್ಯಾಂಡಮೈಸೇಷನ್ ಚೆಕ್ಕಿಂಗ್’ ಹೆಸರಿನಲ್ಲಿ ಮತ್ತೆ ತಪಾಸಣೆ ಮಾಡಬೇಕು, ಗುಣಮಟ್ಟದ ವರದಿ ಸಲ್ಲಿಸಬೇಕು ಎಂದು ಮುಖ್ಯ ಎಂಜಿನಿಯರ್ಗಳು ತಕರಾರು ಎತ್ತುತ್ತಿದ್ದಾರೆ. ಲಂಚ ಕೊಟ್ಟರೆ ಯಾವ ಪರಿಶೀಲನೆಯೂ ಇಲ್ಲದೆ ಪಾವತಿಯಾಗುತ್ತಿದೆ’ ಎಂದು ಅವರು ದೂರಿದ್ದರು. ಈ ಬಗ್ಗೆ, ‘ಪ್ರಜಾವಾಣಿ’ಯಲ್ಲಿ ಮೇ 5ರಂದು ‘ಬಿಬಿಎಂಪಿ: ಬಿಲ್ ಪಾವತಿಗೆ ಲಂಚ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.
‘ಬಿಬಿಎಂಪಿ ಅನುದಾನದಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳೂ ಸೇರಿದಂತೆ ಯಾವ ಬಿಲ್ಗಳನ್ನೂ ಗುತ್ತಿಗೆದಾರರಿಗೆ ಸದ್ಯಕ್ಕೆ ಪಾವತಿ ಮಾಡಬೇಡಿ ಎಂದು ವಲಯಗಳ ಮುಖ್ಯ ಎಂಜಿನಿಯರ್ಗಳಿಗೆ ಪ್ರಧಾನ ಎಂಜಿನಿಯರ್ (ಇಐಸಿ) ಅವರು ಮೌಖಿಕವಾಗಿ ತಿಳಿಸಿದ್ದಾರೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.
ಸರ್ಕಾರದ ಅನುದಾನದ ಕಾಮಗಾರಿಗಳಿಗೆ ಶೇ 7.5 ಹಾಗೂ ಬಿಬಿಎಂಪಿ ಅನುದಾನದ ಕಾಮಗಾರಿಗಳ ಬಿಲ್ ಪಾವತಿಗೆ ಶೇ 3.5ರಷ್ಟು ಲಂಚ ನೀಡಬೇಕು’ ಎಂದು ಆರೋಪಿಸಲಾಗಿತ್ತು.
‘ಲಂಚ ಪಡೆಯುತ್ತಿರುವವರ ಮೇಲೆ ಕ್ರಮ ಕೈಗೊಳ್ಳದೆ, ಬಿಲ್ ಪಾವತಿಯನ್ನೇ ನಿಲ್ಲಿಸಿರುವುದು ಸರಿಯಲ್ಲ’ ಎಂದು ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


