Greater Bengaluru News9 : ಕಟ್ಟಡದ ಒಸಿ ನೀಡುವಾಗ ಷರತ್ತು ವಿಧಿಸದೆ ಆನಂತರ ರಸ್ತೆ ವಿಸ್ತರಣೆಗೆ ಉಚಿತವಾಗಿ ಭೂಮಿ ಬಿಟ್ಟುಕೊಡಬೇಕೆನ್ನುವ ಪಾಲಿಕೆಯ ಬೇಡಿಕೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅಲ್ಲದೆ, ”ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ-2024 ಜಾರಿಗೆ ಬರುವ ಮೊದಲು ಕಟ್ಟಡ ನಿರ್ಮಿಸಲು ಬೃಹತ್ ಬಿಬಿಎಂಪಿ ಕಾಯಿದೆಯಡಿ ಮಂಜೂರಾತಿ ನೀಡಿ ನಂತರದಲ್ಲಿ ಕಟ್ಟಡದ ಸ್ವಾಧೀನಾನುಭವ ಪ್ರಮಾಣಪತ್ರ ನೀಡುವ ವೇಳೆ ಮೂಲ ಮಂಜೂರಾತಿಯಲ್ಲಿ ಇಲ್ಲದ ಷರತ್ತನ್ನು ಪರಿಚಯಿಸುವುದಕ್ಕೆ ಕಾನೂನು ಅವಕಾಶ ನೀಡುವುದಿಲ್ಲ,” ಎಂದು ಸ್ಪಷ್ಟಪಡಿಸಿದೆ.
ಮಹದೇವಪುರ ವಲಯ- 1ರ ಬೆಂಗಳೂರು ಪೂರ್ವ ನಗರ ಪಾಲಿಕೆಯ ನಗರ ಯೋಜನಾ ಸಹಾಯಕ ನಿರ್ದೇಶಕ ನೀಡಿರುವ ಅನುಮೋದನಾ ಪತ್ರ ರದ್ದುಗೊಳಿಸಬೇಕೆಂದು ಕೋರಿ ಸರ್ಜಾಪುರ ರಸ್ತೆ ದೊಡ್ಡಕನ್ನಳ್ಳಿಯ ಕೆ.ಎನ್.ವೇಣುಗೋಪಾಲ ರೆಡ್ಡಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ನ್ಯಾಯಪೀಠ ಹೇಳಿದ್ದೇನು?
”ಯೋಜನೆಗೆ ಅನುಮೋದನೆ ನೀಡುವ ಅಥವಾ ಕಾಮಗಾರಿ ಆರಂಭಕ್ಕೆ ಪ್ರಮಾಣಪತ್ರ ನೀಡುವ ಹಂತದಲ್ಲಿ ಭೂಮಿ ಬಿಟ್ಟುಕೊಡುವ ಬಗ್ಗೆ ಒತ್ತಾಯಿಸದೇ ಇದ್ದಲ್ಲಿ, ನಂತರದ ಹಂತದಲ್ಲಿ’ಬಳಕೆ ಪ್ರಮಾಣಪತ್ರ’ ನೀಡುವಾಗ ಭೂಮಿ ಬಿಟ್ಟುಕೊಡುವಂತೆ ಷರತ್ತು ವಿಧಿಸಲು ಸಾಧ್ಯವಿಲ್ಲ. ಅಂತಹ ಷರತ್ತನ್ನು ಸಮರ್ಥಿಸಲು ನಿರ್ದಿಷ್ಟ ಶಾಸನಬದ್ಧ ನಿಬಂಧನೆಯ ಅಗತ್ಯವಿರುತ್ತದೆ,” ಎಂದು ನ್ಯಾಯಪೀಠ ಆದೇಶಿಸಿದೆ.
”ಮಾಸ್ಟರ್ಪ್ಲಾನ್ನಲ್ಲಿ (ಮಹಾ ಯೋಜನೆ) ಪ್ರಸ್ತಾಪಿಸಲಾದ ರಸ್ತೆ ವಿಸ್ತರಣೆ, ಕಡ್ಡಾಯವಾದ ಮತ್ತು ನಂತರದ ಹಂತದ ಭೂಮಿ ಬಿಟ್ಟುಕೊಡುವ ಬೇಡಿಕೆಯ ಮೂಲಕ ಭೂಮಿ ಪಡೆಯಲು ನಿಗಮಕ್ಕೆ ಅಧಿಕಾರ ನೀಡುವುದಿಲ್ಲ,” ಎಂದು ನ್ಯಾಯಾಲಯ ಹೇಳಿದೆ.
”ಅರ್ಜಿದಾರರು ಕೈಗೊಂಡಿರುವ ನಿರ್ಮಾಣ ಕಾರ್ಯವು ಮಂಜೂರಾದ ನಕ್ಷೆಗೆ ಅನುಗುಣವಾಗಿದೆಯೇ ಇಲ್ಲವೇ ಎಂಬುದನ್ನು ಮರು ಪರಿಶೀಲಿಸಬೇಕು. ಈ ಆದೇಶದ ದೃಢೀಕೃತ ಪ್ರತಿಯನ್ನು ಸ್ವೀಕರಿಸಿದ ದಿನಾಂಕದಿಂದ ಎಂಟು ವಾರಗಳಲ್ಲಿ’ವಾಸಯೋಗ್ಯ ಪ್ರಮಾಣಪತ್ರ’ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಒಂದು ವೇಳೆ ಯಾವುದಾದರೂ ಕಾರಣದಿಂದ ಅದನ್ನು ನೀಡಲು ಸಾಧ್ಯವಾಗದಿದ್ದಲ್ಲಿ ಅದಕ್ಕೆ ಸೂಕ್ತ ಕಾರಣಗಳನ್ನು ತಿಳಿಸಬೇಕು,” ಎಂದು ಮಹದೇವಪುರ ವಲಯ-1ರ ಬೆಂಗಳೂರು ಪೂರ್ವ ನಗರ ಪಾಲಿಕೆಯ ನಗರ ಯೋಜನಾ ಸಹಾಯಕ ನಿರ್ದೇಶಕರಿಗೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ
ಅರ್ಜಿದಾರರು ಬಿಬಿಎಂಪಿ 2024ರ ಫೆಬ್ರವರಿ 5ರಂದು ಅನುಮೋದಿಸಿದ ಯೋಜನೆಯನ್ವಯ 2,648.81 ಚದರ ಮೀಟರ್ ವಿಸ್ತೀರ್ಣದ ಆಸ್ತಿಯಲ್ಲಿವಾಣಿಜ್ಯ ಕಟ್ಟಡ ನಿರ್ಮಿಸಿದ್ದರು. ಅನುಮೋದನೆ ಮತ್ತು ನಂತರ ನೀಡಲಾದ ‘ಕಾಮಗಾರಿ ಆರಂಭದ ಪ್ರಮಾಣಪತ್ರ’ದಲ್ಲಿ ಭೂಮಿ ಬಿಟ್ಟು ಕೊಡುವ ಯಾವುದೇ ಷರತ್ತು ಇರಲಿಲ್ಲ. ಬಳಿಕ ಅರ್ಜಿದಾರರು ‘ಬಳಕೆ ಪ್ರಮಾಣಪತ್ರ’ಕ್ಕಾಗಿ ಅರ್ಜಿ ಸಲ್ಲಿಸಿದಾಗ ಬೆಂಗಳೂರು ಪೂರ್ವ ನಗರ ಪಾಲಿಕೆಯು, ‘ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ-2024ರ ಕಲಂ 226 ಉಲ್ಲೇಖಿಸಿ, ಪಕ್ಕದ ರಸ್ತೆಯನ್ನು 24 ಮೀಟರ್ನಿಂದ 45 ಮೀಟರ್ಗೆ ವಿಸ್ತರಿಸುವ ಉದ್ದೇಶಕ್ಕಾಗಿ 656.46 ಚದರ ಮೀಟರ್ ಭೂಮಿ ‘ಹಕ್ಕು ತ್ಯಜಿಸುವ ಪತ್ರ’ದ ಮೂಲಕ ಉಚಿತವಾಗಿ ಬಿಟ್ಟುಕೊಡಬೇಕು ಎಂಬ ಬೇಡಿಕೆ ಮುಂದಿಟ್ಟಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ನ ಮೊರೆ ಹೋಗಿದ್ದರು.


