Greater Bengaluru News9 : 2026ರ ಮೈಸೂರು ದಸರಾ (Mysuru Dasara) ಮಹೋತ್ಸವಕ್ಕೆ ಗಜಪಡೆ ಆಯ್ಕೆ ಪ್ರಕ್ರಿಯೆಗೆ ಅಧಿಕೃತ ಚಾಲನೆ ಸಿಕ್ಕಿದೆ.
ಹೌದು, ಈಗಾಗಲೇ ನಾಡಹಬ್ಬ ದಸರಾಗೆ ರಾಜ್ಯ ಸರ್ಕಾರ (Karnataka Govt) ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಜೊತೆಗೆ ಗಜಪಡೆ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದೆ. ಇದರ ಭಾಗವಾಗಿ ಕೊಡಗಿನ ಮತ್ತಿಗೋಡು ಮತ್ತು ದುಬಾರೆ ಆನೆ ಶಿಬಿರಗಳಲ್ಲಿ ಪಶುವೈದ್ಯರ ತಂಡ ಆನೆಗಳ ಸಮಗ್ರ ಆರೋಗ್ಯ ತಪಾಸಣೆ ನಡೆಸಿದ್ದು, ಈ ಬಾರಿ ಮೊದಲ ಬಾರಿಗೆ ಇಸಿಜಿ ಪರೀಕ್ಷೆಯನ್ನೂ ಮಾಡಲಾಗಿದೆ.
20ಕ್ಕೂ ಅಧಿಕ ಆನೆಗಳ ಆರೋಗ್ಯ ತಪಾಸಣೆ ನಡೆಸಿದ್ದು, ಆನೆಗಳ ರಕ್ತ ಮತ್ತು ಮಲದ ಮಾದರಿಗಳನ್ನು ಸಂಗ್ರಹಿಸಿ ವಿವಿಧ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ರವಾನಿಸಲಾಗಿದೆ. ಜೊತೆಗೆ ಹೆಣ್ಣಾನೆಗಳಿಗೆ ಅಲ್ಟ್ರಾಸೌಂಡ್ ಮೂಲಕ ಗರ್ಭಧಾರಣೆ ಪರೀಕ್ಷೆಯನ್ನೂ ನಡೆಸಲಾಗಿದೆ.
ವಿಶೇಷವಾಗಿ, ಈ ಸಲ ಮೊದಲ ಬಾರಿಗೆ ಆನೆಗಳ ಹೃದಯದ ಆರೋಗ್ಯ ಪರಿಶೀಲನೆಗಾಗಿ ಇಸಿಜಿ ಪರೀಕ್ಷೆ ನಡೆಸಿರುವುದು ಗಮನಾರ್ಹ. ಎಲ್ಲಾ ವೈದ್ಯಕೀಯ ಪರೀಕ್ಷೆಗಳ ವರದಿ ಬಂದ ಬಳಿಕ ಅಧಿಕಾರಿಗಳ ತಂಡ ಸೂಕ್ತ ಆನೆಗಳನ್ನು ಆಯ್ಕೆ ಮಾಡಿ, ತಾತ್ಕಾಲಿಕ ಪಟ್ಟಿಯನ್ನು ರಾಜ್ಯಮಟ್ಟದ ಸಮಿತಿಗೆ ಸಲ್ಲಿಸಲಿದೆ. ಈ ವರ್ಷ ವಿಜಯದಶಮಿ ಹಬ್ಬ 20 ದಿನ ತಡವಾಗಿ ನಡೆಯುತ್ತಿರುವ ಹಿನ್ನೆಲೆ, ದಸರಾ ಗಜಪಡೆ ಆಯ್ಕೆ ಪ್ರಕ್ರಿಯೆಯೂ ವಿಳಂಬವಾಗಿ ಆರಂಭವಾಗಿದೆ.


