Greater Bengaluru News9 : “ಜಿಬಿಎ ವ್ಯಾಪ್ತಿಯ ಪಾಲಿಕೆಗಳ ಚುನಾವಣೆ ಕೋರ್ಟ್ ನಿರ್ದೇಶನದ ಪ್ರಕಾರ ನಡೆಯುತ್ತದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಜಿಬಿಎ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ಜಿಬಿಎ ಚುನಾವಣೆ ಯಾವಾಗ ನಡೆಯಲಿದೆ ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಈ ವರ್ಷ ಜಿಬಿಎ ಆದಾಯದ ನಿರೀಕ್ಷೆ ಏನಿದೆ ಎಂದು ಕೇಳಿದಾಗ, “ಆದಾಯ ಬರಲಿ ನೋಡೋಣ. ನಾವು ಆದಾಯದ ಲೆಕ್ಕ ಹಾಕುತ್ತಿಲ್ಲ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕು ರಕ್ಷಣೆ ಮಾಡಬೇಕು. ‘ಚಿನ್ನ ಖರೀದಿ ಮಾಡಬೇಡಿ, ಇಂಧನ ಬಳಕೆ ಕಡಿಮೆ ಮಾಡಿ, ವಿದೇಶ ಪ್ರಯಾಣ ಬೇಡ’ ಎಂದು ಹೇಳುವ ಕಷ್ಟ ಕಾಲದಲ್ಲಿ ಜನರಿಗೆ ಒಳ್ಳೆಯದಾಗಬೇಕು” ಎಂದು ತಿಳಿಸಿದರು.
ದೇಶಕ್ಕೆ ದೊಡ್ಡ ಅಪಮಾನ
ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೀಟ್ ಪರೀಕ್ಷೆ ರದ್ದಾಗಿರುವ ಬಗ್ಗೆ ಕೇಳಿದಾಗ, “ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ದೇಶಕ್ಕೆ ದೊಡ್ಡ ಅಪಮಾನವಾಗಿದ್ದು, ಕೇಂದ್ರ ಸಚಿವರು ಹಾಗೂ ಸಂಸದರು ಇದಕ್ಕೆ ಉತ್ತರಿಸಬೇಕು. ಇದೇ ಪ್ರಕರಣ ನಮ್ಮ ರಾಜ್ಯದಲ್ಲಿ ಆಗಿದ್ದರೆ ಇಷ್ಟು ಹೊತ್ತಿಗೆ ನಮ್ಮ ಮೇಲೆ ತೀವ್ರ ವಾಗ್ದಾಳಿ ನಡೆಸುತ್ತಿದ್ದರು. ಅನೇಕ ಕನಸು ಕಟ್ಟಿಕೊಂಡು ಕಷ್ಟಪಟ್ಟಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶಗೊಂಡಿದ್ದಾರೆ” ಎಂದು ತಿಳಿಸಿದರು.


