Greater Bengaluru News9 : ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ವಿತರಣೆಗೆ ಸಂಬಂಧಿಸಿದಂತೆ ಜನರಲ್ಲಿರುವ ಗೊಂದಲಗಳ ನಿವಾರಣೆಗೆಂದೇ ಸಹಾಯವಾಣಿಯನ್ನು ( Helpline Number ) ತೆರೆದಿರುವುದಾಗಿ ಬೆಂಗಳೂರಿನ ಅನೌಪಚಾರಿಕ ಪಡಿತರ ಪ್ರದೇಶದ ಅಪರ ನಿರ್ದೇಶಕರಾದ ಪಾತರಾಜು ಅವರು ತಿಳಿಸಿದ್ದಾರೆ.
ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡೆಸುತ್ತಿರುವ ಯುದ್ಧವು ಭಾರತದ ಅಡುಗೆ ಮನೆಗಳ ಮೇಲೆ ಪ್ರಭಾವ ಬೀರಿದೆ. ತಮ್ಮ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ದಾಳಿಗೆ ಪ್ರತೀಕಾರವಾಗಿ ಇರಾನ್, ಹಾರ್ಮುಜ್ ಜಲಸಂಧಿಯನ್ನು ಬ್ಲಾಕ್ ಮಾಡಿದೆ. ಇದೇ ಜಲಸಂಧಿಯಿಂದ ಜಾಗತಿಕವಾಗಿ ಇಂಧನ ಪೂರೈಕೆಯಾಗುತ್ತಿದೆ. ಅಂದರೆ, ತೈಲ ತುಂಬಿದ ಹಡುಗುಗಳು ಇದೇ ಜಲಸಂಧಿಯನ್ನು ಹಾದು ಹೋಗುತ್ತವೆ. ಇದೀಗ ಬ್ಲಾಕ್ ಮಾಡಿರುವ ಕಾರಣ ತೈಲ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಿದ್ದು, ಭಾರತದ ಮೇಲೆ ಪರಿಣಾಮ ಬೀರುತ್ತಿದೆ.
ಸದ್ಯ ಭಾರತದಲ್ಲಿ ತೈಲ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಯುದ್ಧವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಕಾಳಸಂತೆಯಲ್ಲಿ ಅತಿ ಹೆಚ್ಚಿನ ಬೆಲೆಗೆ ಸಿಲಿಂಡರ್ಗಳ ಮಾರಾಟಕ್ಕಿಳಿದಿದ್ದಾರೆ. ಒಟ್ಟಾರೆ, ಎಲ್ಪಿಜಿ ವಿತರಣೆಯಲ್ಲಿ ಕೃತಕ ಅಭಾವವನ್ನು ಸೃಷ್ಟಿ ಮಾಡಿದ್ದಾರೆ. ಎಲ್ಪಿಜಿ ಸಿಲಿಂಡರ್ ಸಿಗುವುದಿಲ್ಲ ಎಂಬ ಭೀತಿಯನ್ನು ಜನರಲ್ಲಿ ಹರಡುತ್ತಿದ್ದಾರೆ.
ಕೋಟ್ಯಂತರ ಮಂದಿಗೆ ಆಸರೆಯಾಗಿರುವ ಬೆಂಗಳೂರಿನಲ್ಲೂ ಎಲ್ಪಿಜಿ ಆತಂಕ ಶುರುವಾಗಿದ್ದು, ಜನರು ಚಿಂತೆಗೀಡಾಗಿದ್ದಾರೆ. ಆದರೆ, ಇನ್ನು ಮುಂದೆ ಆ ಚಿಂತೆ ಮಾಡಬೇಕಾಗಿಲ್ಲ. ಏಕೆಂದರೆ, ಅದರ ನಿವಾರಣೆಗೆಂದೇ ಸಂಬಂಧಪಟ್ಟ ಇಲಾಖೆ ಸಹಾಯವಾಣಿಯನ್ನು ತೆರೆದಿದೆ.
ಹೌದು, ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶ ವ್ಯಾಪ್ತಿಗೆ ಸಂಬಂಧಿಸಿದಂತೆ ಸಹಾಯವಾಣಿಯನ್ನು ತೆರೆಯಲಾಗಿದೆ. ಗ್ರಾಹಕರು ಮತ್ತು ಸಾರ್ವಜನಿಕರು ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ವಿತರಣೆಗೆ ಸಂಬಂಧಪಟ್ಟಂತೆ ಯಾವುದೇ ದೂರುಗಳಿದ್ದರೂ 080 22264966 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಅನೌಪಚಾರಿಕ ಪಡಿತರ ಪ್ರದೇಶದ ಅಪರ ನಿರ್ದೇಶಕರಾದ ಪಾತರಾಜು ತಿಳಿಸಿದ್ದಾರೆ.


