Greater Bengaluru News9 : ನಗರದದಲ್ಲಿ ಲಂಚಾವಾತಾರ ಮೀತಿ ಮೀರಿದ್ದು, ಕುಂಬಳಗೋಡು ಪೊಲೀಸ್ ಠಾಣೆ ಸಿಬ್ಬಂದಿ ವಿರುದ್ಧ ಗಂಭೀರ ಲಂಚ ಹಾಗೂ ಬೆದರಿಕೆ ಆರೋಪ ಕೇಳಿಬಂದಿದೆ. ಸುಳ್ಳು ಕೇಸ್ ಬುಕ್ ಮಾಡುವುದಾಗಿ ಬೆದರಿಸಿ 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕಾರ್ತೀಕ್ ಎಂಬ ಯುವಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಕುಂಬಳಗೋಡು ಠಾಣಾ ವ್ಯಾಪ್ತಿಯ ಎಂ.ಆರ್. ಬಾರ್ನಲ್ಲಿ ರಾಕೇಶ್, ಗೋಪಿ ಮತ್ತು ಸ್ವಾಮಿ ಎಂಬ ಮೂವರು ಕುಡಿದ ವೇಳೆ ಕ್ಯಾಷಿಯರ್ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಕ್ಯಾಷಿಯರ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು ಮೂವರನ್ನೂ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಮೂವರು ಯುವಕರನ್ನು ಮೂರು ದಿನಗಳ ಕಾಲ ಅಕ್ರಮವಾಗಿ ಠಾಣೆಯಲ್ಲಿ ಇರಿಸಿಕೊಂಡು ಹಣ ತರಿಸುವಂತೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಈ ವೇಳೆ ಪೊಲೀಸರು ಹಲ್ಲೆ ನಡೆಸಿದ್ದಾರೆ.
ಪೊಲೀಸರ ಕಿರುಕುಳ ತಾಳಲಾರದೇ ರಾಕೇಶ್ ತನ್ನ ಸ್ನೇಹಿತ ಕಾರ್ತೀಕ್ಗೆ ಕರೆಮಾಡಿದ್ದಾನೆ. ಕಾರ್ತೀಕ್ ಠಾಣೆಗೆ ತೆರಳಿ ಇನ್ಸ್ಪೆಕ್ಟರ್ ಮಂಜುನಾಥ್ ಹೂಗಾರ್ ರನ್ನು ಭೇಟಿಯಾಗಲು ಯತ್ನಿಸಿದ್ದಾನೆ. ಈ ವೇಳೆ “ನೀನೇ ಸುಪಾರಿ ಕೊಟ್ಟಿದ್ದೀಯಾ, ನಿನ್ನ ಮೇಲೆ ಕೇಸ್ ಮಾಡ್ತೀವಿ” ಎಂದು ಬೆದರಿಕೆ ಹಾಕಿ, ಕೇಸ್ ಮಾಡಬಾರದೆಂದರೆ 10 ಲಕ್ಷ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
“ನಾನು ಯಾವುದೇ ತಪ್ಪು ಮಾಡಿಲ್ಲ, ಯಾಕೆ ಹಣ ಕೊಡಬೇಕು?” ಎಂದು ಕಾರ್ತೀಕ್ ಪ್ರಶ್ನಿಸಿದ್ದಾನೆ. ನಂತರ ಠಾಣೆಯಿಂದ ಹೊರಬಂದು ವಕೀಲರನ್ನು ಸಂಪರ್ಕಿಸಿದ್ದಾನೆ.
ವಕೀಲ ವರ್ಷೀತ್ ರೆಡ್ಡಿ ಆರೋಪಿಗಳ ಪರ ವಕಾಲತ್ತು ವಹಿಸಲು ಠಾಣೆಗೆ ತೆರಳಿದಾಗ, ಒಬ್ಬೊಬ್ಬರಿಗೆ 50 ಸಾವಿರ ರೂಪಾಯಿ ಲಂಚ ನೀಡಬೇಕು ಎಂದು ಆಗ್ರಹಿಸಲಾಗಿದೆ ಎನ್ನಲಾಗಿದೆ. ಕೊನೆಗೆ ತಲಾ 30 ಸಾವಿರ ರೂಪಾಯಿ ಪಡೆದು ಬಿಡಲಾಗಿದೆ.
ವಕೀಲರು ಲಂಚ ಬೇಡಿಕೆಯ ವಿಡಿಯೋ ಮತ್ತು ಆಡಿಯೋ ದಾಖಲಿಸಿಕೊಂಡಿದ್ದು, ಅದನ್ನು ಆಧಾರವನ್ನಾಗಿ ಮಾಡಿಕೊಂಡು ಕಾರ್ತೀಕ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಕುಂಬಳಗೋಡು ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಹೂಗಾರ್ ಸೇರಿದಂತೆ ಸಿಬ್ಬಂದಿ ವಿರುದ್ಧ ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೊಂದ ಯುವಕ ಆಗ್ರಹಿಸಿದ್ದಾರೆ.


