BBMP
Loading ...

Electric Bill

Greater Bengaluru News9 : ಬೇಸಿಗೆ ಆರಂಭವಾಗುತ್ತಿದ್ದಂತೆ ರಾಜ್ಯದ ಜನರಿಗೆ ಮತ್ತೆ ವಿದ್ಯುತ್ ಬಿಲ್ ಶಾಕ್ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ವಿದ್ಯುತ್ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸಿದ್ಧತೆ ನಡೆಸುತ್ತಿದ್ದು, ಶೀಘ್ರದಲ್ಲೇ ರಾಜ್ಯಾದ್ಯಂತ ವಿದ್ಯುತ್ ದರ ಏರಿಕೆ ಜಾರಿಯಾಗುವ ಲಕ್ಷಣಗಳು ಕಾಣಿಸುತ್ತಿವೆ.

ರಾಜ್ಯದ ವಿವಿಧ ಎಸ್ಕಾಂಗಳು ವಿದ್ಯುತ್ ಖರೀದಿ ವೆಚ್ಚ, ನಿರ್ವಹಣಾ ವೆಚ್ಚ ಹಾಗೂ ನಷ್ಟದ ನೆಪವೊಡ್ಡಿ ದರ ಏರಿಕೆ ಮಾಡುವಂತೆ ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಸಿವೆ. ಈ ಮನವಿಗಳನ್ನು ಪರಿಗಣಿಸಿರುವ ಕೆಇಆರ್ಸಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ವಿದ್ಯುತ್ ದರ ಪರಿಷ್ಕರಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.

ಎಸ್ಕಾಂಗಳ ಪ್ರಕಾರ, ವಿದ್ಯುತ್ ಖರೀದಿ ವೆಚ್ಚ ಹೆಚ್ಚಿರುವುದು, ಸಾಲದ ಬಡ್ಡಿ, ಕಾರ್ಯಾಚರಣೆ ವೆಚ್ಚ ಮತ್ತು ನಷ್ಟದಿಂದಾಗಿ ಪ್ರಸ್ತುತ ದರದಲ್ಲಿ ವಿದ್ಯುತ್ ಪೂರೈಕೆ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಯೂನಿಟ್‌ಗೆ ಸರಾಸರಿ 67 ಪೈಸೆ ಹೆಚ್ಚಳ ಮಾಡುವಂತೆ ಎಸ್ಕಾಂಗಳು ಮನವಿ ಮಾಡಿಕೊಂಡಿವೆ. ಈ ಪ್ರಸ್ತಾವನೆಗೆ ಕೆಇಆರ್ಸಿ ಸ್ಪಂದಿಸಿದ್ದು, ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಕೆಇಆರ್ಸಿ ಕಚೇರಿಯಲ್ಲಿ ಅಭಿಪ್ರಾಯ ಸಂಗ್ರಹ
ಬೆಂಗಳೂರಿನ ಕೆಇಆರ್ಸಿ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಸಭೆಗಳು ನಡೆಯುತ್ತಿವೆ. ಇಂದು ವಿಶೇಷವಾಗಿ BESCOM ಪ್ರಸ್ತಾವನೆಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹ ನಡೆಯಿತು. ಕೆಇಆರ್ಸಿ ಅಧ್ಯಕ್ಷ ರವಿಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ಹಾಗೂ ಹಿರಿಯ ಅಧಿಕಾರಿಗಳ ತಂಡ ಭಾಗವಹಿಸಿತು.

ಸಭೆಯಲ್ಲಿ ಬೆಸ್ಕಾಂ ತನ್ನ ಆರ್ಥಿಕ ನಷ್ಟ, ಆದಾಯ-ವೆಚ್ಚ ಅಂತರ ಮತ್ತು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಕೆಇಆರ್ಸಿಗೆ ಮನವರಿಕೆ ಮಾಡಿಕೊಟ್ಟಿತು. ಸಾರ್ವಜನಿಕರಿಂದ ಬಂದ ಸಲಹೆ, ಆಕ್ಷೇಪಣೆ ಮತ್ತು ಅಭಿಪ್ರಾಯಗಳನ್ನು ಆಲಿಸಿ, ನಂತರವೇ ದರ ಪರಿಷ್ಕರಣೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೆಇಆರ್ಸಿ ಸ್ಪಷ್ಟಪಡಿಸಿದೆ.

ಗೃಹಜ್ಯೋತಿ ನಡುವೆ ದರ ಏರಿಕೆ?
ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಲ್ಲಿರುವ ನಡುವೆಯೇ ವಿದ್ಯುತ್ ದರ ಏರಿಕೆ ಸಾಧ್ಯತೆ ಚರ್ಚೆಗೆ ಕಾರಣವಾಗಿದೆ. ಉಚಿತ ವಿದ್ಯುತ್ ಯೋಜನೆಯ ಹೊರತಾಗಿ ಹೆಚ್ಚುವರಿ ಬಳಕೆಗೆ ಪ್ರತಿ ಯೂನಿಟ್ ಆಧಾರದ ಮೇಲೆ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ದರ ಏರಿಕೆ ತುಸು ದುಬಾರಿಯಾಗುವ ಲಕ್ಷಣಗಳಿದ್ದು, ಮಾರ್ಚ್ ಅಥವಾ ಏಪ್ರಿಲ್‌ನಿಂದಲೇ ಹೊಸ ದರ ಜಾರಿಯಾಗಬಹುದೆಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.

ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಎಲ್ಲ ಅಂಶಗಳನ್ನು ಅಳೆದು ತೂಗಿ ವಿದ್ಯುತ್ ದರ ಪರಿಷ್ಕರಣೆ ಕುರಿತು ಕೆಇಆರ್ಸಿ ಅಂತಿಮ ಘೋಷಣೆ ಮಾಡುವ ನಿರೀಕ್ಷೆಯಿದೆ. ದರ ಏರಿಕೆ ಅನಿವಾರ್ಯವೇ ಅಥವಾ ಎಷ್ಟು ಪ್ರಮಾಣದಲ್ಲಿ ಜಾರಿಯಾಗಲಿದೆ ಎಂಬುದು ಮುಂದಿನ ಕೆಲ ದಿನಗಳಲ್ಲಿ ಸ್ಪಷ್ಟವಾಗಲಿದೆ. ಒಟ್ಟಾರೆ, ಬೇಸಿಗೆಯ ಬಿಸಿಲಿನ ಜೊತೆ ವಿದ್ಯುತ್ ಬಿಲ್ ಬಿಸಿಯೂ ರಾಜ್ಯದ ಜನರನ್ನು ತಟ್ಟುವ ಸಾಧ್ಯತೆ ಹೆಚ್ಚಾಗಿದ್ದು, ಕೆಇಆರ್ಸಿಯ ಅಂತಿಮ ತೀರ್ಮಾನಕ್ಕಾಗಿ ಜನರು ಕಾದು ನೋಡಬೇಕು.

Leave a Reply

Your email address will not be published. Required fields are marked *