Greater Bengaluru News9 : ಅಭಿವೃದ್ಧಿ ಹೆಸರಿನಲ್ಲಿ ತನ್ನ ಜಮೀನಿನಲ್ಲಿದ್ದ 30 ಮರಗಳನ್ನು ಕಡಿದುಕೊಂಡು, ನ್ಯಾಯಾಲಯದ ಆದೇಶವಿದ್ದರೂ ಪರಿಹಾರ ನೀಡದ ಸರ್ಕಾರದ ವಿರುದ್ಧ ರೈತೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ವಿಶುಕುಮಾರ್ ಎಂಬ ರೈತ, ಪ್ರತಿಭಟನೆಯ ಭಾಗವಾಗಿ ವಿಧಾನಸೌಧದ ಮುಂದೆ ಇದ್ದ ಶ್ರೀಗಂಧದ ಮರವನ್ನು ಕಡಿದು ಹಾಕಿರುವ ಘಟನೆ ನಡೆದಿದೆ.
ವಿಶುಕುಮಾರ್ ಅವರ ಹೇಳಿಕೆಯಂತೆ, ಹೆದ್ದಾರಿ ವಿಸ್ತರಣೆ ಕಾರಣ ನೀಡಿ ತಮ್ಮ ಜಮೀನಿನಲ್ಲಿದ್ದ ಸುಮಾರು 30 ಮರಗಳನ್ನು ಅರಣ್ಯ ಇಲಾಖೆ ಕಡಿದು ಹಾಕಿದೆ. ಆ ಮರಗಳನ್ನು ಅವರು ತಮ್ಮ ಮಕ್ಕಳ ನೆನಪಿಗಾಗಿ ನೆಟ್ಟಿದ್ದರು. ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶ ನೀಡಿದ್ದರೂ ಸಹ, ಇದುವರೆಗೆ ಯಾವುದೇ ಹಣ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶಗೊಂಡಿರುವ ವಿಶುಕುಮಾರ್, “30 ಮರಗಳನ್ನು ಕಡಿಯಲಾಗಿದೆ, ಅದಕ್ಕೆ ನ್ಯಾಯ ಸಿಗದಿದ್ದರೆ ನಾನು 300 ಮರಗಳನ್ನು ಕಡಿಯುತ್ತೇನೆ” ಎಂದು ಎಚ್ಚರಿಕೆ ನೀಡಿದ್ದಾರೆ. ಈ ಘಟನೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ರೈತರ ಮೇಲಿನ ಅನ್ಯಾಯದ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.


