Greater Bengaluru News9 : ಮೆಜೆಸ್ಟಿಕ್ ಮತ್ತು ಮಂತ್ರಿ ಮಾಲ್ ನಡುವೆ ಬಿ-ಸ್ಮೈಲ್ ಅವರು ವೈಟ್ ಟ್ಯಾಪಿಂಗ್ ಕಾಮಗಾರಿ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚಾರ ಬದಲಾವಣೆ ಮಾಡಿ ನಗರ ಟ್ರಾಫಿಕ್ ಪೊಲೀಸರು ಸೂಚನೆ ನೀಡಿದ್ದಾರೆ. ರಸ್ತೆ ಬಂದ್ ಆಗಿರೋದರಿಂದ ಈ ಮಾರ್ಗದಲ್ಲಿ ಪ್ರಯಾಣಿಸುವವರ ಪ್ರಯಾಣದ ಸಮಯದ ಕೂಡ ಹೆಚ್ಚಾಗಿದೆ.
ಮೆಜೆಸ್ಟಿಕ್ನಿಂದ ಮಂತ್ರಿ ಮಾಲ್ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯನ್ನು ವೈಟ್ಟಾಪಿಂಗ್ ಕಾಮಗಾರಿಗಾಗಿ ಮೂರು ತಿಂಗಳ ಕಾಲ ಸಂಪೂರ್ಣವಾಗಿ ಮುಚ್ಚಲಾಗಿದೆ. ಮೆಜೆಸ್ಟಿಕ್ ಮತ್ತು ಮಲ್ಲೇಶ್ವರಂ ನಡುವೆ ಪ್ರಯಾಣಿಸುವ ಪ್ರಯಾಣಿಕರು ಮುಂದಿನ ಮೂರು ತಿಂಗಳು ಸಮಸ್ಯೆ ಎದುರಿಸಬೇಕಿದೆ.
ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಮೆಜೆಸ್ಟಿಕ್ನಿಂದ ಮಂತ್ರಿ ಮಾಲ್ವರೆಗಿನ ರಸ್ತೆಯನ್ನು ವೈಟ್ಟಾಪಿಂಗ್ ಮಾಡುವ ಕಾಮಗಾರಿಯನ್ನು ನಡೆಸುತ್ತಿದೆ. ಕಾಮಗಾರಿಯ ಅವಧಿಯಲ್ಲಿ ರಸ್ತೆ ಸಂಪೂರ್ಣ ಬಂದ್ ಆಗಲಿದೆ ಹಾಗೂ ಈ ಕಾಮಗಾರಿ ಮುಂದಿನ ಮೂರು ತಿಂಗಳು ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಗ ಬದಲಾವಣೆ: ರಸ್ತೆ ಬಂದ್ ಆದ ಕಾರಣ ಮೆಜೆಸ್ಟಿಕ್ನಿಂದ ಬರುವ ವಾಹನಗಳನ್ನು ಒಕಲೀಪುರಂ ಅಂಡರ್ಪಾಸ್ ಮತ್ತು ಸುಜಾತಾ ಸರ್ಕಲ್ ಮಾರ್ಗವಾಗಿ ಮಲ್ಲೇಶ್ವರಂಗೆ ಪ್ರವೇಶಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಮಾರ್ಗ ಬದಲಾವಣೆಯಿಂದ ಮೆಜೆಸ್ಟಿಕ್ ಪ್ರದೇಶದಲ್ಲಿ, ವಿಶೇಷವಾಗಿ ಪೀಕ್ ಅವರ್ಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುವ ನಿರೀಕ್ಷೆ ಇದೆ.
ಕಾಮಗಾರಿ ಆರಂಭವಾಗುವ ಮುನ್ನ ಮೆಜೆಸ್ಟಿಕ್ ನಿಂದ ಮಂತ್ರಿಮಾಲ್ ಮಾರ್ಗವಾಗಿ ಜಸ್ಟ್ 10 ನಿಮಿಷದಲ್ಲಿ ಮಲ್ಲೇಶ್ವರಂ ತಲುಪಬಹುದಿತ್ತು. ಆದರೆ ಈಗ ರಸ್ತೆ ಬಂದ್ ಆಗಿರುವ ಕಾರಣ ಈ ಪ್ರಯಾಣದ ಸಮಯ ಪೀಕ್ ಅವರ್ ಗಳಲ್ಲಿ ಒಂದು ಗಂಟೆವರೆಗೂ ಹೆಚ್ಚಾಗಿದೆ. ಇತರೇ ಸಮಯದಲ್ಲಿ ಕನಿಷ್ಠ 30 ನಿಮಷಗಳನ್ನು ಪ್ರಯಾಣಿಕರು ವ್ಯಯಿಸಬೇಕು.
ಟ್ರಾಫಿಕ್ ಆಗೋದನ್ನು ಕಡಿಮೆ ಮಾಡಿ, ವಾಹನ ಸವಾರರಿಗೆ ಮಾರ್ಗ ಬದಲಾವಣೆ ಆಗಿರುವ ಬಗ್ಗೆ ಮಾಹಿತಿ ನೀಡಲು ಸ್ಥಳದಲ್ಲಿ ಟ್ರಾಫಿಕ್ ಪೊಲೀಸರ ನಿಯೋಜನೆ ಅತ್ಯಗತ್ಯವಾಗಿದೆ. ಏನೇ ಆದರೂ ಈ ಮಾರ್ಗದಲ್ಲಿ ಸಂಚರಿಸುವ ಸವಾರರು ಮುಂದಿನ ಮೂರು ತಿಂಗಳು ಟ್ರಾಫಿಕ್ ಸಮಸ್ಯೆ ಎದುರಿಸಲು ಸಿದ್ಧರಾಗಲೇಬೇಕಿದೆ.
ವೈಟ್ ಟ್ಯಾಪಿಂಗ್ ಕಾಮಗಾರಿಯನ್ನು ಆಮೆಗತಿಯಲ್ಲಿ ಮಾಡದೆ ತ್ವರಿತ ಗತಿಯಲ್ಲಿ ಮುಗಿಸಬೇಕು ಎಂದು ಸ್ಥಳೀಯರು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ. ಸದ್ಯ ನಿತ್ಯ ಟ್ರಾಫಿಕ್ ಪೊಲೀಸರ ಜೊತೆ ಜನರು ಕಿರಿ ಕಿರಿ ಮಾಡುವ ದೃಶ್ಯ ಕಂಡು ಬರುತ್ತಿದ್ದು, ಸಂಪಿಗೆಹಳ್ಳಿ ರಸ್ತೆ ಒಂದು ಕಡೆ ತಾತ್ಕಾಲಿಕ ಬಂದ್ ಮಾಡಲಾಗಿದೆ. ಒಂದು ಕಡೆ ರಸ್ತೆ ಬಂದ್ ಆಗಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


